ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಎದುರಿಸಲು ಸಮಾಜವಾದಿ ಪಕ್ಷ ಸನ್ನದ್ಧವಾಗಿದ್ದು, 325 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸುದ್ದಿಯನ್ನು ತಳ್ಳಿ ಹಾಕಿದ ಮುಲಾಯಂ ಸಿಂಗ್ ತನ್ನ ಪುತ್ರ ಅಖಿಲೇಶ್ ಯಾದವ್ ಅವರ ಆಪ್ತರಿಗೆ ಟಿಕೆಟ್ ನಿರಾಕರಿಸಿ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಿದ್ದಾರೆ.
ಈಗಲೇ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಯಾರೆಂದು ಘೋಷಿಸುವುದಿಲ್ಲ ಎಂದು ಮುಲಾಯಂ ಹೇಳಿದ್ದಾರೆ.
ಅದೇ ವೇಳೆ ಇನ್ನೂ 78 ಅಭ್ಯರ್ಥಿಗಳ ಹೆಸರು ಘೋಷಿಸುವುದಾಗಿ ಅವರು ಹೇಳಿದ್ದಾರೆ.
403 ಸೀಟುಗಳಿಗೆ ಸ್ಪರ್ಧಿಸಲು 4200 ಅರ್ಜಿಗಳು ಬಂದಿವೆ. ಪ್ರತಿಯೊಬ್ಬ ಅಭ್ಯರ್ಥಿಯನ್ನು ಸಂದರ್ಶನ ನಡೆಸಿ, ಆತ ಪ್ರಸ್ತುತ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆಯೇ? ಎಂಬೆಲ್ಲಾ ಅಂಶಗಳನ್ನು ಪರಿಗಣಿಸಿ ಟಿಕೆಟ್ ನೀಡಲಾಗಿದೆ ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ.