ಸಂತ್ ಫತೇಸಿಂಗರ ಉಪವಾಸ ಮುಕ್ತಾಯ–ಅನುಯಾಯಿಗಳಿಂದಲೂ ಆತ್ಮಾರ್ಪಣೆ ಕ್ರಮವಿಲ್ಲ
ಅಮೃತಸರ, ಡಿ. 26– ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಬಂದ ಲೋಕಸಭೆಯ ಅಧ್ಯಕ್ಷ, ಶ್ರೀ ಹುಕಂ ಸಿಂಗ್ರವರು ತಂದ ಸೂತ್ರವನ್ನು ಅಂಗೀಕರಿಸಿದ ಅಕಾಲಿ ನಾಯಕ ಸಂತ್ ಫತೇಸಿಂಗರು 9 ದಿನ ಗಳಿಂದ ಮಾಡುತ್ತಿದ್ದ ಉಪವಾಸವನ್ನು ಇಂದು ನಿಲ್ಲಿಸಿದರಲ್ಲದೆ ನಾಳೆ ಕೈಗೊಳ್ಳ ಬೇಕೆಂದಿದ್ದ ಆತ್ಮಾರ್ಪಣೆಯ ಕ್ರಮವನ್ನು ತ್ಯಜಿಸಿದರು. ಸಂತರ ಆರು ಮಂದಿ ಅನುಯಾಯಿಗಳೂ ತಮ್ಮ ಆತ್ಮಾರ್ಪಣೆಯ ಯೋಚನೆಯನ್ನು ಕೈ ಬಿಟ್ಟರು.
***
ರೇಬರೇಲಿಯಿಂದ ಇಂದಿರಾಜಿ ಸ್ಪರ್ಧೆ
ದೆಹಲಿ, ಡಿ. 26– ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ, ಉತ್ತರ ಪ್ರದೇಶ ಮುಖ್ಯ ಮಂತ್ರಿ ಶ್ರೀಮತಿ ಸುಚೇತಾ ಕೃಪಲಾನಿ, ದಿವಂಗತ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿಯವರ ಪುತ್ರ ಶ್ರೀ ಹರಿ ಕೃಷ್ಣ ಶಾಸ್ತ್ರಿ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಪಂಡಿತರಿಗೆ ಉತ್ತರ ಪ್ರದೇಶದಿಂದ ಲೋಕ ಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೊಡಲಾಗಿದೆ.
ಶ್ರೀಮತಿ ಗಾಂಧಿಯವರು ರೇಬರೇಲಿಯದಿಂದಲೂ, ಶ್ರೀಮತಿ ಕೃಪಲಾನಿಯವರು ಗೊಂಡಾದಿಂದಲೂ, ಶ್ರೀ ಶಾಸ್ತ್ರಿಯವರು ಅಲಹಾಬಾದಿನಿಂದಲೂ, ಶ್ರೀಮತಿ ಪಂಡಿತರು ಫೂಲ್ಪುರದಿಂದಲೂ ಸ್ಪರ್ಧಿಸಲಿದ್ದಾರೆ.
***
ಪ್ರಧಾನಿ ತೀರ್ಪೇ ಆಖೈರು
ನವದೆಹಲಿ, ಡಿ. 26– ಹರಿಯಾನ ಮತ್ತು ಪಂಜಾಬ್ ನಡುವೆ ಇತ್ಯರ್ಥವಾಗದೆ ಇರುವ ಕೇಳಿಕೆಗಳ ಬಗೆಗೆ ಪ್ರಧಾನಮಂತ್ರಿ ಪಂಚಾಯಿತಿ ನಡೆಸುವುದಕ್ಕೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ.
ಸಂತ್ ಫತೇಸಿಂಗ್ ಮತ್ತು ಅವರ ಅನುಯಾಯಿಗಳು ಉಪವಾಸ ನಿಲ್ಲಿಸುವು ದಕ್ಕೆ ಆಧಾರವಾದ ಸೂತ್ರದ ಬಗೆಗೆ ಅಧಿಕೃತ ವಕ್ತಾರರೊಬ್ಬರು ಇಲ್ಲಿ ಇಂದು ರಾತ್ರಿ ವಿವರಣೆ ನೀಡುತ್ತ ಈ ವಿಚಾರ ತಿಳಿಸಿದರು.
***
ಡಾ. ಗೋಪಿಚಂದ್ ಭಾರ್ಗವ ಅವರ ನಿಧನ
ಚಂಡೀಘರ್, ಡಿ. 26– ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಪಂಜಾಬಿನ ಮಾಜಿ ಮುಖ್ಯಮಂತ್ರಿ ಆದ ಡಾ. ಗೋಪಿಚಂದ್ ಭಾರ್ಗವ ಅವರು ಹೃದಯಾಘಾತದಿಂದ ನಿಧನರಾದರು. ಮೃತರಿಗೆ 74 ವರ್ಷ ವಯಸ್ಸಾಗಿತ್ತು.