ನಮ್ಮ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಮಾತನಾಡುವ ಭರದಲ್ಲಿ ಅವಾಸ್ತವಿಕ ಸಂಗತಿಗಳನ್ನು ಹೇಳಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ. ಒಬ್ಬ ರಾಜಕಾರಣಿ, ‘ರಾಜ್ಯದ 6.5 ಕೋಟಿ ಜನರ ಆಶಯದಂತೆ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತದೆ, ಅಡ್ಡಿಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ’ ಎಂದು ಹೇಳಿದ್ದರು. ರಾಜ್ಯದ ಒಟ್ಟು ಜನಸಂಖ್ಯೆಯ ಆಶಯವೇ ಅದು ಎಂದಾದಲ್ಲಿ ಅದಕ್ಕೆ ಅಡ್ಡಿಪಡಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮತ್ತೊಬ್ಬ ರಾಜಕಾರಣಿ, ‘ರಾಜ್ಯದ 6.5 ಕೋಟಿ ಮತದಾರರು ನಮ್ಮ ಪಕ್ಷಕ್ಕೆ ಮತಹಾಕಿ ಗೆಲ್ಲಿಸಿದ್ದಾರೆ’ ಎಂದು ಹೇಳಿದ್ದಾರೆ. ಇದು ಸರಿಯೆಂದಾದಲ್ಲಿ ಶಾಲಾ ಮಕ್ಕಳೂ ಮತ ಚಲಾಯಿಸಿದ್ದಾರೆಯೇ? ಚುನಾವಣೆಯಲ್ಲಿ ಇತರ ಪಕ್ಷಗಳು ಸ್ಪರ್ಧಿಸಿರಲಿಲ್ಲವೇ? ಇನ್ನು ಮುಂದಾದರೂ ರಾಜಕಾರಣಿಗಳು ಭಾಷಣ ಮಾಡುವಾಗ ಎಚ್ಚರ ವಹಿಸುವುದು ಒಳಿತು.
-ಜಿ.ನಾಗೇಂದ್ರ, ಕುದುರೆಮುಖ