ಕುಶಾಲನಗರ: ಜನಾಂಗದೊಳಗೆ ಒಗ್ಗಟ್ಟು ಮೂಡಿಸಲು ಮತ್ತು ಬಾಂಧವ್ಯ ಬೆಸೆಯಲು ಕ್ರೀಡೆಗಳು ಸಹಕಾರಿ ಎಂದು ಧಾರಾವಾಹಿ ನಿರ್ಮಾಪಕ ಉಮಾಶಂಕರ್ ಅಭಿಪ್ರಾಯಪಟ್ಟರು.
ಒಕ್ಕಲಿಗರ ಯುವ ವೇದಿಕೆ ವತಿಯಿಂದ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಭಾನುವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಜನಾಂಗೀಯ ಕ್ರಿಡಾಕೂಟಗಳು ಒಂದು ಸಮುದಾಯದವರು ಒಂದೆಡೆ ಬೆರೆಯಲು ಸಿಗುವ ಉತ್ತಮ ಅವಕಾಶ. ಯಾವುದೇ ನೆಪ ಹೇಳದೆ ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಪರಸ್ಪರ ಪರಿಚಯ ಮಾಡಿಕೊಳ್ಳಲು, ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ಇವು ಅವಕಾಶ ನೀಡುತ್ತದೆ. ಸೋಲು ಗೆಲುವುಗಳಿಗಿಂತ ಭಾಗವಹಿಸುವಿಕೆಗೆ ಒತ್ತುಕೊಟ್ಟು ಪಾಲ್ಗೊಳ್ಳಬೇಕು ಎಂದರು.
ಉದ್ಯಮಿ ಎಂ.ಕೆ.ದಿನೇಶ್ ಮಾತನಾಡಿ, ಒಕ್ಕಲಿಗ ಸಮುದಾಯದ ಜನರಲ್ಲಿ ಪರಸ್ಪರ ಪ್ರೀತಿ ವಾತ್ಸಲ್ಯ ಬೆಳೆಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು.
ಜಿ.ಪಂ.ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಒಕ್ಕಲಿಗರ ಸಮುದಾಯ ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕಾಗಿದೆ ಎಂದರು.
ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಒಕ್ಕಲಿಗರ ಸಂಘ ಜಿಲ್ಲಾ ಘಟಕದ ನಿರ್ದೇಶಕ ವಾಲ್ನೂರು ಭುವನೇಂದ್ರ, ಒಕ್ಕಲಿಗರ ಸಹಕಾರ ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ , ಒಕ್ಕಲಿಗರ ಹಿತರಕ್ಷಣ ವೇದಿಕೆ ಅಧ್ಯಕ್ಷ ಎಂ.ಎಸ್.ರಾಜೇಶ್, ಮುಖಂಡರಾದ ಎಚ್.ಎನ್. ರಾಮಚಂದ್ರ, ಕೆ.ಕೆ. ಭೋಗಪ್ಪ, ನೆಲ್ಲಿಹುದಿಕೇರಿ ಮಾದಪ್ಪ, ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
ನಂತರ ಪುರುಷರಿಗೆ ಕಬಡ್ಡಿ, ಮಹಿಳೆಯರಿಗೆ ವಾಲಿಬಾಲ್ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ನಡೆಸಲಾಯಿತು.