ಅವಶ್ಯ ಕ್ರಮಗಳಿಂದ ಶೀಘ್ರವೇ ಅಕ್ಕಿ ಉತ್ಪಾದನೆ ಹೆಚ್ಚಿಸಲು ಸಾಧ್ಯ ಎಂದು ಸಚಿವ ಸುಬ್ರಹ್ಮಣ್ಯಂ
ನವದೆಹಲಿ, ಡಿ. 17– ಉತ್ಪಾದನೆಯನ್ನು ಹೆಚ್ಚಿಸಲು ಈಗ ಆರಂಭಿಸಲಾಗಿರುವ ಕಾರ್ಯಕ್ರಮಗಳನ್ನು ಕ್ರಮವತ್ತಾಗಿ ಮುಂದುವರಿಸಿದರೆ ಭಾರತವು ಶೀಘ್ರವೇ ಅಕ್ಕಿಯನ್ನು ರಫ್ತು ಮಾಡುವ ಮುಖ್ಯ ರಾಷ್ಟ್ರವಾಗಬಹುದೆಂಬ ಆಶಯವನ್ನು ಕೇಂದ್ರ ಆಹಾರ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಮ್ ಇಂದು ವ್ಯಕ್ತಪಡಿಸಿದರು.
ರಾಷ್ಟ್ರೀಯ ಅಕ್ಕಿ ಸಪ್ತಾಹವನ್ನು ಆಹಾರ ಸಚಿವರು ಉದ್ಘಾಟಿಸುತ್ತಿದ್ದರು.
ನೀರಾವರಿ ಯೋಜನೆ ಕ್ಷೇತ್ರ ಅಭಿವೃದ್ಧಿಗೆ ಕಾರ್ಪೊರೇಷನ್ ರಚನೆ
ಅಗತ್ಯವೆಂದು ಸಚಿವರು
ಬೆಂಗಳೂರು, ಡಿ. 17– ಬೃಹತ್ ನೀರಾವರಿ ಯೋಜನೆ ಕ್ಷೇತ್ರಗಳ ಅಭಿವೃದ್ಧಿಗೆ, ಸ್ವತಂತ್ರ ಕಾರ್ಪೊರೇಷನ್ಗಳ ರಚನೆ ಮಾಡಬೇಕಾದುದು ಅಗತ್ಯವೆಂದು, ಲೋಕೋಪಯೋಗಿ ಸಚಿವ ಶ್ರೀವೀರೇಂದ್ರ ಪಾಟೀಲರು ಇಂದು ಇಲ್ಲಿ ಅಭಿಪ್ರಾಯಪಟ್ಟರು.
ಸಂಜೆ ಭಾರತದ ಎಂಜಿನಿಯರುಗಳ ಸಂಸ್ಥೆಯ ಮೈಸೂರು ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಚಿವರು, ನೂರಾರು ಕೋಟಿ ರೂಪಾಯಿಗಳ ವೆಚ್ಚ ಮಾಡಿ ನೀರಾವರಿ ಯೋಜನೆಗಳನ್ನು ನಿರ್ಮಿಸಿದ ಸರಕಾರ, ಮತ್ತೆ ನೀರಿನ ಬಳಕೆಗೂ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿಯನ್ನು ನಿವಾರಿಸಲು ಇಂತಹ ಕಾರ್ಪೊರೇಷನ್ ಉಪಯುಕ್ತವಾಗುವುದೆಂದರು.
‘ರಾಜೀನಾಮೆ ನೀಡಿಲ್ಲ’ ಸಚಿವ ಶ್ರೀ ಅರಸ್
ಬೆಂಗಳೂರು, ಡಿ. 17– ತಾವು ಸಚಿವ ಪದವಿಗೆ ರಾಜೀನಾಮೆ ಕೊಟ್ಟಿರುವುದಾಗಿ ಹರಡಿರುವ ವದಂತಿ ನಿಜವಲ್ಲವೆಂದು ಸಾರಿಗೆ ಸಚಿವ ಶ್ರೀ ಡಿ. ದೇವರಾಜ ಅರಸ್ ಅವರು ಇಂದು ವರದಿಗಾರರಿಗೆ ತಿಳಿಸಿದರು.