ತುರ್ತುಪರಿಸ್ಥಿತಿ ಮುಂದುವರಿಕೆ: ಸದ್ಯಕ್ಕೆ ಬದಲಾವಣೆ ಯುಕ್ತವಲ್ಲ– ಚವಾಣ್
ನವದೆಹಲಿ, ಡಿ. 10– ಸದ್ಯದ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದ ಭಾರತ ಸರ್ಕಾರವು ತುರ್ತುಪರಿಸ್ಥಿತಿಯು ಸದ್ಯಕ್ಕೆ ಮುಂದುವರಿಯಲೆಂದು ನಿರ್ಧರಿಸಿದೆ. ನಾಲ್ಕು ವರ್ಷಗಳಿಂದ ಜಾರಿಯಲ್ಲಿರುವ ತುರ್ತುಪರಿಸ್ಥಿತಿಯನ್ನು ಅಂತ್ಯಗೊಳಿಸುವ ಪ್ರಶ್ನೆ ಬಗ್ಗೆ ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಮಂಡಿಸಿದ್ದ ಗಮನ ಸೆಳೆಯುವ ನಿರ್ಣಯವೊಂದಕ್ಕೆ ಗೃಹ ಸಚಿವ ಚವಾಣ್ ಈ ಉತ್ತರ ನೀಡಿದರು.
***
ಮಾತೆಗೆ ಪ್ರಣಾಮ
ಬೆಂಗಳೂರು, ಡಿ. 10– ‘ಮಾನವತೆ ನನ್ನ ಮೇಲೆ ಹೊರಿಸಿರುವ ಕರುಣೆ, ಪ್ರೇಮದ ಸಾಲದ ಹೊರೆಯನ್ನು ತೀರಿಸಲು, ಮತ್ತೆ ನಾನು ಈ ದೇಶದಲ್ಲಿ ಹುಟ್ಟಲು ಇಚ್ಛಿಸುತ್ತೇನೆ’.ಇಂದಿಗೆ 64ನೇ ವಯಸ್ಸನ್ನು ದಾಟಿದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಕಳೆದ ನಾಲ್ಕು ದಶಕಗಳ ಕಾಲದ ತಮ್ಮ ಸಾರ್ವಜನಿಕ ಜೀವನದ ಮೈಲಿಗಲ್ಲುಗಳನ್ನು ನೆನೆದರು. ನೆನೆದು ಕಂಬನಿ ದುಂಬಿದರು.
‘ನನ್ನ ಮೂರನೇ ವಯಸ್ಸಿನಲ್ಲಿ ತಂದೆ ತೀರಿಹೋದರು. ಹೋಗುವಾಗ ಸಾಲದ ಬಳುವಳಿ ಬಿಟ್ಟುಹೋದರು. ಎರಡಾಣೆಗಳ ಸಂಪಾದನೆಗಾಗಿ ನನ್ನ ತಾಯಿ ಹಗಲಿರುಳು ದುಡಿದರು. ನಾನಿಂದು ಸ್ವಾತಂತ್ರ್ಯ ಪ್ರಿಯನಾಗಿರುವೆನಾದರೆ ಅದಕ್ಕೆ ಕಾರಣ ಆಕೆ’ ಎಂದರು.