ಮುಧೋಳ: ತಾಲ್ಲೂಕು ಆಡಳಿತ ಸಂಪೂರ್ಣ ಹದಗೆಟ್ಟಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಜವಾಬ್ದಾರಿಯಿಂದ ವರ್ತಿಸದೇ ಹಾರಿಕೆ ಉತ್ತರ ನೀಡಿ ನುಣಿಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ ಆರೋಪಿಸಿದರು.
ಮಂಗಳವಾರ ತಹಶೀಲ್ದಾರ್ ಕಚೇರಿಗೆ ಬಿಜೆಪಿ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಲು ಬೆಳಿಗ್ಗೆ ಆಗಮಿಸಿದ್ದರು. ಮಧ್ಯಾಹ್ನ 1 ಗಂಟೆಯಾದರು ನಾಮಪತ್ರ ಸ್ವೀಕರಿಸಲು ಅಧಿಕಾರಿಗಳು ಬರದಿದ್ದಾಗ ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾದರು. ನಂತರ ಮಾತನಾಡಿ ಕೃಷಿ ಉತ್ಪನ್ ಮಾರುಕಟ್ಟೆ ಸಮಿತಿ ಚುನಾವಣೆಗೆ ಜಿಲ್ಲಾಧಿಕಾರಿ ಇದೇ 16 ರಂದು ಆದೇಶಿಸಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಇದೇ 21 ರಂದು ಪ್ರಕಟಣೆ ಹೊರಡಿಸಲಾಗಿತ್ತು.
ಇದೇ 22 ರಿಂದ 29 ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಸೋಮವಾರ ನಾಮಪತ್ರ ಸಲ್ಲಿಸಲು ಇಲ್ಲಿಗೆ ಬಂದರೆ ಮಂಗಳವಾರ ಬರಲು ಹೇಳಿದ್ದರಿಂದ ಅವರು ಗರಂ ಆದರು. ಇಲ್ಲಿಗೆ ತಹಶೀಲ್ದಾರ್ ಅವರನ್ನು ನೇಮಕ ಮಾಡಿಲ್ಲ ಅಂತ ಮರಳಿದ್ದೀವಿ. ಇಂದು ಮಂಗಳವಾರವು ಹೀಗೆ ಹೇಳುತ್ತಿರುವುದರಿಂದ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಹೇಳಿದರು.
ನಗರಸಭೆ ಸದಸ್ಯ ಅನೀಲ ಚವಾಣ ಮಾತನಾಡಿ, ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನ ಮಾತ್ರ ಇದ್ದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಶಿರಸ್ತೇದಾರ ಬಿ.ಬಿ.ಕುಂಬಾರ ಅವರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಕುಂಬಾರ ಹಾಗೂ ಡಿ.ಜಿ.ಪೂಜಾರ ಪ್ರತಿಭಟನಾಕಾರನ್ನು ಸಮಾಧಾನ ಪಡಿಸಿ ನಾಮಪತ್ರ ಸ್ವೀಕರಿಸುವುದಾಗಿ ಹೇಳಿದ ನಂತರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟು ನಾಮಪತ್ರ ಸಲ್ಲಿ ಸಲ್ಲಿಸಲು ಮುಂದಾದರು. ಪ್ರತಿಭಟನೆ ಮೂಲಕ ಅಪ್ಪಾಸಾಹೇಬ ಪವಾರ ಅವರು ನಾಮಪತ್ರ ಸಲ್ಲಿಸಿದರು.