ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹ 2000 ಮುಖಬೆಲೆಯ ಭಾರಿ ಪ್ರಮಾಣದ ನೋಟುಗಳು ಹಾಗೂ ಚಿನ್ನವನ್ನು ಅಧಿಕಾರಿಗಳಿಂದ ಆದಾಯ ತೆರಿಗೆ ಇಲಾಖೆಯವರು ವಶಪಡಿಸಿಕೊಂಡಿರುವುದು ಸ್ತುತ್ಯರ್ಹ. ಬ್ಯಾಂಕ್ ಅಧಿಕಾರಿಗಳು ಆಮಿಷಕ್ಕೆ ಬಲಿಯಾಗಿ ಕಪ್ಪುಹಣವನ್ನು ಬಿಳುಪು ಮಾಡಿರುವುದು ಅಕ್ಷಮ್ಯ.
ಕೆಲವು ಬ್ಯಾಂಕ್ ಅಧಿಕಾರಿಗಳನ್ನು ಈ ಸಂಬಂಧ ಅಮಾನತಿನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಈ ಅಧಿಕಾರಿಗಳು ಮುಂದೊಂದು ದಿನ ಮತ್ತೆ ಕೆಲಸಕ್ಕೆ ಹಾಜರಾಗುತ್ತಾರೆ. ವಿಚಾರಣೆ ಸಂದರ್ಭದಲ್ಲಿ ಹಣ ಮತ್ತು ರಾಜಕೀಯ ಪ್ರಭಾವ ಬಳಸಿ, ತಾವು ತಪ್ಪಿತಸ್ಥರಲ್ಲ ಎಂದು ಸಾಬೀತು ಮಾಡಿಕೊಳ್ಳುವುದಕ್ಕೆ ಅವರಿಗೆ ಯಾವ ಕಷ್ಟವೂ ಆಗುವುದಿಲ್ಲ. ಹೀಗಾಗಿ ಕೂಡಲೇ ವಿಚಾರಣೆ ನಡೆಸಿ, ಎಲ್ಲ ತಪ್ಪಿತಸ್ಥರನ್ನೂ ತಕ್ಷಣ ವಜಾ ಮಾಡಬೇಕು.
-ಕೆ.ವಿ.ಸೀತಾರಾಮಯ್ಯ, ಹಾಸನ