ಚಾಮರಾಜನಗರ: ‘ರೈತರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಿದರೆ ಹೆಚ್ಚಿನ ಲಾಭಗಳಿಸಬಹುದು’ ಎಂದು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಡಾ.ಸಿ. ದೊರೆಸ್ವಾಮಿ ಹೇಳಿದರು.
ತಾಲ್ಲೂಕಿನ ನಂಜೇದೇವನಪುರದ ರೈತ ಮಹೇಶ್ ಅವರ ಜಮೀನಿ ನಲ್ಲಿ ಮಂಗಳವಾರ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ, ಮೈಸೂರು ತೋಟಗಾರಿಕೆ ಮಹಾವಿದ್ಯಾಲಯ, ಆಕಾಶವಾಣಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಫಲಸಿರಿ ಕಾರ್ಯಕ್ರಮ ದಡಿ ನಡೆದ ಟೊಮೆಟೊ ಬೆಳೆಯ ಸಮಗ್ರ ನಿರ್ವಹಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರೈತ ಉತ್ಪಾದಕರೇ ಮಾರಾಟಗಾರ ರಾದರೆ ರೈತ ಮತ್ತು ಗ್ರಾಹಕರಿಗೆ ಮಧ್ಯವರ್ತಿ ಗಳ ಕಾಟ ತಪ್ಪುತ್ತದೆ. ರೈತರಿಗೆ ಆದಾಯವೂ ಲಭಿಸಲಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗಲಿವೆ ಎಂದರು.
ಮೈಸೂರು ತೋಟಗಾರಿಕೆ ಮಹಾ ವಿದ್ಯಾಲಯದ ವಿಸ್ತರಣಾ ಘಟಕದ ವಿಸ್ತರಣಾ ಮಂದಾಳು ಬಿ.ಎಸ್. ಹರೀಶ್ ಮಾತನಾಡಿ, ರೈತರು ನಿರ್ವಹಣಾ ವೆಚ್ಚ ಕಡಿಮೆ ಮಾಡಿಕೊಂಡು ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಹೇಳಿದರು.
ರೈತರು ಮಣ್ಣಿನ ಗುಣ ಆಧರಿಸಿ ಗೊಬ್ಬರ ನೀಡಬೇಕು. ಮಿತವಾಗಿ ನೀರು ಬಳಸಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ ತಡೆಗಟ್ಟಲು ಬಿಳಿ ಮಲ್ಚಿಂಗ್ ಶೀಟ್ ಹಾಕಲು ಮುಂದಾಗ ಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಷಯ ತಜ್ಞ ಎ.ಬಿ. ಮೋಹನ್ಕುಮಾರ್ ಮಾತನಾಡಿ, ರೈತರು ಹೆಚ್ಚಿನ ಇಳುವರಿ ಪಡೆಯುವ ನಿಟ್ಟಿನಲ್ಲಿ ಕೊಟ್ಟಿಗೆ ಗೊಬ್ಬರ ಬಳಸಬೇಕು. ಇದರೊಂದಿಗೆ ಟ್ರೈಕೋಡರ್ಮಾ ಬಳಕೆ ಮಾಡಿದರೆ ಹೆಚ್ಚಿನ ಅನುಕೂಲ ವಾಗಲಿದೆ. ಸರಿಯಾದ ಪ್ರಮಾಣದಲ್ಲಿ ಪೋಷಕಾಂಶ ಬಳಕೆ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಕೆವಿಕೆಯ ಸಸ್ಯ ಸಂರಕ್ಷಣೆ ವಿಷಯ ತಜ್ಞ ಡಾ.ಎಸ್. ಶಿವರಾಯ್ ನಾವಿ ಮಾತನಾಡಿ, ರೈತರು ಪ್ರತಿಯೊಂದಕ್ಕೂ ಕೀಟನಾಶಕದ ಮೊರೆ ಹೋಗ ಬಾರದು. ಕೀಟ ಹತೋಟಿ ಮಾಡಲು ಬೇಕಾದ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಹೇಳಿದರು.
ಟೊಮೆಟೊ ಮೌಲ್ಯವರ್ಧನೆ ಕುರಿತು ವಿಷಯ ತಜ್ಞೆ ಡಾ.ಚಂದ್ರಕಲಾ ಹಣಗಿ ಮಾತ ನಾಡಿ, ಪ್ರತಿನಿತ್ಯದ ಬಳಕೆಯಲ್ಲಿ ಟೊಮೆಟೊ ಮಹತ್ವದ ಪಾತ್ರವಹಿಸಿದೆ. ಹಾಗಾಗಿ, ರೈತರು ಟೊಮೆಟೊ ಬೆಲೆ ಕುಸಿದಾಗ ರಸ್ತೆ ಚೆಲ್ಲುವ ಮೂಲಕ ನಷ್ಟ ಅನುಭವಿಸುವ ಬದಲು ಮೌಲ್ಯವರ್ಧನೆ ಮಾಡುವುದನ್ನು ಕಲಿತುಕೊಳ್ಳಬೇಕು ಎಂದು ತಿಳಿಸಿದರು.
ಮೈಸೂರು ಆಕಾಶವಾಣಿ ಕಾರ್ಯಕ್ರಮ ಸಂಯೋಜಕ ಎನ್. ಕೇಶವಮೂರ್ತಿ ಮಾತನಾಡಿದರು.
ತೋಟಗಾರಿಕೆ ಮಹಾವಿದ್ಯಾಲಯದ ಪ್ರಭಾರ ಡೀನ್ ಡಾ.ಪ್ರಸಾದ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಕೆವಿಕೆ ವಿಸ್ತರಣಾ ವಿಭಾಗದ ವಿಷಯ ತಜ್ಞ ಎನ್.ಟಿ.ನರೇಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಸಿ. ಮಹದೇವಸ್ವಾಮಿ, ಕೆವಿಕೆಯ ಫಣಿ ಭೂಷಣ್, ಎಸ್. ಅನನ್ಯ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.