ಈ ಅಧ್ಯಯನ ಎಷ್ಟು ಅಧಿಕೃತವಾಗಿತ್ತು ಎಂದರೆ ಈ ವರದಿ ಹೊರಬಿದ್ದ ನಂತರದಲ್ಲಿ ಐಸ್ಲ್ಯಾಂಡ್ ಪ್ರಧಾನಮಂತ್ರಿ ರಾಜೀನಾಮೆ ಕೊಡಬೇಕಾಯಿತು. ಬ್ರಿಟನ್ನಿನ ಅಂದಿನ ಪ್ರಧಾನಿ ಪದತ್ಯಾಗ ಮಾಡಲು ಕಾರಣವಾದ ಹಲವು ಸಂಗತಿಗಳಲ್ಲಿ ಇದೂ ಪ್ರಮುಖವಾಯಿತು. ಆಫ್ರಿಕಾದ ಹಲವು ದೇಶಗಳ ಸಚಿವರ ತಲೆದಂಡವಾಯಿತು. ಚೀನಾದಲ್ಲಿ ‘ಪನಾಮ ಪೇಪರ್ಸ್’ ಎಂಬ ಹೆಸರನ್ನೇ ನಿಷೇಧಗೊಳಿಸಲಾಯಿತು. ಭಾರತದಲ್ಲೂ ಅಮಿತಾಭ್ ಬಚ್ಚನ್, ಪ್ರಧಾನಮಂತ್ರಿಯ ಆಪ್ತ ಉದ್ಯಮಿ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ, ಉದ್ಯಮಿಗಳಾದ ಸಮೀರ್ ಗೆಹ್ಲಾಟ್ (ಇಂಡಿಯಾ ಬುಲ್ಸ್) ಮತ್ತು ಡಿಎಲ್ ಸಿಂಗ್ (ಡಿಎಲ್ಎಫ್), ಅಪೊಲೋ ಟೈರ್ಸ್ನ ಮಾಲೀಕ ಕುಟುಂಬವನ್ನು ಒಳಗೊಂಡಂತೆ 500ಕ್ಕೂ ಹೆಚ್ಚು ಭಾರತದ ಅತಿ ಶ್ರೀಮಂತರ ಮತ್ತು ರಾಜಕೀಯ ಬಲಾಢ್ಯರ ಹೆಸರು ಈ ಅಧ್ಯಯನದಲ್ಲಿ ಪ್ರಸ್ತಾಪವಾಗಿದೆ. ಕೇಂದ್ರ ಸರ್ಕಾರ ಇದನ್ನು ಗಮನಿಸಿದ್ದು, ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ಘೋಷಿಸಿದೆ. ಆದರೆ ಆ ಸಮಿತಿಯ ವರದಿ ಇರಲಿ, ಅದು ಒಮ್ಮೆಯಾದರೂ ಸಂಪೂರ್ಣ ಸಭೆ ಸೇರಿದ್ದರ ಬಗ್ಗೆಯೂ ಮಾಹಿತಿ ಇಲ್ಲ.