ನವದೆಹಲಿ: ಸಂಸತ್ ಭವನದ ವಿಡಿಯೊ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಭದ್ರತೆಗೆ ಧಕ್ಕೆ ಉಂಟು ಮಾಡಿರುವ ಎಎಪಿಯ ಸಂಸತ್ ಸದಸ್ಯ ಭಗವಂತ್ ಮಾನ್ ಅವರನ್ನು ಚಳಿಗಾಲ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.
ಕಿರಿಟ್ ಸೋಮಯ್ಯ ನೇತೃತ್ವದ 9 ಸದಸ್ಯರ ಸದನ ಸಮಿತಿಯು ಭಗವಂತ್ ವಿರುದ್ಧದ ಆಪಾದನೆಯ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು.
ಸಂಸತ್ ಸದಸ್ಯರಾಗಿ ಭಗವಂತ ಅವರು ವಿಡಿಯೊ ಚಿತ್ರೀಕರಣ ಮೂಲಕ ಸಂಸತ್ ಭವನದ ದೃಶ್ಯಗಳನ್ನು ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದು ಆಕ್ಷೇಪಾರ್ಹ ಎಂದು ಸಮಿತಿಯು ವರದಿಯಲ್ಲಿ ಹೇಳಿದೆ.
ವರದಿಯನ್ನು ಒಪ್ಪಿಕೊಂಡ ಸದನವು ಭಗವಂತ್ ಅವರನ್ನು ಚಳಿಗಾಲ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡುವ ನಿರ್ಣಯವನ್ನು ಅಂಗೀಕರಿಸಿತು. ವಿಚಾರಣಾ ಸಮಿತಿಯ ಮುಖ್ಯಸ್ಥರಾಗಿದ್ದ ಕಿರಿಟ್ ಸೋಮಯ್ಯ ಅವರೇ ನಿರ್ಣಯವನ್ನು ಮಂಡಿಸಿದರು.