ಬೆಂಗಳೂರು: ಕಾಮಾಕ್ಷಿಪಾಳ್ಯ ಸಮೀಪದ ರಂಗನಾಥಪುರದಲ್ಲಿ ಶುಕ್ರವಾರ ರಾತ್ರಿ ಕಾವ್ಯ (20) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಂಗನಾಥಪುರ ನಿವಾಸಿಯಾದ ಕಾವ್ಯ, ಆರು ತಿಂಗಳ ಹಿಂದಷ್ಟೇ ಚಿಂತಾಮಣಿ ತಾಲ್ಲೂಕಿನ ಸಂಪತ್ ಎಂಬುವರನ್ನು ಪ್ರೇಮ ವಿವಾಹವಾಗಿದ್ದರು. ಗಂಡನ ಮನೆಯಿಂದ ವಾರದ ಹಿಂದೆ ತವರಿಗೆ ಬಂದಿದ್ದ ಅವರು, ರಾತ್ರಿ ಪೋಷಕರು ಮಲಗಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ನಾವು ಮಲಗುವಾಗ ಮಗಳು ಟಿ.ವಿ ನೋಡುತ್ತ ಕುಳಿತಿದ್ದಳು. ರಾತ್ರಿ 12 ಗಂಟೆಗೆ ನನಗೆ ಎಚ್ಚರವಾಯಿತು. ಟಿ.ವಿ ಚಾಲೂ ಇತ್ತಾದರೂ, ಮಗಳು ಕಾಣಲಿಲ್ಲ. ಕೋಣೆಗೆ ಹೋಗಿ ನೋಡಿದಾಗ ಆಕೆ ನೇಣು ಹಾಕಿಕೊಂಡಿದ್ದಳು’ ಎಂದು ಮೃತರ ತಾಯಿ ಹೇಳಿಕೆ ಕೊಟ್ಟಿದ್ದಾಗಿ ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದರು.