ಹನೂರು: ಇಲ್ಲಿನ ಸಮೀಪದ ರಾಮಾಪುರದಲ್ಲಿ ಡಿ. 21ರಂದು ಆರಂಭವಾದ ಗೋಶಾಲೆ ಅವ್ಯವಸ್ಥೆಯ ಆಗರವಾಗಿದೆ. ಜಾನುವಾರುಗಳಿಗೆ ನೆರಳು ಹಾಗೂ ಮೇವಿನ ಕೊರತೆ ಉಂಟಾಗಿದೆ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಆಶ್ರಯ ತಾಣವಾಗಬೇಕಿದ್ದ ಗೋಶಾಲೆಯಲ್ಲಿ ಬರುವ ಜಾನುವಾರುಗಳಿಗೆ ಸಮರ್ಪಕ ನೆರಳಿನ ವ್ಯವಸ್ಥೆ ಇಲ್ಲ. ಗೋವುಗಳ ಸಂರಕ್ಷಣೆಗೆ ಶಾಲೆ ಸುತ್ತ ತಂತಿ ಬೇಲಿಯನ್ನು ಹಾಕುವಂತೆ ಉದ್ಘಾಟನೆ ವೇಳೆ ಸಚಿವರ ಸೂಚಿಸಿದ್ದರು. ಆದರೆ, ಶಾಲೆ ಆರಂಭವಾಗಿ 13 ದಿನಗಳು ಕಳೆದರೂ ಜಿಲ್ಲಾ ತಾಲ್ಲೂಕು ಆಡಳಿತ ಇನ್ನೂ ಕಾಮಗಾರಿಯನ್ನು ಆರಂಭಿಸಿಲ್ಲ, ಪ್ರಾರಂಭದಲ್ಲಿ ಗೋಶಾಲೆಗೆ ಬರುತ್ತಿದ್ದ ಜಾನುವಾರುಗಳು ಸಂಖ್ಯೆ 400 ಇತ್ತು. ಈಗ 2000 ಗಡಿ ದಾಟಿದೆ.
ಗೋಶಾಲೆಯಲ್ಲಿ ಪ್ರತಿ ಜಾನುವಾರುಗಳಿಗೆ 5 ಕೆಜಿಯಂತೆ ದಿನ ಮೇವು ವಿತರಿಸಲಾಗುತ್ತಿದೆ. ಆದರೆ, ಮೇವು ಸಾಲುತ್ತಿಲ್ಲ. ಮೇವು ವಿತರಣೆಯಲ್ಲಿ ಸಿಬ್ಬಂದಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಗೋಶಾಲೆಯಲ್ಲಿ ಸಮರ್ಪಕ ಮೇವು ದೊರಕದ ಹಿನ್ನೆಲೆ ಮೂರು ದಿನಗಳ ಹಿಂದೆ ನೂರಾರು ಜಾನುವಾರುಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇಷ್ಟು ಸಮಸ್ಯೆಗಳಿದ್ದರೂ ಸಹ ಗೋಶಾಲೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ ಎನ್ನುತ್ತಾರೆ ಜಾನುವಾರು ಮಾಲೀಕರು.
ಜಿಲ್ಲಾಡಳಿತ ಹನೂರು, ಬಂಡಳ್ಳಿ, ಲೊಕ್ಕನಹಳ್ಳಿ, ಪಾಳ್ಯ ಮುಂತಾದ ಕಡೆ ಗೋಶಾಲೆ ತೆರೆಯಲು ಚಿಂತನೆ ನಡೆಸಿದೆ. ಆದರೆ. ಈಗಾಗಲೇ ತೆರೆದಿರುವ ಗೋಶಾಲೆ ಸಮರ್ಪಕ ವ್ಯವಸ್ಥೆಯಿಲ್ಲದೆ ರೈತರು ಪರದಾಡುವಂತಾಗಿದೆ.