ಹುಬ್ಬಳ್ಳಿ: ಮಾಜಿ ಸಂಸದ ಐ.ಜಿ. ಸನದಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಖ್ಯಾತನಾಮರು ವಾಸಿಸುವ ಅಶೋಕ ನಗರ, ವಿಶ್ವೇಶ್ವರ ನಗರ, ರಾಜನಗರ ಸೇರಿದಂತೆ ಹಲವು ಬಡಾವಣೆಗಳು 28ನೇ ವಾರ್ಡ್ ವ್ಯಾಪ್ತಿಯಲ್ಲಿವೆ. ರಾಜನಗರ ಹಾಗೂ ಗುರುದೇವ ನಗರದಲ್ಲಿ ಖಾಲಿ ಜಾಗದಲ್ಲಿ ಕಸ ಹಾಕುವುದರಿಂದ ಹಂದಿಗಳ ಸಾಮ್ರಾಜ್ಯವೇ ಇಲ್ಲಿ ನೆಲೆಗೊಂಡಿದೆ.
ಕೇಂದ್ರೀಯ ವಿದ್ಯಾಲಯ, ಕೆಎಸ್ಸಿಎ ಕ್ರೀಡಾಂಗಣದ ಸುತ್ತಮುತ್ತಲೂ ಕಸ ಹಾಗೂ ಒಳಚರಂಡಿ ನೀರು ಚರಂಡಿಯಲ್ಲಿ ಹರಿಯುವ ಮೂಲಕ ನಿವಾಸಿಗಳ ನಿದ್ದೆಗೆಡಿಸಿದೆ. 25 ಸಾವಿರ ಜನಸಂಖ್ಯೆಯುಳ್ಳ ಈ ವಾರ್ಡ್ನಲ್ಲಿ 26 ಬಡಾವಣೆಗಳು ಬರುತ್ತವೆ. ಇಷ್ಟೊಂದು ಬೃಹತ್ ವಾರ್ಡಿನ ಕಸವನ್ನು ನಿರ್ವಹಿಸಲು ಗುತ್ತಿಗೆದಾರರು ಒಂದೇ ಟ್ರ್ಯಾಕ್ಟರ್ ಬಳಸುತ್ತಿದ್ದಾರೆ. ಅದೇ ಟ್ರ್ಯಾಕ್ಟರ್ ಬೆಳಿಗ್ಗೆ 9, 11ಕ್ಕೆ ಮತ್ತು ಮಧ್ಯಾಹ್ನ 3ಕ್ಕೊಂದರಂತೆ ಮೂರು ಟ್ರಿಪ್ ಓಡಾಡುತ್ತದೆ.
ಈ ವಾರ್ಡ್ನಲ್ಲಿಯ ಪ್ರಮುಖ ಸಮಸ್ಯೆಯೆಂದರೆ ಖಾಲಿ ನಿವೇಶನಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡಿಕೊಂಡಿದ್ದು. ಒಮ್ಮೊಮ್ಮೆ ಖಾಸಗಿಯವರ ಖಾಲಿ ನಿವೇಶನಗಳಲ್ಲೂ ಅಕ್ಕ ಪಕ್ಕದ ಮನೆಯವರು ತ್ಯಾಜ್ಯವನ್ನು ಚೆಲ್ಲುವುದರಿಂದ ಅದನ್ನು ಪೌರಕಾರ್ಮಿಕರು ಗಮನಿಸುವುದಿಲ್ಲ. ಹೀಗಾಗಿ ಹಲವು ದಿನಗಳವರೆಗೂ ಟನ್ನುಗಟ್ಟಲೇ ಕಸ ಅಲ್ಲೇ ಬಿದ್ದಿರುತ್ತದೆ.
‘ನಿಯಮಿತವಾಗಿ ಕಸದ ತೊಟ್ಟಿ ಸ್ವಚ್ಛ ಮಾಡುತ್ತಾ ಇದ್ದರೆ ಎಲ್ಲರೂ ನೆಮ್ಮದಿಯಿಂದ ಇರಬಹುದು. ಆದರೆ, ಇದರಲ್ಲಿ ಅಸ್ತವ್ಯಸ್ತವಾಗಿರುವುದರಿಂದ ಹಂದಿಗಳು ದಾಳಿ ಮಾಡುತ್ತಿವೆ. ಅವುಗಳ ಹಾವಳಿಯಿಂದಾಗಿ ಕಸ ರಸ್ತೆ ಮೇಲೆಲ್ಲಾ ಬಿದ್ದಿರುತ್ತದೆ’ ಎಂದು ಗುರುದೇವನಗರದ ಕೃಷ್ಣ ಜೋಶಿ ಹೇಳಿದರು.
‘ಬಾಪೂಜಿ ನಗರದ ನಿವಾಸಿಗಳೂ ನಮ್ಮ ಮನೆ ಬಳಿ ಇರುವ ಖಾಲಿ ಜಾಗದಲ್ಲಿ ಕಸ ಚೆಲ್ಲುತ್ತಾರೆ. ಪಾಲಿಕೆಯವರು ಒಂದು ತಿಂಗಳಿಗೊಮ್ಮೆ ಸ್ವಚ್ಛ ಮಾಡುತ್ತಾರೆ. ದೂರು ನೀಡಿದರೂ ಸ್ಪಂದನೆ ಇಲ್ಲ’
ಒಳಚರಂಡಿ ನೀರು ಗಟಾರಕ್ಕೆ...
ಗುರುದೇವ ನಗರದಿಂದ ರಾಜನಗರಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸುವ ಪೈಪ್ಲೈನ್ನ ಸಾಮರ್ಥ್ಯ ಮೀರಿ ನೀರು ಹರಿಯುವುದರಿಂದ ಒಂದಷ್ಟು ಪ್ರಮಾಣದ ನೀರು ತೆರೆದ ಗಟಾರವನ್ನು ಸೇರುತ್ತದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ‘ವಾಸನೆ ಸಂಕಟ’ ಅನುಭವಿಸುತ್ತಿದ್ದಾರೆ. ಪಾಲಿಕೆಯ ಸಹಾಯಕ ಆಯುಕ್ತರೇ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಆರೋಪ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಸದಸ್ಯೆ ರತ್ನಾ ಪಾಟೀಲ, ‘ಮೂರ್ನಾಲ್ಕು ತಿಂಗಳಲ್ಲಿ ದೊಡ್ಡ ಪೈಪ್ ಅಳವಡಿಕೆಯಾಗಲಿದ್ದು, ಸಮಸ್ಯೆ ಬಗೆಹರಿಯಲಿದೆ’ ಎಂದರು.
‘ವಾರ್ಡ್ ವ್ಯಾಪ್ತಿ ದೊಡ್ಡದು’
ನಮ್ಮ ವಾರ್ಡ್ನಲ್ಲಿ 26 ದೊಡ್ಡ ಬಡಾವಣೆಗಳು ಬರುವುದರಿಂದ ಕಸ ವಿಲೇವಾರಿ ಕೆಲಸವೇ ದೊಡ್ಡ ಸವಾಲಾಗಿದೆ. ಆದರೂ, ಗುತ್ತಿಗೆದಾರರ ಬೆನ್ನು ಹತ್ತಿ ಕೆಲಸ ಮಾಡಿಸಿಕೊಳ್ಳುತ್ತೇವೆ ಎನ್ನುತ್ತಾರೆ 28ನೇ ವಾರ್ಡ್ ಪ್ರತಿನಿಧಿಸುವ ರತ್ನಾ ಪಾಟೀಲ. ಬೆಳಿಗ್ಗೆ 7ರಿಂದ 11ರವರೆಗೂ ಹಲವು ಬಡಾವಣೆಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸುತ್ತೇವೆ. ಮಾಜಿ ಸಂಸದ ಐ.ಜಿ. ಸನದಿ ಅವರ ಮನೆಗೆ ಕೆಲವು ನಿವಾಸಿಗಳು ಬಂದು ಸಮಸ್ಯೆ ಹೇಳಿಕೊಳ್ಳುವುದರಿಂದ ಅವರ ಮನೆ ಸಮೀಪವೂ ಇರುತ್ತೇವೆ ಎಂದರು.
ಅಲ್ಲಲ್ಲಿ ಒಂದಷ್ಟು ಕಸ ಬಿದ್ದಿರುತ್ತದೆ. ಆ ಬಗ್ಗೆ ನಿವಾಸಿಗಳು ಮಾಹಿತಿ ನೀಡಿದರೆ ಅಲ್ಲಿಂದಲೂ ಕಸ ತೆರವು ಮಾಡಿಸುತ್ತೇನೆ. ಪ್ರಮುಖವಾಗಿ ಛೇಡಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವಿಶೇಷ ಗಮನವಿಟ್ಟು ಅಲ್ಲಿನ ಕಂಟೇನರ್ನಲ್ಲಿ ಸಂಗ್ರಹವಾದ ಕಸ ನಿತ್ಯವೂ ವಿಲೇವಾರಿ ಮಾಡಿಸುವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.