ದೇವದುರ್ಗ: ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ರೈತರು ಕಂಗಲಾಗಿದ್ದಾರೆ. ಇತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ಅವರ ಪರವಾಗಿ ಸರ್ಕಾರ ನಡೆಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್. ಪುಟ್ಟಣಯ್ಯ ಆರೋಪಿಸಿದರು.
ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಸೋಮವಾರ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರೈತ ಜಾಗೃತಿ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದಿಗೂ ರೈತರಿಗೆ ಅನುಕೂಲವಾಗುವಂಥ ಒಳ್ಳೆಯ ಯೋಜನೆಯನ್ನು ಜಾರಿಗೊಳಿಸಿದ ಉದಾಹರಣೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವ ಬದಲು ಬಾರ್ ಭಾಗ್ಯ ನೀಡಲು ಮುಂದಾಗಿರುವುದು ರಾಜ್ಯದ ರೈತರ ದುರದೃಷ್ಟ ಎಂದರು.
ಇದುವರೆಗೂ ರಾಜ್ಯದಲ್ಲಿ ಸುಮಾರು 56ಸಾವಿರ ಜನ ರೈತರು ಆತ್ಮಹತ್ಯ ಮಾಡಿಕೊಂಡಿದ್ದಾರೆ. ಇದನ್ನು ತಡೆಗಟ್ಟಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದ ಅವರು, ನೀರಾವರಿ ಸಮಸ್ಯೆ, ಮಾರುಕಟ್ಟೆ ಸಮಸ್ಯೆ, ವಿದ್ಯುತ್ ಸಮಸ್ಯೆ, ಬೆಂಬಲ ಬೆಲೆ ಸೇರಿದಂತೆ ಬೆಲೆ ಕುಸಿಯದಂತೆ ಎಚ್ಚರ ವಹಿಸುವ ಬಗ್ಗೆ ಸರ್ಕಾರಗಳು ಚಿಂತನೆ ನಡೆಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ರಾಜ್ಯದ ರೈತರು ಜಾಗೃತರಾಗಬೇಕಾಗಿದೆ ಎಂದರು.
ನೋಟು ರದ್ದಾದ ನಂತರ ಸಾಮಾನ್ಯ ಜನರು ಮಾತ್ರ ಬ್ಯಾಂಕ್ಗಳ ಮುಂದೆ ಸಾಲು, ಸಾಲಾಗಿ ನಿಂತು ಹಣ ಪಡೆಯಲು ಪರದಾಡಬೇಕಾಯಿತು ಆದರೆ ಇದುವರಿಗೂ ಒಬ್ಬ ಜನಪ್ರತಿನಿಧಿಗಳು ಯಾವ ಬ್ಯಾಂಕ್ಗಳ ಮುಂದೆ ಸಾಲಿನಿಲ್ಲಿ ನಿಂತು ಹಣ ಪಡೆದ ಉದಾಹರಣೆ ಇಲ್ಲ. ಇದಕ್ಕೆಲ್ಲ ಕಾರಣ ಭ್ರಷ್ಟರನ್ನು ರಕ್ಷಿಸಲು ನಡೆದ ತಂತ್ರವಾಗಿದೆ ಎಂದರು.
ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ ಬೆಟ್ಟದೂರ ಮಾತನಾಡಿದರು. ಮಟಮಾರಿ, ಗಬ್ಬೂರು ಸಂಸ್ಥಾನದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಬೂದಿ ಬಸವ ಶಿವಾಚಾರ್ಯ ಸ್ವಾಮೀಜಿ, ಸುಲ್ತಾನಪುರ ಮಠದ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮೂಕಯ್ಯ ತಾತ ಗಬ್ಬೂರು ಸಾನಿಧ್ಯ ವಹಿಸಿದ್ದರು.
ದೊಡ್ಡ ಬಸನಗೌಡ ಬಲ್ಲಟಿಗಿ, ಯಾದಗಿರಿಯ ಎನ್ ಹಾಲಭಾವಿ, ಬಳ್ಳಾರಿಯ ಪುರುಷೋತ್ತಮಗೌಡ, ರಾಯಚೂರಿನ ಲಕ್ಷ್ಮಣಗೌಡ ಕಡಗಂದೊಡ್ಡಿ, ಸೂಗೂರಪ್ಪಗೌಡ ಗಬ್ಬೂರು, ತಮ್ಮನಗೌಡ ಮಂದಕಲ್, ರಾಜ್ಯ ಮಹಿಳಾ ಕಾರ್ಯದರ್ಶಿ ನಾಗರತ್ನ ಪಾಟೀಲ, ತಾಲ್ಲೂಕು ಸಂಚಾಲಕ ಬೂದಯ್ಯಸ್ವಾಮಿ ಗಬ್ಬೂರು, ಪ್ರಭಾಕರ್ ಇಂಗಳದಾಳ, ಶರಣಗೌಡ ಮಂದಕಲ್, ಬಸನಗೌಡ ಅಗ್ರಹಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.