ಪ್ರಧಾನಿಗಳ ಜೊತೆ ಭಿನ್ನಾಭಿಪ್ರಾಯವಿಲ್ಲ: ಕಾಮರಾಜ್ ಸ್ಪಷ್ಟನೆ
ನವದೆಹಲಿ, ಡಿ. 16– ಪ್ರಧಾನಿಗಳ ಜೊತೆ ತಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಕೆ. ಕಾಮರಾಜ್ ಇಂದು ಇಲ್ಲಿ ನುಡಿದರು.
ಪ್ರೆಸ್ ಕ್ಲಬ್ ಆಫ್ ಇಂಡಿಯಾ ಇಂದು ಇಲ್ಲಿ ಏರ್ಪಡಿಸಿದ ಭೋಜನ ಕೂಟದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುತ್ತ, ಅಂಥ ‘ಭಿನ್ನಾಭಿಪ್ರಾಯ’ಗಳಿಗೆ ಸಂಬಂಧಿಸಿದ ವರದಿಗಳು ತಪ್ಪಾದುವುಗಳೆಂದು ಅವರು ಹೇಳಿದರು.
ಸಾರಿಗೆ ಸಚಿವರ ರಾಜಿನಾಮೆ ವದಂತಿ ನಿರಾಕರಣೆ
ಬೆಂಗಳೂರು, ಡಿ. 16– ಸಾರಿಗೆ ಸಚಿವ ಶ್ರೀ ಡಿ. ದೇವರಾಜ ಅರಸು ಅವರು ಸಚಿವ ಪದವಿಗೆ ರಾಜಿನಾಮೆ ನೀಡಿದ್ದಾರೆಂಬ ವದಂತಿ ಇಂದು ನಗರದಲ್ಲಿ ಹರಡಿತ್ತು.
ಈ ವದಂತಿಯನ್ನು ಸಂಜೆ ವರದಿಗಾರರು ತಮ್ಮ ಗಮನಕ್ಕೆ ತಂದಾಗ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ವದಂತಿ ನಿಜವಲ್ಲವೆಂದು ತಿಳಿಸಿದರು.
ಕಾಂಗ್ರೆಸ್ಸಿಗೆ ಕೃಷ್ಣಮೆನನರ ರಾಜಿನಾಮೆ?
ನವದೆಹಲಿ, ಡಿ. 16– ತಮ್ಮ ಕ್ಷೇತ್ರವಾದ ಉತ್ತರ ಮುಂಬೈನಿಂದ ಮಹಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟ ಮಾಜಿ ರಕ್ಷಣಾ ಸಚಿವ ಶ್ರೀ ವಿ.ಕೆ. ಕೃಷ್ಣಮೆನನ್ ಅವರು ಕಾಂಗ್ರೆಸ್ಸಿಗೆ ರಾಜಿನಾಮೆ ಕೊಟ್ಟು, ಸ್ವತಂತ್ರ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆಂದು ಅಧಿಕೃತವಾಗಿ ಗೊತ್ತಾಗಿದೆ.
ನಿನ್ನೆ ರಾತ್ರಿ ಬಹಳ ಹೊತ್ತಿನ ನಂತರ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿದ ಶ್ರೀ ಕೃಷ್ಣಮೆನನರು ತಮ್ಮ ನಿರ್ಧಾರವನ್ನು ಅವರಿಗೆ ತಿಳಿಸಿದರು.