ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಅಂತಿಮ ಸಂದೇಶ

ಹೋರಾಟದ ರಥ
Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

1956ರ  ಜುಲೈ 31. ಸಮಯ ಸಂಜೆ 5.30. ತಮ್ಮ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಅವರಿಗೆ  ಕೆಲವು ಪತ್ರಗಳನ್ನು ಡಿಕ್ಟೇಟ್‌ ಮಾಡಿದ ಬಾಬಾಸಾಹೇಬ ಅಂಬೇಡ್ಕರ್‌ ಅವರು ಇದ್ದಕ್ಕಿದ್ದಂತೆ ಅಪ್‌ಸೆಟ್‌ ಆದರು! ಕೆಲಹೊತ್ತು ಏನನ್ನೂ ಮಾತನಾಡದ ಅವರ ಈ ವರ್ತನೆ ರತ್ತು ಅವರಲ್ಲಿ ಗಾಬರಿ ಉಂಟುಮಾಡಿತು.

ಎಚ್ಚೆತ್ತ ರತ್ತು ಅವರು ಅಂಬೇಡ್ಕರ್‌ರ ಹಾಸಿಗೆಯ ಒಂದು ಕಡೆ ಬಂದು ಸ್ಟೂಲ್‌ನ ಮೇಲೆ ಕುಳಿತುಕೊಂಡರು. ಭಯದಿಂದ ನಡುಗುತ್ತಾ ಅಂಬೇಡ್ಕರ್‌ರನ್ನು ‘ಸರ್, ಕ್ಷಮಿಸಿ ನನಗೆ ಸತ್ಯ ತಿಳಿಯಬೇಕು. ಈಚಿನ ದಿನಗಳಲ್ಲಿ ನೀವು ತುಂಬಾ ದುಃಖಿತರಾಗಿರುತ್ತೀರಿ, ಖಿನ್ನರಾಗಿರುತ್ತೀರಿ, ಅಳುತ್ತಿರುತ್ತೀರಿ. ಯಾಕೆ ಹೀಗೆ’ ಎಂದು ಕೇಳಿಯೇ ಬಿಟ್ಟರು! ರತ್ತು ಅವರ ಈ ಗಾಬರಿ ಅಂಬೇಡ್ಕರ್‌ಗೆ ಅರ್ಥವಾಗಿತ್ತು.

ಸಾವರಿಸಿಕೊಂಡ ಅವರು, ತಮ್ಮ ಆ ದುಃಖಕ್ಕೆ ಕಾರಣ ಮತ್ತು ಆ ಕಣ್ಣೀರಿನ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು. ಅಂಬೇಡ್ಕರ್‌ರ ಆ ನೋವಿನ ನುಡಿಗಳನ್ನು ದಾಖಲಿಸುವುದಾದರೆ, ‘ನನ್ನ ದುಃಖಕ್ಕೆ ಕಾರಣವಾದ ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು.

ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ  ಕಾಣುತ್ತಿಲ್ಲ.   ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ  ನಾನು ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಶಕ್ತ ಮತ್ತು ನಿರಾಶನಾಗಿದ್ದೇನೆ.

ಹಾಗೆ ಹೇಳುವುದಾದರೆ ನಾನು ಇದುವರೆಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತ್ತಿದ್ದಾರೆ. ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲ್ಲಿ ಅವರು ಅಯೋಗ್ಯರಾಗಿದ್ದಾರೆ.

ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲ್ಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.  ಸಮುದಾಯದ ಸೇವೆಯನ್ನು ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ’ ಎಂದು ಮೀಸಲಾತಿಯ ಲಾಭ ಪಡೆದು ನೌಕರಿ ಗಿಟ್ಟಿಸಿ ಸ್ವಾರ್ಥಿಗಳಾಗಿರುವ ತನ್ನ ಸಮುದಾಯದ ಸರ್ಕಾರಿ ನೌಕರರ ಬಗ್ಗೆ ಹೇಳುತ್ತ ಹೋಗುತ್ತಾರೆ.

‘ಆ ಕಾರಣಕ್ಕಾಗಿ ನನ್ನ ಗಮನವನ್ನು ಇನ್ನು ಮುಂದೆ ನಾನು ಹಳ್ಳಿಗಳಲ್ಲಿನ, ಶೋಷಣೆಯನ್ನು ಇನ್ನೂ ಅನುಭವಿಸುತ್ತಿರುವ, ಆರ್ಥಿಕ ದುಃಸ್ಥಿತಿಯಲ್ಲಿ ಹಾಗೆಯೇ ಇರುವ ನನ್ನ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಹರಿಸಬೇಕೆಂದಿದ್ದೇನೆ. ಆದರೆ ನನಗಿರುವುದು ಇನ್ನು ಕೆಲವೇ ದಿನಗಳು!’ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಮುಂದುವರಿದು ಅವರು, ‘ನನ್ನ ಎಲ್ಲಾ ಕೃತಿಗಳನ್ನು ನನ್ನ ಜೀವಿತದ ಅವಧಿಯಲ್ಲೇ ಪ್ರಕಟಿಸಬೇಕೆಂದು  ಬಯಸಿದ್ದೆ. ‘ಬುದ್ಧ ಮತ್ತು ಕಾರ್ಲ್‌ಮಾರ್ಕ್ಸ್‌’, ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಮತ್ತು ‘ಹಿಂದೂ ಧರ್ಮದ ಒಗಟುಗಳು’ ಎಂಬ ಆ ನನ್ನ ಮಹೋನ್ನತ ಕೃತಿಗಳು ಇನ್ನೂ ಪ್ರಕಟಗೊಂಡಿಲ್ಲ.  ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ.

ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದುಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ. ನನ್ನ ಚಿಂತೆಗೆ ಇದೂ ಕೂಡ ಪ್ರಮುಖ ಕಾರಣ’ ಎಂದು ತಮ್ಮ ಕೃತಿಗಳು ಪ್ರಕಟವಾಗದ್ದರ ಬಗ್ಗೆ ಅಂಬೇಡ್ಕರ್‌ ನೋವು ತೋಡಿಕೊಳ್ಳುತ್ತಾರೆ. ನಿಜ,  ಅಂಬೇಡ್ಕರ್‌ರ ನಿಧನದ ದಶಕಗಳ ನಂತರ ಅವರ ಕೃತಿಗಳು ಮಹಾರಾಷ್ಟ್ರ ಸರ್ಕಾರದ ವತಿಯಿಂದ ಪ್ರಕಟಗೊಂಡಿರಬಹುದು. ಅವರು ಬದುಕಿದ್ದಾಗಲೇ ಪ್ರಕಟಗೊಂಡಿದ್ದರೆ? ಅಂಬೇಡ್ಕರ್ ಎಂಬ ಅಪ್ರತಿಮ ಲೇಖಕನಿಗೆ ಅದರಿಂದ ಸಂಪೂರ್ಣ ಆನಂದ ಸಿಗುತ್ತಿತ್ತು.

ಅಂದಹಾಗೆ ತಮ್ಮ ಚಳವಳಿಯ ಭವಿಷ್ಯದ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸುವ ಅವರು, ‘ನನ್ನ ನಂತರ ಅಥವಾ ನನ್ನ ಜೀವಿತದ ಅವಧಿಯಲ್ಲೇ ಶೋಷಿತ ಸಮುದಾಯದಿಂದ ಬಂದವರೊಬ್ಬರು ನನ್ನ ಈ ಚಳವಳಿಯನ್ನು ಮುನ್ನಡೆಸುವರೆಂದು ನಾನು ಭಾವಿಸಿದ್ದೆ. ಆದರೆ ಈ ಸಂದರ್ಭದಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹವರ್ತಿಗಳ ಪೈಕಿ  ಯಾರಲ್ಲಿ ನಾನು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನಹರಿಸುತ್ತಿಲ್ಲ.

ಬದಲಿಗೆ ನಾಯಕತ್ವ ಮತ್ತು ಅಧಿಕಾರಕ್ಕಾಗಿ ತಮ್ಮ ತಮ್ಮಲ್ಲೇ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನರಿಗೆ ಸೇವೆ ಸಲ್ಲಿಸಬೇಕೆಂಬ ಅದಮ್ಯ ಆಸೆ ನನಗೆ ಇನ್ನೂ ಇದೆ.  ಆದರೆ? ಪೂರ್ವಗ್ರಹ ಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಂಧಪಟ್ಟಂತೆ ಯಾರಾದರೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!’ ಎಂದು  ನಿಟ್ಟುಸಿರುಬಿಡುತ್ತಾರೆ.
 
ಮುಂದುವರಿದು ‘ಅದೇನೇ ಇರಲಿ, ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ಜನ ಮೆಚ್ಚುವಂತಹ ಅನೇಕ ಉತ್ತಮ ಕಾರ್ಯಗಳನ್ನು ನಾನು ಮಾಡಿದ್ದೇನೆ. ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ’ ಎನ್ನುತ್ತಾ ಇದ್ದಕ್ಕಿದ್ದಂತೆ ಗದ್ಗದಿತರಾಗುತ್ತಾರೆ. ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತ್ತಾರೆ.

ಹಾಗೆ ಅಳುತ್ತಾ ಸಹಾಯಕ  ರತ್ತು ಅವರತ್ತ ಒಮ್ಮೆ ನೋಡುತ್ತಾರೆ. ರತ್ತು ಕೂಡ ಆ ಕ್ಷಣದಲ್ಲಿ ಬಾಬಾಸಾಹೇಬರ ದುಃಖದಲ್ಲಿ ಭಾಗಿಯಾಗುತ್ತಾರೆ. ಬಾಬಾಸಾಹೇಬರಿಗೆ ಏನನ್ನಿಸಿತೋ? ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ನೋಡುತ್ತಾ ಸ್ವಲ್ಪ ಸಾವರಿಸಿಕೊಂಡು ರತ್ತುರನ್ನು ಸಮಾಧಾನಿಸುತ್ತಾ ಮೆಲ್ಲಗೆ ಹೇಳುತ್ತಾರೆ ‘ಧೈರ್ಯ ತಂದುಕೋ ರತ್ತು.ಎದೆಗುಂದಬೇಡ. ಎಂದಾದರೂ ಒಂದು ದಿನ ಈ ಜೀವನ ಕೊನೆಗೊಳ್ಳಲೇಬೇಕು!’

‘ಜೀವನ... ಕೊನೆ...’ ಅಂಬೇಡ್ಕರ್‌ರ ಈ ಮಾತು ಕೇಳುತ್ತಲೇ ರತ್ತು ಆಘಾತಕ್ಕೊಳಗಾಗುತ್ತಾರೆ. ಈ ಮಾತಿನ ಅರ್ಥವಾದರೂ ಏನು ಎಂದು ಗಾಬರಿಗೊಳ್ಳುತ್ತಾರೆ. ಏನು ಮಾಡಬೇಕೆಂದು ಒಂದು ಕ್ಷಣ ರತ್ತುರವರಿಗೆ ತೋಚದಿರುವಾಗ ಬಾಬಾಸಾಹೇಬರೇ ತಮ್ಮ ಕಣ್ಣು ಒರೆಸಿಕೊಂಡು ಕೈಯನ್ನು ಸ್ವಲ್ಪ ಮೇಲೆತ್ತಿ ಹೀಗೆ ಹೇಳುತ್ತಾರೆ, ‘ನಾನಕ್ ಚಂದ್ ರತ್ತು. ನನ್ನ ಜನರಿಗೆ ಹೇಳು. ನಾನು ಇದುವರೆಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ.

ತುಂಬಾ ಶ್ರಮವಹಿಸಿ ಈ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲಿ, ತೊಂದರೆಗಳಾಗಲಿ ಆ ಹೋರಾಟದ ರಥ ಮುನ್ನಡೆಯಲೇಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹವರ್ತಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು.

ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ಇದನ್ನು ನೀನು ಅವರಿಗೆ ಹೇಳು..., ಹೋಗು... ಅವರಿಗೆ ಹೇಳು..., ಹೋಗು... ಅವರಿಗೆ ಹೇಳು...’ ಎನ್ನುತ್ತಾ ಅಂಬೇಡ್ಕರ್‌ ‘ನಿದ್ರೆ’ಗೆ ಹೊರಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT