ಹಾಸನ: ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿಆರ್ಸಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ವಿಶೇಷ ಸಂಪನ್ಮೂಲ ಶಿಕ್ಷಕರ ಸಂಘ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಮನ್ವಯ ಶಿಕ್ಷಣದಲ್ಲಿ ಅಂಗವಿಕಲ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಯ ಐ.ಇ.ಡಿ.ಯಲ್ಲಿ ಸುಮಾರು 12 ವರ್ಷ ವಿಶೇಷ ಸಂಪನ್ಮೂಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2009 ರಲ್ಲಿ ಕೇಂದ್ರ ಸರ್ಕಾರದಿಂದ ಬರುವ ಅನುದಾನ ಸ್ಥಗಿತವಾದ ಬಳಿಕ ಎಲ್ಲ ಶಿಕ್ಷಕರು 15 ದಿನ ಧರಣಿ ನಡೆಸಿ ಅಂದಿನ ಶಿಕ್ಷಣ ಸಚಿವ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಭೆ ನಡೆಸಿ ಸಭೆಯಲ್ಲಿ ಎಂಸಿಟಿಟಿ ಜತೆಗೆ 6 ತಿಂಗಳ ಆಡ್ ಆನ್ ಕೋರ್ಸ್ ತರಬೇತಿ ಮಾಡಿಕೊಳ್ಳುವಂತೆ ಇಲಾಖೆಯಿಂದ ಆದೇಶ ಹೊರಡಿಸಿದ್ದರು. ಇದರಂತೆ ಈ ಎಲ್ಲ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ಮುಂದುವರಿಸಲು 2010 ರಲ್ಲಿ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಪ್ರತಿ ತಾಲ್ಲೂಕಿಗೆ ಇಬ್ಬರು ವಿಶೇಷ ಶಿಕ್ಷಕರನ್ನು ನಿರ್ವಹಿಸಲು ಅವಕಾಶ ಮಾಡಿಕೊಡ ಲಾಯಿತು. ಸುಮಾರು 6 ವರ್ಷಗಳಿಂದ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ವಿವರಿಸಿದರು.
ಡಿ. 21ರಂದು ಸರ್ವ ಶಿಕ್ಷಣ ಅಭಿ ಯಾನ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಿಂದ ಜಿಲ್ಲಾ ಕಚೇರಿ ಹಾಗೂ ಬಿಆರ್ಸಿ ಕಚೇರಿಗೆ ಸುತ್ತೋಲೆ ಬಂದಿದ್ದು, ಹಾಲಿ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಬಿಆರ್ಸಿ ಕಚೇರಿಗೆ 4 ಮಂದಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನಿಯೋಜಿಸಿ, ಅಂಗ ವಿಕಲ ಮಕ್ಕಳ ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ. ನಾಲ್ಕು ಮಂದಿ ಸರ್ಕಾರಿ ಶಿಕ್ಷಕರನ್ನು ನಿಯೋ ಜನೆಗೊಂಡ ತಕ್ಷಣದಲ್ಲಿ ಹಾಲಿ ಹೊರ ಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರನ್ನು ಬಿಡುಗಡೆಗೊಳಿಸಲು ಆದೇಶಿಸಿದೆ ಎಂದು ಅಳಲು ತೋಡಿಕೊಂಡರು.
ರಾಜ್ಯದಲ್ಲಿ 18 ವರ್ಷಗಳಿಂದ ಅಂಗವಿಕಲ ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 408 ವಿಶೇಷ ಶಿಕ್ಷಕರು ಹಾಗೂ 43 ಮಂದಿ ಜಿಲ್ಲಾ ಸಂಪನ್ಮೂಲ ಶಿಕ್ಷಕರ ಕುಟುಂಬಗಳು ಕೆಲಸ ಕಳೆದುಕೊಂಡು ಬೀದಿಪಾಲಾಗುವ ಅಪಾಯವಿದೆ. 2016ರ ಜುಲೈನಲ್ಲಿ 408 ವಿಶೇಷ ಶಿಕ್ಷಕರನ್ನು ಹೊರಗುತ್ತಿಗೆ ಮೇಲೆ ನೇಮಕಾತಿ ಮಾಡಿಕೊಂಡು, ಡಿಸೆಂ ಬರ್ನಲ್ಲಿ ಬಿಡುಗಡೆಗೊಳಿಸಲು ಆದೇಶಿಸಿ ದೆ. ಇದರಿಂದ ತೀವ್ರ ರೀತಿಯ ಅನ್ಯಾಯವಾಗಿದೆ ಎಂದು ಆರೋ ಪಿಸಿದರು.
ಆದ್ದರಿಂದ ವಿಶೇಷ ಶಿಕ್ಷಕರನ್ನು ಮುಂದುವರೆಸುವ ಮೂಲಕ ಅಂಗವಿಕಲ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅವಕಾಶ ಮಾಡಿ ಬಡ ಶಿಕ್ಷಕರ ಕುಟುಂಬಗಳ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಸಂಘದ ಎ.ಆರ್. ರಮೇಶ್, ಗಂಗಾಧರ್, ಕೆ.ಆರ್. ವೈರಮುಡಿ, ವಜ್ರಕುಮಾರ್, ಟಿ. ಮಂಜೇಗೌಡ, ಕೆ.ಟಿ. ರಂಗಸ್ವಾಮಿ, ಪಿ.ಎ. ಕುಮಾರ್, ಶಂಕರಪ್ಪ, ಮಮತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.