ಕೋಲಾರ: ‘ಶಾಲಾಭಿವೃದ್ಧಿ ಸಮಿತಿಗಳು ತಮ್ಮ ಕರ್ತವ್ಯ, ಅಧಿಕಾರದ ಅರಿವು ಪಡೆದು ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿ ರಾಮಕೃಷ್ಣ ಸಲಹೆ ನೀಡಿದರು.
ತಾಲ್ಲೂಕಿನ ಕ್ಯಾಲನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಯಾಲನೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರಿಗೆ ಶನಿವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜವಬ್ದಾರಿ ಸಮಿತಿಗಳ ಅಧ್ಯಕ್ಷ ಮತ್ತು ಸದಸ್ಯರ ಮೇಲಿದೆ. ಶಾಲಾಭಿವೃದ್ಧಿ ಸಮಿತಿ ಎಂದರೆ ಕೇವಲ ಅಧಿಕಾರ ಮಾತ್ರವಲ್ಲ, ಇಡೀ ಶಾಲೆ ಶೈಕ್ಷಣಿಕ ಅಭಿವೃದ್ಧಿ ಹಿಂದಿನ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕು. ಜಾತಿ, ಪಕ್ಷ, ಧರ್ಮ ಬೇಧಕ್ಕೆ ಅವಕಾಶವಿಲ್ಲ. ಮಕ್ಕಳ ಹಿತ ರಕ್ಷಣೆ ಮಾತ್ರ ನಿಮ್ಮ ಧ್ಯೇಯ ವಾಗಿರಬೇಕು’ ಎಂದರು.
‘ಶಾಲೆಗೆ ದಾನಿಗಳು, ಅಕ್ಕಪಕ್ಕದ ಸಂಸ್ಥೆಗಳಿಂದ ಸಿಗಬಹುದಾದ ಸಂಪ ನ್ಮೂಲಗಳನ್ನು ಕ್ರೋಡ್ರೀಕರಿಸುವ ಕಾರ್ಯದಲ್ಲೂ ನೆರವಾಗಬೇಕು. ಸರ್ಕಾರ ಬಿಸಿಯೂಟ, ಉಚಿತ ಪಠ್ಯಪುಸ್ತಕ, ಕ್ಷೀರಭಾಗ್ಯದಂತಹ ಮಹತ್ತರ ಯೋಜನೆ ಗಳನ್ನು ನೀಡಿದೆ, ಇವುಗಳ ಸಮರ್ಪಕ ಅನುಷ್ಠಾನದ ಕಡೆಯೂ ಗಮನವಿರ ಬೇಕು’ ಎಂದು ತಿಳಿಸಿದರು.
‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಗೈರುಹಾಜರಿ ಪ್ರಮುಖ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸಲು ಎಸ್ಡಿಎಂಸಿ ಸದಸ್ಯರು ಶಿಕ್ಷಕರೊಂದಿಗೆ ಪ್ರತಿಮನೆಗೂ ತೆರಳಿ ಪೋಷಕರ ಮನವೊಲಿಸಿ, ಯಾವುದೇ ಮಗು ಶಿಕ್ಷಣದಿಂದ ವಂಚಿತ ವಾಗದಂತೆ ಎಚ್ಚರವಹಿಸಿ’ ಎಂದರು.
‘ಖಾಸಗಿ ಶಾಲೆಗಳು ಎಲ್ಲೆಂದರಲ್ಲಿ ತಲೆಯೆತ್ತಿವೆ. ಸರ್ಕಾರಿ ಶಾಲೆಗಳ ದಾಖಲಾತಿ ಮೇಲೆ ಹೊಡೆತ ಬೀಳದಂತೆ ಎಚ್ಚರವಹಿಸಬೇಕು. ಸರ್ಕಾರಿ ಶಾಲೆ ಯೊಂದು ಮುಚ್ಚಿದರೆ ಅದು ಸಮಾನ ಶಿಕ್ಷಣಕ್ಕೆ ಬೀಳುವ ದೊಡ್ಡ ಪೆಟ್ಟು’ ಎಂದು ಅಭಿಪ್ರಾಯಪಟ್ಟರು. ಮದ್ದೇರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ನಾಗೇಶ್, ಕ್ಯಾಲನೂರು ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಕಾರ್ಯಾಗಾರ ದಲ್ಲಿ ಪಾಲ್ಗೊಂಡಿದ್ದರು.