ಶ್ರೀರಂಗಪಟ್ಟಣ: ವಚನ ಸಾಹಿತ್ಯವನ್ನು ಸರಿಯಾಗಿ ಅರ್ಥೈಸಿಕೊಂಡು ಅದರಂತೆ ನಡೆದರೆ ಬಹುತೇಕ ಸಮಸ್ಯೆಗಳು ಉದ್ಭವಿಸುವುದೇ ಇಲ್ಲ ಎಂದು 7ನೇ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಲ್ಲೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ವಾಣಿ (ಬಿ.ಎನ್.ಸುಬ್ಬಮ್ಮ) ವೇದಿಕೆಯಲ್ಲಿ ಗುರುವಾರ ನಡೆದ 7ನೇ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶರಣರ ವಚನಗಳಿಗೂ ನಮ್ಮ ಸಂವಿಧಾನದ ಆಶಯಗಳಿಗೂ ಸಾಮ್ಯತೆ ಇದೆ. ಸಾಮಾಜಿಕ ಮತ್ತು ವೈಯಕ್ತಿಕ ಸಮಸ್ಯೆಗಳಿಗೆ ವಚನಗಳು ಪರಿಹಾರ ಸೂಚಿಸುತ್ತವೆ. ಬಸವಣ್ಣ, ಅಕ್ಕಮ ಹಾದೇವಿ, ಅಲ್ಲಮಪ್ರಭು ಅವರ ವಚಗಳು ಸರಳ ಕನ್ನಡ ಭಾಷೆಯಲ್ಲಿ ಇದ್ದರೂ ಇನ್ನೂ ಜನರಿಗೆ ಮುಟ್ಟದೇ ಇರುವುದು ವಿಪರ್ಯಾಸ ಎಂದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ನುಡಿದಂತೆ ನಡೆಯು ವುದನ್ನು ಕಲಿಯಬೇಕು. ಬಹುಪಾಲು ಮಂದಿಗೆ ಸ್ವಾರ್ಥವೇ ಮುಖ್ಯವಾಗಿದೆ. ಹೆಜ್ಜೆ ಹೆಜ್ಜೆಗೂ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ. ಧಾವಂತದ ಬದುಕು ಅವಘಡಗಳ ಕೂಪಕ್ಕೆ ನೂಕುತ್ತಿದೆ. ತಾಳ್ಮೆಯಿಂದ ಆಲಿಸುವ, ಕಾರ್ಯ ಮಾಡುವ ಮನೋಭಾವ ಬೆಳೆಸಿಕೊಳ್ಳುವುದು ಒಳಿತು ಎಂದರು.
ಜಿಲ್ಲಾ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಿಕ್ಕಸ್ವಾಮಿ ಮಾತನಾಡಿದರು. ವಿಮರ್ಶಕ ಗ.ನಾ.ಭಟ್ ‘ಪದವಿಪೂರ್ವ ಪಠ್ಯದಲ್ಲಿ ವಚನಗಳ ಗಾಯನ ಮತ್ತು ವ್ಯಾಖ್ಯಾನ’ ಕುರಿತು ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಸ್ವರಚಿತ ವಚನ ಗೋಷ್ಠಿ ನಡೆಯಿತು. ಸಾಹಿತಿ ಬಲ್ಲೇನಹಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಚಲುವರಾಜು, ಪಾಂಡಪ್ಪ ಇತರರು ವಚನ ಗಾಯನ ನಡೆಸಿಕೊಟ್ಟರು.
ಪುಸ್ತಕ ಪ್ರೇಮಿ ಅಂಕೇಗೌಡ, ಗಾಂಧಿವಾದಿ ಡಾ.ಬಿ.ಸುಜಯಕುಮಾರ್ ಹಾಗೂ ಸಾಹಿತಿ ಚಂದ್ರಶೇಖರಯ್ಯ ಅವರನ್ನು ಅಭಿನಂದಿಸಲಾಯಿತು. ‘ಕುವೆಂಪು ಬದುಕು– ಬರಹ’ ಕುರಿತು ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾವನಾ ಪ್ರಥಮ, ಸಂಜಯ ದ್ವಿತೀಯ, ಗುಣ ತೃತೀಯ, ದೀಪಿಕಾ ಚತುರ್ಥ ಹಾಗೂ ದೀಪಿಕಾ ರಾಣಿ 5ನೇ ಸ್ಥಾನ ಪಡೆದಿದ್ದು, ಅವರನ್ನು ಅಭಿನಂದಿಸಲಾಯಿತು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗಂಜಾಂ ನರಸಿಂಹಸ್ವಾಮಿ, ಕಸಾಪ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗು, ಗೌರವ ಕಾರ್ಯದರ್ಶಿ ಉಮಾಶಂಕರ್, ಬಿಇಒ ಸಿ.ಎಂ. ಹೊನ್ನರಾಜು, ಜಿಲ್ಲಾ ವಚನ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಕೆ.ಆರ್.ಶಶಿಧರ್ ಈಚಗೆರೆ, ಕೆ.ಶ್ರೀಕಂಠಯ್ಯ, ಶ್ವೇತಾ, ಬಸವೇಗೌಡ, ಪವಿತ್ರಾ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.