ಹಟ್ಟಿ ಚಿನ್ನದ ಗಣಿ: ಮಹಿಳೆಯರು ಸ್ವಾವಲಂಬಿಗಳಾಗಿ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಬೇಕು ಎಂದು ಹಟ್ಟಿ ಚಿನ್ನದ ಗಣಿಯ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಡಾ.ಪ್ರಭಾಕರ ಸಂಗೂರಮಠ ಹೇಳಿದರು.
ಶನಿವಾರ ಹಟ್ಟಿ ಚಿನ್ನದ ಗಣಿ ಕ್ರೀಡಾಸಂಸ್ಥೆಯಲ್ಲಿ ಧಾರವಾಡದ ರಾಷ್ಟ್ರೀಯ ಸಮಗ್ರ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಸಂಸ್ಥೆ ಹಾಗೂ ವಿದ್ಯಾ ಗಾರ್ಮೆಂಟ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸುಧಾರಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಲಿಂಗರಾಜ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯ ದರ್ಶಿ ಶಾಂತಪ್ಪ ಮಳ್ಳಿ, ಡಾ.ತೃಪ್ತಿ ಪಾಟೀಲ, ಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಬಳಗಾನೂರು ಮಾತನಾಡಿದರು.
ರಾಷ್ಟ್ರೀಯ ಸಮಗ್ರ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಡಾ.ವಿಜಯಕುಮಾರಿ, ಕಾರ್ಯದರ್ಶಿ ಶರಣಬಸವ ಪಾಟೀಲ, ಕಾರ್ಮಿಕ ಕಲ್ಯಾಣಾಧಿಕಾರಿ ಜಗನ್ಮೋಹನ್, ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಯಂಕೋಬ, ಶಿವಕುಮಾರ ಕವಿತಾಳ ಇದ್ದರು. ಚಿನ್ನಪ್ಪ ನಿರೂಪಿಸಿ, ಸಂತೋಷಮ್ಮ ವಂದಿಸಿದರು.