ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಹಣ್ಣಾಗಿರುವ ಕಾಫಿಯ ಕೊಯ್ಲಿಗೆ ಬೆಳೆಗಾರರು ಮುಂದಾಗಿದ್ದಾರೆ. ಜನವರಿ ತಿಂಗಳ ಅಂತ್ಯದಲ್ಲಿ ತುಂತುರು ನೀರಾವರಿ ಮೂಲಕ ನೀರು ಹಾಯಿಸಿದ್ದ ಬೆಳೆಗಾರರ ತೋಟಗಳಲ್ಲಿ ಮಾತ್ರ ರೋಬಸ್ಟಾ ಕಾಫಿ ಸಂಪೂರ್ಣ ಹಣ್ಣಾಗಿದೆ.
ವಾರದ ಹಿಂದೆ ಸುರಿದ ಮಳೆ ಮತ್ತು ಮೋಡದ ವಾತಾವರಣದಿಂದಾಗಿ ಕಾಫಿ ಕೊಯ್ಲಿಗೆ ಅಡ್ಡಿಯಾಗಿತ್ತು. ಜೊತೆಗೆ ಕೊಯ್ಲು ಮಾಡಿದ್ದ ಕಾಫಿ ಅಂಗಳದಲ್ಲಿ ತೊಯ್ದು ಸಮಸ್ಯೆ ಉಂಟಾಗಿತ್ತು. ಇದೀಗ ಬಿಸಿಲು ಕಾಣಿಸಿಕೊಂಡಿರುವುದರಿಂದ ಬೆಳೆಗಾರರು ಮತ್ತೆ ಕಾಫಿ ಕೊಯ್ಲಿಗೆ ಮುಂದಾಗಿದ್ದಾರೆ. ಅಸ್ಸಾಂ ವಲಸಿಗ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತೋಟದ ಕೆಲಸಗಳಿಗೆ ಸಿಗುತ್ತಿರುವುದರಿಂದ ಕೊಯ್ಲು ಕೆಲಸ ಸಾಗಲಿದೆ.
ಸಹಜ ಮಳೆಯಿಂದ ಫಸಲು ಪಡೆಯುವ ಹಲವು ಬೆಳೆಗಾರರು ಕಾಫಿ ಕೊಯ್ಲನ್ನು ಜನವರಿಯಲ್ಲಿ ಆರಂಭಿಸುತ್ತಾರೆ. ಕಾಫಿ ಹಣ್ಣಿನೊಂದಿಗೆ ಅಲ್ಲಲ್ಲಿ ಹೂಗಳು ಅರಳಿವೆ. ಅಕಾಲಿಕ ಮಳೆಯಿಂದಾಗಿ ಅರಳಿದ ಹೂಗಳಿಂದ ಫಸಲು ನಷ್ಟವಾಗಲಿದೆ ಎಂಬುದು ಬೆಳೆಗಾರರ ಅಭಿಪ್ರಾಯ. ಮಳೆಯಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ಶೇ 10ರಷ್ಟು ಫಸಲು ನಷ್ಟವಾಗಲಿದೆ ಎಂದು ಕಾಫಿ ಬೆಳೆಗಾರ ಮಾಚಯ್ಯ ತಿಳಿಸಿದರು.