ಕವಿ ಬೇಂದ್ರೆ ಅವರಿಗೆ ಗೌರವ ಪ್ರಶಸ್ತಿ
ಮೈಸೂರು, ಡಿ. 15– ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಖ್ಯಾತರಾಗಿರುವ ವರಕವಿ ಶ್ರೀ ದ.ರಾ. ಬೇಂದ್ರೆಯವರಿಗೆ ಮೈಸೂರು ವಿಶ್ವವಿದ್ಯಾನಿಲಯ ಇಂದು ಡಿ. ಲಿಟ್ ಗೌರವ ಪ್ರಶಸ್ತಿ ನೀಡಿ ಗೌರವಿಸಿತು.
*
ಶನಿವಾರ ಬೆಳಿಗ್ಗೆ ಫತೇಸಿಂಗರ ನಿರಶನ ಆರಂಭ
ಅಮೃತ್ಸರ್, ಡಿ. 15– ಡಿಸೆಂಬರ್ 17 ರಂದು 11 ಗಂಟೆಗೆ ಅಕಾಲಿ ತಖ್ತ್ನಲ್ಲಿ ಸಂತ್ ಫತೇಸಿಂಗರು ಉಪವಾಸ ಆರಂಭಿಸುವರೆಂದು ಅಕಾಲಿದಳದ ವಕ್ತಾರನು ತಿಳಿಸಿದ್ದಾನೆ. ಸಂತರ ನಿರಶನವು ಡಿ. 27ರಂದು ಆತ್ಮಾರ್ಪಣೆ ಮಾಡುವುದರೊಂದಿಗೆ ಮುಕ್ತಾಯವಾಗುವುದು.
ಉಪವಾಸಾರಂಭಕ್ಕೆ ಮೊದಲು ಸಂತರು ಸಭೆಯೊಂದನ್ನು ಉದ್ದೇಶಿಸಿ ಭಾಷಣ ಮಾಡುವರು ಹಾಗೂ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಸದಸ್ಯರ ಜೊತೆ ವಿಚಾರ ವಿನಿಮಯ ನಡೆಸುವರು.
*
ವಾಲ್ಟ್ ಡಿಸ್ನೆ ಅವರ ನಿಧನ
ಬರ್ಬ್ಯಾಂಕ್ (ಕ್ಯಾಲಿಫೋರ್ನಿಯಾ), ಡಿ. 15– ವಿಶ್ವ ವಿಖ್ಯಾತ ಚಲನಚಿತ್ರ ನಿರ್ಮಾಪಕ ವಾಲ್ಟ್ ಡಿಸ್ನೆ ಅವರು ಇಂದು ಹೃದಯಾಘಾತದಿಂದ ಇಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಆರುನೂರಕ್ಕಿಂತ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ವಾಲ್ಟ್ ಡಿಸ್ನೆ ಅವರು ಡಿಸೆಂಬರ್ 5ರಂದು ತಮ್ಮ ಜನ್ಮ ದಿನೋತ್ಸವವನ್ನು ಆಚರಿಸಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
*
ಅಮೆರಿಕದಿಂದ ಜೀವಿಗಳಿರುವ ಉಪಗ್ರಹ ಪ್ರಯೋಗ
ಕೇಪ್ ಕೆನಡಿ, ಡಿ. 15– ಮೂರು ದಿನಗಳ ಕಾಲ ಅಂತರಿಕ್ಷದಲ್ಲಿ ಭೂ ಪ್ರದಕ್ಷಿಣೆ ಮಾಡಲು, ಕೀಟಗಳು, ಸಸ್ಯಗಳು, ಮಣ್ಣು ಮತ್ತು ಏಕಾಣು ಜೀವಿಗಳು (ಬ್ಯಾಕ್ಟೀರಿಯಾ) ಇರುವ ಹಾರುವ ಪ್ರಯೋಗಾಲಯವನ್ನು ಅಮೆರಿಕ ನಿನ್ನೆ ಪ್ರಯೋಗಿಸಿತು.