ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅವರನ್ನು ಆಕ್ಷೇಪಾರ್ಹ ಬರಹಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ ಪ್ರಾಧ್ಯಾಪಕ ಸೇರಿದಂತೆ ಇಬ್ಬರನ್ನು ವಿಧಾನಸೌಧ ಪೊಲೀಸರು ಶನಿವಾರ ಬಂಧಿಸಿದ್ದಾರೆ.
‘ದಾವಣಗೆರೆಯ ಖಾಸಗಿ ಕಾಲೇಜಿನ ಇತಿಹಾಸಪ್ರಾಧ್ಯಾಪಕ ಪ್ರದೀಪ್ಕುಮಾರ್ ಸಿ.ಎನ್.(35), ಶಿವಮೊಗ್ಗದ ಉದ್ಯಮಿ ಅರುಣ್ಕುಮಾರ್ ಡಿ.ಹೆಗಡೆ (50) ಬಂಧಿತರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೆಲ ದಿನಗಳವರೆಗೆ ವಶಕ್ಕೆ ನೀಡುವಂತೆ ಮನವಿ ಮಾಡುತ್ತೇವೆ’ ಎಂದು ವಿಧಾನಸೌಧ ಪೊಲೀಸರು ತಿಳಿಸಿದರು.
‘ಪ್ರಥಮದರ್ಜೆ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ಪ್ರದೀಪ್ಕುಮಾರ್, ಕೆಲ ತಿಂಗಳ ಹಿಂದೆ ಈ ಕಾಲೇಜಿಗೆ ನೇಮಕವಾಗಿದ್ದರು. ಜತೆಗೆ ಅರುಣ್ಕುಮಾರ್, ಖಾಸಗಿ ಕಂಪೆನಿಯ ಯುಪಿಎಸ್ ವ್ಯಾಪಾರ ಮಾಡುತ್ತಿದ್ದಾರೆ’.
‘ಈ ಇಬ್ಬರು ಫೇಸ್ಬುಕ್ ಖಾತೆಗಳನ್ನು ಹೊಂದಿದ್ದಾರೆ. ‘ಸ್ವಚ್ಛ ಬ್ರಾಹ್ಮಣ ವೇದಿಕೆ’ ಗ್ರೂಪ್ ಸದಸ್ಯರಾಗಿರುವ ಇವರು ಉಗ್ರಪ್ಪ ಅವರ ವಿರುದ್ಧ ಅಸಭ್ಯ ಮತ್ತು ಆಕ್ಷೇಪಾರ್ಹ ಬರಹ ಪ್ರಕಟಿಸಿ, ಕೊಲೆ ಬೆದರಿಕೆ ಹಾಕಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’.
‘ಉಗ್ರಪ್ಪ ಅವರು ನೀಡಿದ್ದ ದೂರಿನನ್ವಯ ಸೈಬರ್ ತಜ್ಞರ ನೆರವು ಪಡೆದು ಆರೋಪಿಗಳನ್ನು ಪತ್ತೆ ಮಾಡಲಾಯಿತು. ಪ್ರಕರಣ ಕುರಿತು ಆರೋಪಿಗಳು, ತಾವು ಯಾವುದೇ ಬರಹ ಪ್ರಕಟಿಸಿಲ್ಲ. ಯಾರೋ ಪ್ರಕಟಿಸಿದ್ದ ಬರಹಕ್ಕೆ ಪ್ರತಿಕ್ರಿಯಿಸಿರುವುದಾಗಿ ಹೇಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.