ಬೃಹತ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಉದ್ಯೋಗಿ ಬಳಿ ಸಹೋದ್ಯೋಗಿಯೊಬ್ಬಳು ಹಣದ ಸಹಾಯ ಕೇಳುತ್ತಾಳೆ. ಅವಳು ಹಿಂದೂ ಹುಡುಗಿ. ಕೆಲಸಕ್ಕೆ ರಜೆ ಹಾಕಿದ್ದ ಅಹ್ಮದ್, ತನ್ನ ಸಹೋದ್ಯೋಗಿಯ ಕೋರಿಕೆ ಕೇಳಿ ಹಣ ಕೊಡಲು ಕಾರಿನಲ್ಲಿ ತೆರಳುತ್ತಾನೆ. ಆಕೆ ರಸ್ತೆ ದಾಟಿ ಆತನ ಕಾರಿನ ಬಳಿ ಬಂದು ಹಣ ತೆಗೆದುಕೊಳ್ಳುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಗುಂಪೊಂದು ಪ್ರತ್ಯಕ್ಷವಾಗುತ್ತದೆ. ಅಹ್ಮದ್ನನ್ನು ಕಾರಿನಿಂದ ಕೆಳಗೆಳೆದು, ಸಮೀಪದ ವಿದ್ಯುತ್ ಕಂಬಕ್ಕೆ ಕಟ್ಟಿ, ಬಟ್ಟೆಯನ್ನು ಕಿತ್ತು ಥಳಿಸಲಾಗುತ್ತದೆ. ಹೀಗೆ ನಾಲ್ಕು ಸಾಲುಗಳಲ್ಲಿ ಬರೆದುಬಿಡಬಹುದಾದ ಈ ಘಟನೆಯ ಪರಿಣಾಮ ಚಿಕ್ಕದಲ್ಲ. ‘ಘಟನೆಯ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರೂ ತುಂಬ ಖಿನ್ನನಾಗಿದ್ದ ಹುಡುಗನನ್ನು ಸುಧಾರಿಸುವುದು ಸುಲಭವಿರಲಿಲ್ಲ’ ಎನ್ನುತ್ತಾರೆ ಆತನ ಪೋಷಕರು. ‘ಪ್ರೇಮ ಪ್ರಕರಣವೆಂದೋ ಮತಾಂತರದ ಪ್ರಯತ್ನವೆಂದೋ ಈ ಘಟನೆಯನ್ನು ಬಿಂಬಿಸಿ ಅತಿರೇಕಕ್ಕೆ ಕೊಂಡೊಯ್ದುದರ ಹಿಂದೆ ಇರುವ ನೈಜ ಕಾರಣವೇ ಬೇರೆ. ಇದು ಹಿಂದೂ ಮುಸ್ಲಿಂ ವಿಚಾರ ಅಲ್ಲವೇ ಅಲ್ಲ. ಸಗಟು ಮಾರಾಟ ವಿಭಾಗದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಹುಡುಗ ಯಾವುದೇ ಅವ್ಯವಹಾರಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆದ್ದರಿಂದ ಇತರ ಉದ್ಯೋಗಿಗಳು ತಮ್ಮ ಅವ್ಯವಹಾರವನ್ನು ಮುಚ್ಚಿಡಲು ಈ ರೀತಿ ಸಮಯ ಕಾದು ಆತನಿಗೆ ಹೊಡೆದಿದ್ದಾರೆ. ಅವನನ್ನು ಅಲ್ಲಿಂದ ಕೆಲಸ ಬಿಟ್ಟು ಹೋಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತೇ ಹೊರತು, ಧರ್ಮರಕ್ಷಣೆಯೂ ಅಲ್ಲ, ಹುಡುಗಿಯ ರಕ್ಷಣೆಯೂ ಅಲ್ಲ’ ಎನ್ನುತ್ತಾರೆ ಆತನ ಸಂಬಂಧಿಕರು. ಹೀಗೆ ಯಾವುದೋ ಕೆಟ್ಟ ಉದ್ದೇಶ, ಹಣ ಗಳಿಕೆಯ ಉದ್ದೇಶಗಳಿಗೂ ಅನೈತಿಕ ಪೊಲೀಸ್ಗಿರಿಯನ್ನೇ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಇದೆ.
ಇತ್ತೀಚೆಗಷ್ಟೇ ನಗರದ ಹೊರವಲಯದ ಮಿಜಾರು ಬಳಿಯ ಹಳ್ಳಿಯೊಂದರಲ್ಲಿ ಮಾರಾಮಾರಿಯ ಘಟನೆ ನಡೆಯಿತು. ಕಟ್ಟಡ ಕಾರ್ಮಿಕರ ಮನೆಯಲ್ಲಿ ಒಡಿಶಾ ಮೂಲದ ದೇವು ಯಾನೆ ಮುನೀರ್ ಎನ್ನುವವರು ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಪತ್ನಿ ಮುಸ್ಲಿಂ ಹೆಂಗಸು. ಅಕ್ಕಪಕ್ಕದವರೊಂದಿಗೆ ಸಲುಗೆಯಿಂದ ಇರುವುದನ್ನು ಆಕ್ಷೇಪಿಸಿರುವ ಮುಸ್ಲಿಂ ಯುವಕರ ದಂಡು ಒಂದು ರಾತ್ರಿ ಆ ಕುಟುಂಬದ ಮೇಲೆ ದಾಳಿ ನಡೆಸಿದೆ. ‘ಮುಸ್ಲಿಮರ ಮನೆಗೆ ಹಿಂದೂಗಳು ಏಕೆ ಬರಬೇಕು’ ಎನ್ನುವುದು ದಾಳಿ ನಡೆಸಿದವರ ಆಕ್ಷೇಪ. ‘ಇಂತಹ ಘಟನೆಗಳು ನಡೆದಾಗ ಪೊಲೀಸರು ಅಪರಾಧಿಗಳಿಗೆ ಶಿಕ್ಷೆ ಕೊಡಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ನಾಗರಿಕರು ಕೂಡ ಇದನ್ನು ವಿರೋಧಿಸಬೇಕು. ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಧ್ವನಿ ಜೋರಾದಾಗ ಅಂತಹ ಕೆಲಸವನ್ನು ಮತ್ತೊಮ್ಮೆ ಮಾಡಲು ಅಪರಾಧಿ ಅಳುಕುತ್ತಾನೆ’ ಎನ್ನುತ್ತಾರೆ ಪೊಲೀಸ್ ಕಮಿಷನರ್ ಚಂದ್ರಶೇಖರ್.
**
ಬಗೆಹರಿಯದ ಪ್ರಶ್ನೆಗಳು
ಎಷ್ಟೋ ಸಂದರ್ಭಗಳಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರದೇ ಮುಕ್ತಾಯಗೊಳ್ಳುವ ಪ್ರಕರಣಗಳೂ ನಡೆಯುತ್ತವೆ. ಕೆ.ಜೆ. ಜಾರ್ಜ್ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ಗಿರಿ ನಡೆಸುವ ಆರೋಪಿಗಳನ್ನು ಗಡೀಪಾರು ಮಾಡುವಂತೆ ಇಲ್ಲಿನ ಪೊಲೀಸರು ಮತ್ತು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಮರುದಿನವೇ ಮಂಗಳೂರಿನ ‘ಸಿಟಿ ಸೆಂಟರ್ ಮಾಲ್’ಗೆ ಇಬ್ಬರು ಯುವತಿಯರೊಂದಿಗೆ ತೆರಳಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ವರದಿಯಾಗಿತ್ತು. ಕಾಲೇಜು ವಿದ್ಯಾರ್ಥಿ ಅರ್ಜುನ್ ಎಂಬಾತ ನಗರದ ಕೆ.ಎಸ್.ರಾವ್ ರಸ್ತೆಯ ‘ಸಿಟಿ ಸೆಂಟರ್ ಮಾಲ್’ಗೆ ಇಬ್ಬರು ಯುವತಿಯರೊಂದಿಗೆ ತೆರಳಿದ್ದ. ಇವರಲ್ಲಿ ಒಬ್ಬಳು ಯುವತಿ ಭಿನ್ನ ಕೋಮಿನವಳಾಗಿದ್ದಳು. ಇದನ್ನು ಗಮನಿಸಿದ ಕೆಲವರು ಯುವಕನನ್ನು ತಡೆದು ಪ್ರಶ್ನಿಸಿ, ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂಬುದು ವರದಿ. ಆದರೆ ಸಮರ್ಪಕ ಉತ್ತರ ಎಂದರೇನು... ಎನ್ನುವುದು ಬಗೆಹರಿಯದ ಪ್ರಶ್ನೆ.
ಅನೈತಿಕತೆ ಹೆಸರಿನಲ್ಲಿ ಕರಾವಳಿಯಲ್ಲಿ ನಡೆಯುತ್ತಿರುವ ದುಂಡಾವರ್ತಿಯ ಸಮಸ್ಯೆಗೆ ಆಳುವ ಸರ್ಕಾರದ ದ್ವಿಮುಖ ಧೋರಣೆಯೇ ಕಾರಣ ಎನ್ನುವುದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಅನಿಸಿಕೆ. ‘ಜಿಲ್ಲೆಯಲ್ಲಿ ಯಾವುದೇ ಬಲವಂತದ ಮತಾಂತರ ಆಗಿಲ್ಲ. ಕಟ್ಟುಕತೆಗಳನ್ನು ಸೃಷ್ಟಿಸಿ ಅವನ್ನು ಮತಾಂತರದ ಪ್ರಕರಣಗಳು ಎಂದು ಉಲ್ಲೇಖಿಸಲಾಗುತ್ತದೆ. ಪೊಲೀಸರು ಸರಿಯಾಗಿ ತನಿಖೆ ಮಾಡಿದರೆ ನಿಜ ವಿಷಯ ಆಚೆ ಬರುತ್ತದೆ. ಮತಗಳಿಸಲು, ಜಿಲ್ಲೆಯ ಜನತೆ ಮನಸ್ಸು ಕೆಡಿಸಲು ಮುಂದಾಗುವ ಪ್ರಯತ್ನಗಳನ್ನು ಪೊಲೀಸರು ತಡೆಯಬೇಕು’ ಎನ್ನುವುದು ಅವರ ಆಗ್ರಹ.
ಆಳುವ ಸರ್ಕಾರ ದಿಟ್ಟ ಧೋರಣೆ ತಳೆಯದಿದ್ದರೆ ಸಮಸ್ಯೆ ಬಗೆಹರಿಯದು ಎನ್ನುವುದನ್ನು ‘ವಕೀಲರ ಸಂಘ’ದ ಅಧ್ಯಕ್ಷ ಎಸ್.ಪಿ. ಚಂಗಪ್ಪ ಅವರೂ ಒಪ್ಪಿಕೊಳ್ಳುತ್ತಾರೆ. ಕಾಣೆಯಾದ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಅದಕ್ಕಾಗಿ ಪ್ರತ್ಯೇಕ ದಳ ರೂಪಿಸಬೇಕು. ಆಗ ಮತಾಂತರದ ಆರೋಪದ ಸತ್ಯಾಸತ್ಯತೆ ಬಯಲಾಗುತ್ತದೆ ಎಂದು ಹೇಳುತ್ತಾರೆ.
‘ಜಿಲ್ಲೆಯ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿವೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ, ಮಂಗಳೂರಿನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು, ಉದ್ಯಮಿಗಳು, ಆಡಳಿತ ಕ್ಷೇತ್ರದ ಪ್ರಮುಖ ಅಧಿಕಾರಿಗಳು, ಧಾರ್ಮಿಕ ಮುಖಂಡರ ಸಭೆ ಕರೆಯಲಾಗಿತ್ತು. ಎರಡೂ ಕೋಮಿನವರು ‘ಇನ್ನು ಮುಂದೆ ಪರಸ್ಪರ ದ್ವೇಷದ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಏನೇ ಸಮಸ್ಯೆ ಬಂದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು’ ಎನ್ನುವ ನಿರ್ಣಯ ತೆಗೆದುಕೊಂಡಿದ್ದರು. ಆದರೆ ಈ ನಿರ್ಣಯದ ಪಾಲನೆಯೇ ಆಗಲಿಲ್ಲ ಎನ್ನುವುದು ಬೇಸರದ ಸಂಗತಿ’ ಎನ್ನುತ್ತಾರೆ ಬಜರಂಗ ದಳದ ಮುಖಂಡ ಶರಣ್ ಪಂಪ್ವೆಲ್.
ಧಾರ್ಮಿಕ ಮುಖಂಡರ ಮಟ್ಟದಲ್ಲಿ ನಡೆಯುವ ಮಾತುಕತೆಗಳು ವಿಫಲವಾಗುವುದೇಕೆ ಎಂಬ ವಿಚಾರಕ್ಕೆ ವಿಶ್ವಹಿಂದೂ ಪರಿಷತ್ನ ಮುಖಂಡ ಪ್ರೊ. ಎಂ.ಬಿ. ಪುರಾಣಿಕ್ ಉತ್ತರಿಸುವುದು ಹೀಗೆ.
‘ದಕ್ಷಿಣ ಕನ್ನಡದಲ್ಲಿ ಗಲಭೆಯ ಆರೋಪಿಗಳನ್ನು ಬಂಧಿಸಿದ ಕೂಡಲೇ ಅಧಿಕಾರಿಗಳು ವರ್ಗವಾಗಿಬಿಡುತ್ತಾರೆ. ಇದನ್ನೆಲ್ಲ ಪರಿಶೀಲನಾ ದೃಷ್ಟಿಯಿಂದ ನೋಡುವವರಲ್ಲಿ ಆಕ್ರೋಶ ಮೂಡುವುದು ಸಹಜ. ರಾಜಕೀಯ ವಲಯದ ಮತ್ತು ಮಾಧ್ಯಮದ ಇಬ್ಬಗೆ ನೀತಿಯಿಂದ ಈ ಆಕ್ರೋಶ ಮತ್ತಷ್ಟು ಹೆಪ್ಪುಗಟ್ಟಿ ಕಾನೂನು ಕೈಗೆ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಕಾನೂನನ್ನು ಕೈಗೆತ್ತಿಕೊಳ್ಳುವುದು ಯಾವ ಕಾರಣಕ್ಕೂ ಸರಿಯಲ್ಲ’.
‘ರಾಜಕೀಯವನ್ನು ಹೊರಗಿಟ್ಟು, ಓಲೈಸುವಿಕೆಯನ್ನು ಕೈಬಿಟ್ಟು ಎಲ್ಲರೂ ನೆಮ್ಮದಿಯಿಂದ ಬಾಳುವೆ ಮಾಡುವಂತಹ ಪರಿಸ್ಥಿತಿ ಸೃಷ್ಟಿಸಲು ಎಲ್ಲ ಧರ್ಮದ ಮುಖಂಡರ ಸಭೆಯನ್ನು ಆಗಾಗ ಕರೆಯಬೇಕು. ಹಿಂದೂ ಧರ್ಮದಲ್ಲಿರುವ ಸಾವಿರಾರು ಸಮಸ್ಯೆಗಳು ಪರಿಹಾರ ಕಂಡುಕೊಂಡಿವೆ. ಇನ್ನೂ ಸಮಸ್ಯೆಗಳು ಹಲವಾರಿವೆ. ಅವುಗಳನ್ನು ಪರಿಹರಿಸುವತ್ತ ಮುಖ ಮಾಡಬೇಕೇ ಹೊರತು ಮತಾಂತರದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇತರ ಧರ್ಮಗಳಲ್ಲಿರುವ ಕೆಡುಕುಗಳ ಬಗ್ಗೆ ಮೌನವಾಗಿದ್ದುಕೊಂಡು ಕೇವಲ ಹಿಂದೂ ಧರ್ಮವನ್ನೇ ಗುರಿಯಾಗಿಸಿ ದಾಳಿ ಮಾಡುವುದು ಕೂಡ ಸರಿಯಲ್ಲ. ಅಲ್ಲದೆ, ಧರ್ಮಸೂಕ್ಷ್ಮವಾದ ಪ್ರದೇಶ ಎಂದ ಮೇಲೆ ಅಲ್ಲಿ ಮುಂಜಾಗ್ರತೆಯನ್ನೂ ತೆಗೆದುಕೊಳ್ಳುವುದು ಅನಿವಾರ್ಯ’ ಎನ್ನುವುದು ಪ್ರೊ. ಪುರಾಣಿಕ್ ಅನಿಸಿಕೆ.
ಆದರೆ, ಸೌಹಾರ್ದತೆಯ ನೆಪದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಯೂ ಪರಸ್ಪರ ನಿಂದನೆ ದೂಷಣೆಗಳೇ ಇರುತ್ತವೆ. ಆದ್ದರಿಂದ ಯುವಜನತೆ ಒಂದಲ್ಲ ಒಂದು ದಿಕ್ಕಿಗೆ ತಳ್ಳಲ್ಪಟ್ಟು ವಿಷದ ಕಾವು ಏರುತ್ತಲೇ ಸಾಗುತ್ತಿರುವುದನ್ನು ಮರೆಯುವಂತಿಲ್ಲ. ‘ಇಲ್ಲಿ ಕೋಮು ಸಂಘಟನೆಗಳು ಬಲಗೊಳ್ಳುವ ಬದಲು ಜಾತ್ಯತೀತ ಸಂಘಟನೆಗಳು ಬಲವಾಗಬೇಕು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸಾಮೂಹಿಕ ಮದುವೆಯನ್ನೂ ಒಂದೇ ವೇದಿಕೆಯಲ್ಲಿ ನಡೆಸಬೇಕು ಎಂಬ ಕನಸು ನನ್ನದು’ ಎಂದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಉಮರ್ ಯು.ಎಚ್. ಸುಂದರ ಕನಸೊಂದನ್ನು ಹಂಚಿಕೊಳ್ಳುತ್ತಾರೆ. ಅವರ ಕನಸು ನನಸಾಗಬೇಕಾದರೆ ಕೇವಲ ಅನೈತಿಕ ಪೊಲೀಸ್ಗಿರಿಯನ್ನು ವಿರೋಧಿಸಿದರೆ ಸಾಲದು. ಅನೈತಿಕ ಪೊಲೀಸ್ಗಿರಿ ಪರಿಕಲ್ಪನೆ ಹಿಂದೆ ಇರುವ ‘ಹೆಣ್ಣಿನ ದೇಹ ಮತ್ತು ಮಾನ ಕಾಪಾಡುವ’ ಪುರುಷ ಪ್ರಾಧಾನ್ಯ ಮತ್ತು ಯಜಮಾನಿಕೆಯನ್ನು ವಿರೋಧಿಸಬೇಕು ಎಂದು ಸಲಹೆ ಕೊಡುತ್ತಾರೆ ಚಿಂತಕ ಜಿ. ರಾಜಶೇಖರ್.
ರಾಜಶೇಖರ್ ಅವರ ಮಾತಿಗೆ ಪೂರಕವಾಗಿ– ‘ಬಾಲ್ಯದಲ್ಲಿ ಹೆಣ್ಣುಮಕ್ಕಳಿಗೆ ಹೀಗಿರು ಹಾಗಿರು ಎಂದು ಹೇಳುವ ಬದಲು, ಗಂಡುಮಕ್ಕಳಿಗೆ ಹೇಗಿರಬೇಕು ಎಂಬ ತಿಳಿವಳಿಕೆ ನೀಡಬೇಕು. ಅವರ ಮನಸ್ಸಿನಲ್ಲಿ ಸೌಜನ್ಯ, ಮಾನವೀಯತೆಯ ಬೀಜ ಬಿತ್ತಿದರೆ, ಅವರು ಬೆಳೆದ ನಂತರ ಯಾವ ಧರ್ಮದ ಅಫೀಮೂ ಅವರನ್ನು ತೀರಾ ಕೆಳಮಟ್ಟಕ್ಕೆ ದೂಡದು’ ಎಂದು ಹಿರಿಯ ಲೇಖಕಿ ವೈದೇಹಿ ಹೇಳುತ್ತಾರೆ.