ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!

Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕೆಲವು ವರ್ಷಗಳ ಹಿಂದೆ ಬ್ಲಾಗಿಂಗ್ ಯುಗದ ಒಂದು ದಿನ ಕನ್ನಡ ಬ್ಲಾಗರ್‌ಗಳ ಸಭೆಯೊಂದು ಬೆಂಗಳೂರಿನಲ್ಲಿ ನಡೆಯಿತು. ಆ ಸಭೆಯಲ್ಲಿ ನಾನು ‘ವರ್ಡ್‌ಪ್ರೆಸ್, ಬ್ಲಾಗ್‌ಸ್ಪಾಟ್ ಎಂಬ ಉಚಿತ ಬ್ಲಾಗಿಂಗ್ ಎಂಬುದೂ ಒಂದು ಮಾರಾಟ ತಂತ್ರ. ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಲೊಳಲೊಟ್ಟೆ. ನಾವು ನಮ್ಮ ಸ್ವಂತ ವೆಬ್‌ಸೈಟ್ ಹೊಂದಿದ್ದರೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂಬ ಸಮಾಧಾನ ಸಿಗುತ್ತದೆ’ ಎಂದಿದ್ದೆ. ಈಗ, ಫೇಸ್‌ಬುಕ್ ಮತ್ತು ಟ್ವಿಟರ್ ಎಂಬ ಯುಗದಲ್ಲಿ ಬ್ಲಾಗಿಂಗ್‌ಗಿಂತಲೂ ನಿಕೃಷ್ಟವಾದ, ಬಂಡವಾಳಶಾಹಿ ಸಮಾಜತಾಣಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹಾನ್ ವೇದಿಕೆಗಳು ಎಂದು ಭಾವಿಸಿಬಿಟ್ಟಿದ್ದೇವೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಯಾರು, ಯಾವುದೇ ವೇದಿಕೆ ಬಳಸಿ ಬೇಕಾದ್ದನ್ನು ಹೇಳಬಹುದು ಎಂಬ ಸ್ವೇಚ್ಛಾಚಾರ, ಅನಾಚಾರದವರೆಗೆ ಬಂದು ನಿಂತಿದ್ದೇವೆ. ಸರ್ಕಾರದ ಹುದ್ದೆಯಲ್ಲಿ ಇರುವವರು ತಮ್ಮದೇ ಪೊಲೀಸ್ ವ್ಯವಸ್ಥೆ ಬಗ್ಗೆ ಫೇಸ್‌ಬುಕ್‌ನಲ್ಲಿ ಅನುಮಾನ ವ್ಯಕ್ತಪಡಿಸುವ ಮಟ್ಟಕ್ಕೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಬೆಳೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಗಳು ಎಂದು ನಾವು ಭಾವಿಸುವ ಬಹುತೇಕ ಪತ್ರಿಕೆಗಳು, ಜಾಲತಾಣಗಳು, ಟಿ.ವಿ ಚಾನೆಲ್‌ಗಳೆಲ್ಲವೂ ಖಾಸಗಿ ಒಡೆತನಕ್ಕೆ ಸೇರಿವೆ. ಅಲ್ಲಿಯೂ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಒದಗಿಸಲು ಬಂಡವಾಳಶಾಹಿಗಳ ಜಾಹೀರಾತುಗಳ ಬೆಂಬಲ ಪಡೆಯಲಾಗುತ್ತದೆ. ಹೀಗೆ ಖಾಸಗಿ ಮಣೆಯ ಮೇಲೆ ಕೂತು ನಾವು ಗಟ್ಟಿಯಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ ಮಾಡುತ್ತಿದ್ದೇವೆ!   

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳನ್ನು ಗಮನಿಸಿ. ವಿಪರೀತ ಸುದ್ದಿಗೆ ಕಾರಣವಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಸರ್ಕಾರದ ನಿಧಿಯಲ್ಲೂ, ಕಾಶ್ಮೀರದಲ್ಲಿ ಜನಮತಗಣನೆ ನಡೆಸಬೇಕೆಂದು ಹಲವು ವಿದ್ಯಾರ್ಥಿಗಳು ಬೇಡಿಕೆಯಿಟ್ಟ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯವು (ಜೆಎನ್‌ಯು) ಬಂಡವಾಳಶಾಹಿ ಕಂಪೆನಿಗಳ ನಿಧಿಯಲ್ಲೂ ಕಾರ್ಯನಿರ್ವಹಿಸುತ್ತಿವೆ. ಅಶೋಕ ವಿಶ್ವವಿದ್ಯಾಲಯದ ಕೆಲವು ಸ್ಥಾಪಕರ ಒಡೆತನದ ಕಂಪೆನಿಗಳು ಪರಿಸರ ಮತ್ತಿತರ ವಿಷಯಗಳಲ್ಲಿ ವಿವಾದಕ್ಕೆ ಸಿಲುಕಿದ್ದನ್ನೂ ನೀವು ಹುಡುಕಿ ತೆಗೆಯಬಹುದು. 750ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಹೀಗೆ ಸರ್ಕಾರದ ಅಥವಾ ಖಾಸಗಿ ನಿಧಿಯಲ್ಲೇ ನಡೆಯುತ್ತಿವೆ. ಸಹಕಾರಿ ಸಿದ್ಧಾಂತ, ಜನಸಮುದಾಯದ ಸಾಮೂಹಿಕ ನೇತೃತ್ವದಲ್ಲಿ ನಡೆಯುತ್ತಿರುವ ಮುಖ್ಯವಾಹಿನಿ ಮಾಧ್ಯಮ, ವಿಶ್ವವಿದ್ಯಾಲಯಗಳನ್ನು ನಾನಂತೂ ಕಂಡಿಲ್ಲ.

ಇದು ಒಡೆತನದ ವಿಷಯವಾದರೆ, ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ನಡೆಯುತ್ತಿರುವ ಘಟನೆಗಳ ಅಸಲಿಯತ್ತೇ ಬೇರೆ. ಹಿಂಸೆಯ ಮೂಲಕ ಹಕ್ಕುಗಳಿಗಾಗಿ ಹೋರಾಟ ನಡೆಸುವ ವ್ಯಕ್ತಿ- ಗುಂಪುಗಳ ಪರವಾಗಿಯೇ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ ನಡೆಯುತ್ತಿರುತ್ತದೆ. ಇದನ್ನು ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯುತ್ತಾರೆ. ವಿದ್ಯಾರ್ಥಿ ಸಮುದಾಯವು ಕಲಿಕೆ ಹಂತದಲ್ಲಿ ಸಾಮಾಜಿಕ ಸ್ಪಂದನೆ ಬೆಳೆಸಿಕೊಳ್ಳಬೇಕು, ಸಮಾಜದ ಹಲವು ನೋವುಗಳನ್ನು ಅರಿಯಬೇಕು, ನಿಜ. ಆದರೆ ಸಮಕಾಲೀನ ಆಗುಹೋಗುಗಳನ್ನು ಕೇವಲ ರಾಜಕೀಯ ಚರ್ಚೆ, ದೇಶದ ಗಡಿ ಮತ್ತು ಸಾರ್ವಭೌಮತ್ವ, ಮಹಿಳೆ, ಲಿಂಗಭೇದ, ಜಾತಿ ತಾರತಮ್ಯ, ಎಡ-ಬಲ ಸಿದ್ಧಾಂತದ ರಾಜಕೀಯ- ಈ ಕೆಲವು ವಿಷಯಗಳಿಗಷ್ಟೇ ಸೀಮಿತಗೊಳಿಸಿರುವುದು ಮಾತ್ರ ವಿಚಿತ್ರ. ತಮಗೆ ಬೇಕಾದ ವಿಷಯಗಳನ್ನಷ್ಟೇ ಅಭಿವ್ಯಕ್ತಿಯ ಸರಕಾಗಿ ಮಾಡಿಕೊಳ್ಳುವ ವಿಚಾರದಲ್ಲಾಳಿಗಳ ಧೋರಣೆಯನ್ನು ನಾನು ಖಂಡಿಸುತ್ತೇನೆ.

ವಿಶ್ವವಿದ್ಯಾಲಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯೊದಗಿದೆ ಎಂಬ ಆರೋಪವೂ ವಿಚಿತ್ರವಾಗಿದೆ. ಯಾವುದೇ ಅಭಿವ್ಯಕ್ತಿ ಸ್ವಾತಂತ್ರ್ಯದ ನೀತಿಯಲ್ಲಿ ಇನ್ನೊಂದು ಕೋನದ ಅಭಿಪ್ರಾಯವನ್ನೂ ಶಾಂತವಾಗಿ ಸ್ವೀಕರಿಸಬೇಕು. ಅಲ್ಲಿ ಬಹುಮತದ ಪ್ರಶ್ನೆ ಬರುವುದಿಲ್ಲ. ಆದರೆ ಈಗ ನಡೆಯುತ್ತಿರುವುದೇನು? ಜೆಎನ್‌ಯುನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದಾಕ್ಷಣ ಅದು ಸತ್ಯವಾಗಬೇಕೆಂದಿಲ್ಲ; ಅಥವಾ ಚಿಕ್ಕ ಪ್ರಮಾಣದ ಪ್ರತಿಭಟನೆಯು ನಗಣ್ಯವಾಗಬೇಕಿಲ್ಲ. ‘ಫ್ರೀ ಬೇಸಿಕ್ಸ್’ ಎಂಬ ಅಂತರ್ಜಾಲ ತಾರತಮ್ಯ ನೀತಿಯನ್ನು ಭಾರತದಲ್ಲಿ ತರಲು ಹೆಣಗಿದ ಫೇಸ್‌ಬುಕ್ ತನ್ನ ಬಳಕೆದಾರರನ್ನೇ ವಂಚಿಸಿ ಲಕ್ಷಗಟ್ಟಲೆ ಅರ್ಜಿಗಳನ್ನು ಟ್ರಾಯ್‌ಗೆ ಸಲ್ಲಿಸಿದ್ದರೂ, ಅವುಗಳನ್ನು ಬಹುಮತದ ಮೇಲೆ ಸ್ವೀಕರಿಸಲಿಲ್ಲ; ಚಿಕ್ಕ ಸಂಖ್ಯೆಯಲ್ಲಿದ್ದರೂ ಸರಿಯಾದ ವಾದವನ್ನು ಮಂಡಿಸಿದ್ದರಿಂದಲೇ ‘ಫ್ರೀ ಬೇಸಿಕ್ಸ್’ ಯೋಜನೆ ರದ್ದಾಯಿತು. ತಿಯಾನನ್‌ಮನ್ ಚೌಕದಲ್ಲಿ ಟ್ಯಾಂಕರ್‌ಗಳ ಮುಂದೆ ಒಬ್ಬನೇ ನಿಂತು ಪ್ರತಿಭಟಿಸಿದ ವ್ಯಕ್ತಿಯನ್ನೂ ನೆನಪಿಸಿಕೊಳ್ಳಿ. ಎಡಪಂಥೀಯರು ಹೆಚ್ಚಾಗಿದ್ದಾರೆಂದ ಮಾತ್ರಕ್ಕೆ ಜೆಎನ್‌ಯುನಲ್ಲಿ ಇರುವ ಬಲಪಂಥೀಯ ವಿದ್ಯಾರ್ಥಿಗಳು ಸೋಲುಣ್ಣುತ್ತಿದ್ದಾರೆ ಎಂಬ ಹೇಳಿಕೆಯೇ (ಅಥವಾ ಇದನ್ನು ತಿರುವುಮುರುವಾಗಿಸಿದರೂ) ತರ್ಕಹೀನ.

ಪರಿಸರ ರಕ್ಷಣೆ, ಹವಾಮಾನ ವೈಪರೀತ್ಯ, ಸಾವಯವ ಕೃಷಿ, ಪ್ಲಾಸ್ಟಿಕ್ ಬಳಕೆ ವಿರೋಧ, ಕಲ್ಲಿದ್ದಲು ಸ್ಥಾವರಗಳ ಅಪಾಯ, ಶಿಕ್ಷಣದ ದುರವಸ್ಥೆ, ಭಾರತೀಯ ಭಾಷೆಗಳ ಸಂರಕ್ಷಣೆ, ದೇಸಿ ಪರಂಪರೆ ರಕ್ಷಣೆ ಇದಾವುದರ ಬಗ್ಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಚರ್ಚಿಸುವುದೇ ಇಲ್ಲ. ಮುಕ್ತ ಅಭಿಪ್ರಾಯದ ವಿಷಯಗಳನ್ನು ತೀರಾ ರಾಜಕೀಯಕರಣಗೊಳಿಸಿದ್ದರಿಂದಲೇ ಧಕ್ಕೆಯ ಮಾತೂ ಕೇಳಿಬರುತ್ತಿದೆ; ಸಂತುಲಿತ, ಸರ್ವಸ್ಪರ್ಶಿ ಚರ್ಚೆಗಳನ್ನು ಹುಟ್ಟುಹಾಕುವ ಸದ್ವರ್ತನೆಯೇ ಮಾಯವಾಗಿದೆ; ಒಮ್ಮೆಗೇ ಮೂರು ಸಲ ತಲಾಖ್ ಹೇಳಿ ಮಹಿಳೆಯರನ್ನು ಕಷ್ಟದ ಸಂಕೋಲೆಗೆ ತಳ್ಳುವ ವ್ಯವಸ್ಥೆಯ ಬಗ್ಗೆ, ಹಿಂದೂಗಳಲ್ಲಿ ನಡೆಯುತ್ತಿರುವ ಸ್ತ್ರೀಭ್ರೂಣ ಹತ್ಯೆಗಳ ಬಗ್ಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಸರ್ಕಾರದ ಮುಖ್ಯಸ್ಥರಾದ  ಪ್ರಧಾನಮಂತ್ರಿ ಮಾತನಾಡುತ್ತಿದ್ದಾರೆಯೇ ಹೊರತು, ‘ಪರವಾನಗಿ ಇಲ್ಲದ ಎಕೆ 47 ಬಂದೂಕು ಹಿಡಿದೇ ಸಂಚರಿಸುತ್ತಿದ್ದ ಬುರ್ಹಾನ್‌ ವಾನಿಯ ಹತ್ಯೆಯು ಕಾನೂನೇತರ ಕುಕೃತ್ಯ’ ಎಂದು ಆರೋಪಿಸುತ್ತಿರುವ ಪ್ರಗತಿಗಾಮಿ, ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಈ ಬಗ್ಗೆ ಬಾಯಿ ಬಿಡುತ್ತಿಲ್ಲ!

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಳಕೆಗೂ ಒಂದು ಸಂಹಿತೆ ಇರಬಹುದು ಎಂಬ ಸಾಮಾನ್ಯ ಅಂಶವೂ ನಮಗೆ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಷಿಕಾಗೊ  ವಿಶ್ವವಿದ್ಯಾಲಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೊಂದಿರುವ ನೀತಿಸಂಹಿತೆಯನ್ನೇ ಗಮನಿಸಿ: ‘ಚರ್ಚೆಯ ಸ್ವಾತಂತ್ರ್ಯ ಎಂದರೆ ಯಾರು ಏನು ಬೇಕಾದರೂ ಹೇಳಬಹುದು ಎಂದಲ್ಲ. ಕಾನೂನನ್ನು ವಿರೋಧಿಸುವ, ನಿರ್ದಿಷ್ಟ ವ್ಯಕ್ತಿಯ ಚಾರಿತ್ರ್ಯ ಹನನ ಮಾಡುವ, ಬೆದರಿಕೆ ಹಾಕುವ, ಶೋಷಿಸುವ, ಖಾಸಗಿತನದ ಮೇಲೆ ಆಕ್ರಮಣ ಮಾಡುವ ಅಥವಾ ವಿಶ್ವವಿದ್ಯಾಲಯದ ಕಾರ್ಯಕ್ಕೆ ಧಕ್ಕೆ ಒದಗುವ ಅಭಿವ್ಯಕ್ತಿಯನ್ನು ವಿಶ್ವವಿದ್ಯಾಲಯವು ನಿರ್ಬಂಧಿಸುತ್ತದೆ. ಅಂಥ ಯಾವುದೇ ಸಭೆಯಲ್ಲಿ ಇತರರ ಅಭಿಪ್ರಾಯಗಳಿಗೂ ತಡೆ ಒಡ್ಡಬಾರದು’.

ಜೆಎನ್‌ಯುನಲ್ಲಿ ನಡೆದ ಕನ್ಹಯ್ಯಾ ಕುಮಾರ್ ಪರ ಸಭೆಗಳು ಮತ್ತು ಪ್ರತಿಭಟನೆಗಳು ಎಂದಾದರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂರಕ್ಷಿಸಿದ್ದು ನನಗೆ ಕಾಣಲಿಲ್ಲ. ‘ನಮ್ಮ ವಿಚಾರದವರು ಮಾತ್ರವೇ ನಮ್ಮ ಸಭೆಗಳಲ್ಲಿ ಇರಬೇಕು’ ಎಂಬ ಮಾನಸಿಕತೆಯೇ ರೋಗಿಷ್ಟ; ಅಭಿವ್ಯಕ್ತಿ ಸ್ವಾತಂತ್ರ್ಯದ ಮೊದಲ ಸೂತ್ರವೇ ಇಲ್ಲಿ ಹರಿದುಹೋಗಿದೆ! ಯಾವುದೇ ವಿಶ್ವವಿದ್ಯಾಲಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಹಿತೆ ಇಲ್ಲವಾದರೆ, ಅದಕ್ಕೆ ಕಾರಣರಾರು? ಮುಖ್ಯವಾಗಿ ಇದು ಆರು ದಶಕಗಳ ಕಾಲ ನಮ್ಮನ್ನು ಆಳಿದವರು ಕೊಟ್ಟ ಮರೆಯಲಾಗದ ಬಳುವಳಿ. ಅದರಲ್ಲೂ ತುರ್ತುಪರಿಸ್ಥಿತಿಯ ಕರಾಳ ಯುಗದಲ್ಲಿ ಎರಡು ವರ್ಷ ಕಣ್ಣು, ಮೂಗು, ಬಾಯಿ ಕಟ್ಟಿಸಿಕೊಂಡು, ಎಡ-ಬಲದ ಕುಂಡೆ ಎಂಬ ತಾರತಮ್ಯವಿಲ್ಲದೆ ಲಾಠಿ ಏಟು ತಿಂದವರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.

ಅಭಿವ್ಯಕ್ತಿ ಸ್ವಾತಂತ್ರ್ಯವು ಕೇವಲ ವಿಶ್ವವಿದ್ಯಾಲಯಗಳಲ್ಲಿ ಇರಬೇಕಾದ ಸರಕು ಎಂಬ ಮೂರ್ಖ ಪರಿಕಲ್ಪನೆಯೂ ಇದೆ. ಇಂದು ಇಷ್ಟೆಲ್ಲ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳು ಮುಂದೆ ಯಾವ್ಯಾವುದೋ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು; ಆಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಮೊಟಕು ಮಾಡುವ ಚಿಕ್ಕ ಅಕ್ಷರಗಳ ಹಲವು ಕಲಮುಗಳಿಗೆ ಕಣ್ಣುಮುಚ್ಚಿ ಸಹಿ ಹಾಕಿರುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅರಿವು ಮೂಡಿದ ಮೇಲೆ ಆ ವಿದ್ಯಾರ್ಥಿ ಹೆಚ್ಚಿನ ಸಮಚಿತ್ತತೆ ಸಾಧಿಸಿ ತನ್ನ ಜೀವನದಲ್ಲೂ ಅದನ್ನು ಅಳವಡಿಸಿಕೊಳ್ಳಬೇಕು; ಬದುಕಿನುದ್ದಕ್ಕೂ ತಾನು ನಂಬಿದ ಆದರ್ಶಗಳಿಗಾಗಿ ಬಾಳಬೇಕು. ಪಕ್ಷ ಯಾವುದೇ ಇರಲಿ, ಇಡೀ ದೇಶದಲ್ಲಿ ಅತ್ಯಾಚಾರ, ಶೋಷಣೆ ನಡೆಯುತ್ತಲೇ ಇವೆ. ಅದಕ್ಕೆ ದುಷ್ಟ/ ಅಜ್ಞಾನಿ ಜನರೇ ಕಾರಣ. ರಾಜಕೀಯ ಹೇಳಿಕೆಗಳಿಗೆ ವಿರೋಧ ಬಂತು, ಯಾರೋ ದೂರು ಕೊಟ್ಟರು, ಇನ್ನಾರೋ ನಿರ್ಬಂಧಿಸಿದರು ಎಂದಾಕ್ಷಣ ‘ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ’ ಎಂದು ಬೊಬ್ಬಿರಿಯುವುದು ಜಾಣಗುರುಡು, ರಾಜಕೀಯ ಪ್ರೇರಿತ ಮತ್ತು ಹೊಣೆಗೇಡಿತನ.
*
ಮಹಿಳೆಯರ ಹಕ್ಕಿನ ಬಗ್ಗೆ ಮಾತನಾಡುವ ಯುವ ಸಮುದಾಯವು ತಲಾಖ್‌ನಂತಹ, ಭ್ರೂಣಹತ್ಯೆಯಂತಹ ಘೋರ ಅನಾಚಾರಗಳ ವಿರುದ್ಧ ಬೃಹತ್ ಧರಣಿ, ಪ್ರತಿಭಟನೆ ನಡೆಸಿದೆಯೆ? ಜೆಎನ್‌ಯುವಿನಲ್ಲಿ ಎಂದಾದರೂ ಮುಸ್ಲಿಂ ಮಹಿಳೆಯರ ಯಾತನಾಮಯ ಬದುಕಿನ ಬಗ್ಗೆ ನಿರ್ಣಯಕ್ಕೆ ಒತ್ತಾಯಿಸಿ ಪಿಕೆಟಿಂಗ್ ನಡೆದಿದೆಯೆ? ಬಂಡವಾಳಶಾಹಿ, ಪರಿಸರ ನಾಶಕ ಕಂಪೆನಿಗಳ ವಿರುದ್ಧ ಅಶೋಕ ವಿಶ್ವವಿದ್ಯಾಲಯದಲ್ಲಿ ಎಂದಾದರೂ ರ್‍ಯಾಲಿ ನಡೆದಿದೆಯೆ? ಸಮಾಜದ ಎಲ್ಲ ಸಮಸ್ಯೆಗಳನ್ನೂ ಸಿದ್ಧಾಂತಗಳು ಮತ್ತು ಕೆಲವೇ ವ್ಯಕ್ತಿಗಳ ಅಭಿಮತದ ಮೂಲಕವೇ ನಿರ್ಣಯಿಸುವ ಕ್ರಮವು ಪ್ರಜಾತಂತ್ರ ವಿರೋಧಿ.

ಅಶೋಕ ವಿಶ್ವವಿದ್ಯಾಲಯದ ಘಟನೆಯ ಪರಿಣಾಮವಾಗಿ ಇಬ್ಬರು ಅಧಿಕಾರಿಗಳು ರಾಜೀನಾಮೆ ಕೊಟ್ಟ ಬಗ್ಗೆ ಬಾಯಿಬಿಡಲೂ ಅಲ್ಲಿನ ಸ್ವಯಂಘೋಷಿತ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪಾಠ ಹೇಳುವ ಎಲ್ಲಾ ಲಿಬರಲ್ ಪ್ರಾಧ್ಯಾಪಕರು ಹಿಂಜರಿದಿದ್ದಾರೆ ಎಂಬುದು ಇನ್ನೂ ತಮಾಷೆಯಾಗಿದೆ. ತಾವೇ ಬೆಳೆಸಿದ ವಿದ್ಯಾರ್ಥಿಗಳ ಪರವಾಗಿ ಮಾತನಾಡಲೂ ಇವರ ಧ್ವನಿ ಉಡುಗಿಹೋಗಿದೆ; ಅದನ್ನು ಒಳ್ಳೆಯ ಸಂಬಳದ ಉದ್ಯೋಗ ಒಪ್ಪಂದದಲ್ಲಿ ಅಡವಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT