ನವದೆಹಲಿ: ಕುತೂಹಲದಿಂದ ಕೂಡಿದ್ದ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಷಿಪ್ನಲ್ಲಿ ಸಂದೀಪ್ ತೋಮರ್, ರಿತು ಪೊಗಟ್, ಬಜರಂಗ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಚಾಂಪಿಯನ್ಷಿಪ್ನ 57ಕೆ.ಜಿ ವಿಭಾಗದ ಫೈನಲ್ನಲ್ಲಿ ಉತ್ಕರ್ಷ್ ಕೆಲೆ ವಿರುದ್ಧ ಗೆಲುವು ದಾಖಲಿಸಿದ ಸಂದೀಪ್ ತೋಮರ್ ಚಿನ್ನಕ್ಕೆ ಕೊರಳೊಡ್ಡಿದರು. ಇದಕ್ಕೂ ಮೊದಲು ನಡೆದ ಉತ್ಕರ್ಷ್ ಮತ್ತು ಅಮಿತ್ ಕುಮಾರ್ ನಡುವಿನ ಸೆಮಿಫೈನಲ್ ಪಂದ್ಯ ತೀವ್ರ ಕೂತೂಹಲ ಗರಿಗೆದರಿಸಿತ್ತು.
ಉತ್ಕರ್ಷ್ ಅನುಭವಿ ಆಟಗಾರ ಅಮಿತ್ಗೆ ಆಘಾತ ನೀಡಿದರು. ಫೈನಲ್ ನಲ್ಲಿ ಸಂದೀಪ್ ತೋಮರ್ಗೆ ಉತ್ತಮ ಪೈಪೋಟಿ ನೀಡಲು ವಿಫಲರಾದರು. ಬಜರಂಗ್ 65ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ರಾಹುಲ್ ಮಾನ್ ಎದುರು ಜಯದಾಖಲಿಸಿ ಚಿನ್ನ ಗೆದ್ದರು. ಸೆಮಿಫೈನಲ್ನಲ್ಲಿ ಅವರು ರಜನೀಶ್ ಮೇಲೆ ಗೆಲುವು ಪಡೆದಿದ್ದರು.
74ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಹರಿಯಾಣದ ಜಿತೇಂದರ್ ಚಿನ್ನ ಗೆದ್ದರು. 66ಕೆ.ಜಿ ವಿಭಾಗದಲ್ಲಿ ರವೀಂದರ್ ಹಾಗೂ 75ಕೆ.ಜಿ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಚಿನ್ನ ಜಯಿಸಿದ್ದಾರೆ.
ರಿತುಗೆ ಚಿನ್ನ: 48ಕೆ.ಜಿ ಮಹಿಳೆಯರ ವಿಭಾಗದ ಫೈನಲ್ನಲ್ಲಿ ಪ್ರಿಯಾಂಕಾ ಸಿಂಗ್ ಎದುರು ಗೆದ್ದ ರಿತು ಚಿನ್ನ ಪಡೆದುಕೊಂಡರು.