ಚೆನ್ನೈ: ನಿನ್ನೆ ಸಂಜೆ ತೀವ್ರ ಹೃದಯಾಘಾತಕ್ಕೆ ಒಳಗಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸ್ಥಿತಿ ತೀರಾ ಗಂಭೀರವಾಗಿದೆ.
ಅವರಿಗೆ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇಂದು ಮುಂಜಾನೆ ಆ್ಯಂಜಿಯೋಗ್ರಾಮ್ ಪರೀಕ್ಷೆಗೆ ಒಳಪಡಿಸಲಾಗಿದೆ.
‘ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಜಯಲಲಿತಾ ಅವರು ಸಂಜೆ ವೇಳೆಗೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹೃದ್ರೋಗ ಮತ್ತು ಉಸಿರಾಟ ವಿಭಾಗಗಳ ಪರಿಣತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ’ ಎಂದು ಆಸ್ಪತ್ರೆ ಹೇಳಿಕೆ ನೀಡಿತ್ತು.
ನಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಅಪೋಲೊ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಇಂದು ಬೆಳಗ್ಗೆ ಹತ್ತು ಗಂಟೆಗೆ ಎಐಐಎಂಎಸ್ನ ವೈದ್ಯರ ತಂಡ ಅಪೋಲೊ ಆಸ್ಪತ್ರೆಗೆ ಬರಲಿದೆ.
ಆಸ್ಪತ್ರೆಯಲ್ಲಿ ತುರ್ತು ಸಂಪುಟ ಸಭೆ
ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿಂದು ತುರ್ತು ಸಂಪುಟ ಸಭೆ ಕರೆಯಲಾಗಿದ್ದು, ಹಲವಾರು ಸಚಿವರು ಭಾಗಿಯಾಗಿದ್ದಾರೆ.
ರಾಜ್ಯದ ಗಡಿಭಾಗದಲ್ಲಿ ಬಿಗಿ ಭದ್ರತೆ
ರಾಜ್ಯದ ಗಡಿಭಾಗಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಕರ್ನಾಟಕ -ತಮಿಳುನಾಡು ನಡುವಿನ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ಮಧ್ಯಾಹ್ನ 12.30ಕ್ಕೆ ಎಐಎಡಿಎಂಕೆ ಸಭೆ
ಜಯಲಲಿತಾ ಅವರು ಗುಣಮುಖರಾಗಲಿ ಎಂದು ಇಡೀ ರಾಜ್ಯದ ಜನತೆ ಪ್ರಾರ್ಥಿಸುತ್ತಿದೆ. ಮಧ್ಯಾಹ್ನ ಎಐಎಡಿಎಂಕೆ ಪಕ್ಷದ ಕೇಂದ್ರ ಕಚೇರಿಯಲ್ಲಿ ಶಾಸಕರ ಸಭೆ ನಡೆಯಲಿದೆ.