ಹುಣಸೂರು ಕ್ಷೇತ್ರದ ಬಗ್ಗೆ ‘ವಿಷಯ’ ಪರಿಶೀಲಿಸಿ ಎಸ್.ಎನ್. ನಿರ್ಧಾರ
ಬೆಂಗಳೂರು, ಡಿ. 22– ಸಾರಿಗೆ ಸಚಿವ ಶ್ರೀ ಡಿ. ದೇವರಾಜ್ ಅರಸ್ ಅವರು ಕಾಂಗ್ರೆಸ್ ಟಿಕೆಟ್ ಕೇಳಿ ಅರ್ಜಿ ಹಾಕಿರುವ ಹುಣಸೂರು ಕ್ಷೇತ್ರದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
ಕಾಂಗ್ರೆಸ್ಸಿನ ಕೇಂದ್ರ ಚುನಾವಣೆ ಸಮಿತಿಯಲ್ಲಿ ನಡೆದ ಚರ್ಚೆಯ ದೃಷ್ಟಿಯಲ್ಲಿ ‘ವಿಷಯವನ್ನು ಮತ್ತೆ ಪರಿಶೀಲಿಸಿ’ ಸಚಿವರ ಅರ್ಜಿಯ ಬಗ್ಗೆ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ತಾವು ಪರಿಶೀಲಿಸುವ ವಿಷಯ ಯಾವುದೆಂಬುದನ್ನು ಮುಖ್ಯಮಂತ್ರಿಗಳು ತಿಳಿಸಲು ನಿರಾಕರಿಸಿದರು.
ಪ್ರದೇಶ ಸಮಿತಿಗೆ ಅರ್ಜಿ ಹಾಕಿದರೆ ವೀರಣ್ಣ ಗೌಡರಿಗೆ ಮದ್ದೂರು ಕ್ಷೇತ್ರ ಸಂಭವ
ಬೆಂಗಳೂರು, ಡಿ. 22– ಪ್ರದೇಶ ಚುನಾವಣೆ ಸಮಿತಿಗೆ ಕಾಂಗ್ರೆಸ್ ಟಿಕೆಟ್ ಕೇಳಿ ಅರ್ಜಿ ಹಾಕದಿದ್ದ ಮಾಜಿ ಸಚಿವ ಶ್ರೀ ಎಚ್.ಕೆ. ವೀರಣ್ಣಗೌಡ ಅವರು ಈಗ ಪ್ರದೇಶ ಚುನಾವಣೆ ಸಮಿತಿಗೆ ಟಿಕೆಟ್ ಕೇಳಿ ಅರ್ಜಿ ಹಾಕಿದರೆ ಅವರಿಗೆ ಮದ್ದೂರು ಕ್ಷೇತ್ರವನ್ನು ನೀಡುವ ಸಂಭವವಿದೆ. ಇಂದು ಇಲ್ಲಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ವರದಿಗಾರರ ಪ್ರಶ್ನೆಗಳಿಗೆ ನೀಡಿದ ಉತ್ತರಗಳಿಂದ ಈ ಪರಿಸ್ಥಿತಿಯಿರುವುದು ಸ್ಪಷ್ಟವಾಯಿತು.
ಕಾಂಗ್ರೆಸ್ಗೆ ಮೆನನ್ ರಾಜೀನಾಮೆ
ನವದೆಹಲಿ, ಡಿ. 22– ಮಾಜಿ ರಕ್ಷಣಾ ಸಚಿವ ಶ್ರೀ ವಿ.ಕೆ. ಕೃಷ್ಣ ಮೆನನ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದೊಡನೆ ತಮ್ಮ 36 ವರ್ಷದ ನಿಕಟ ಸಂಪರ್ಕವನ್ನು ಇಂದು ಕೊನೆಗಾಣಿಸಿದರು.
ಸ್ವತಂತ್ರ ಅಭ್ಯರ್ಥಿಯಾಗಿ ಮೆನನ್ ಸ್ಪರ್ಧಿಸುವ ವಿಷಯ ತಿಳಿಯದು ಎಂದು ಇಂದಿರಾ
ನವದೆಹಲಿ, ಡಿ. 22– ಈಶಾನ್ಯ ಮುಂಬಯಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಶ್ರೀ ವಿ.ಕೆ. ಕೃಷ್ಣ ಮೆನನ್ ಅವರು ತಮ್ಮೊಡನೆ ಇತ್ತೀಚೆಗೆ ಮಾತುಕತೆ ನಡೆಸಿದಾಗ ತಿಳಿಸಲಿಲ್ಲವೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.