ವಿರಾಜಪೇಟೆ: ಪಟ್ಟಣದ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವಕ್ಕೆ ಭಾನುವಾರ ಸಂಜೆ ನಡೆದ ಅದ್ಧೂರಿ ಮೆರವಣಿಗೆಯೊಂದಿಗೆ ತೆರೆ ಬಿದ್ದಿತು.ಡಿ.30ರಂದು ಆರಂಭಗೊಂಡ ಉತ್ಸವದ ಅಂಗವಾಗಿ ಭಾನುವಾರ ಬೆಳಗ್ಗಿನಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನದಾನ ನಡೆಯಿತು.
ಭಾನುವಾರ ಸಂಜೆ 7ಕ್ಕೆ ದೇವಾಲಯದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ದೀಪಾರತಿ, ಆನೆ ಅಂಬಾರಿ, ಕೇರಳದ ಚಂಡೆಮದ್ದಳೆ, ಅಯ್ಯಪ್ಪನ ಚಲನವಲನವಿರುವ ವಿಗ್ರಹ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ ಪಾಲ್ಗೊಂಡಿದ್ದವು. ಪುಟ್ಟ ಹೆಣ್ಣು ಮಕ್ಕಳು ದೀಪಾರತಿಯೊಂದಿಗೆ ಹಾಗೂ ಅಯ್ಯಪ್ಪ ವ್ರತಧಾರಿ ಭಕ್ತರು ಕಳಸದೊಂದಿಗೆ ಮೆರವಣಿಗೆಯ ಮುಂಭಾಗದಲ್ಲಿ ಹೆಚ್ಚೆ ಹಾಕಿದರು.
ಮೆರವಣಿಗೆಯು ಪಟ್ಟಣದ ತೆಲುಗರ ಬೀದಿ, ಜೈನರ ಬೀದಿ, ಎಫ್ಎಂಸಿ ರಸ್ತೆ ಮಾರ್ಗವಾಗಿ ರಾತ್ರಿ 11ಕ್ಕೆ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನ ತಲುಪಿತು. ಬಳಿಕ ದೇವಾಲಯದಲ್ಲಿ ಮುತ್ತಪ್ಪ ದೇವರು ಹಾಗೂ ಆನೆ ಅಂಬಾರಿಗೆ ಪೂಜೆ ಸಲ್ಲಿಸಿದ ರಾತ್ರಿ 12ಕ್ಕೆ ದೇವಾಲಯಕ್ಕೆ ಹಿಂದಿರುಗಿತು. ಬಳಿಕ ದೇವಾಲಯದಲ್ಲಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸುವದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಮೆರವಣಿಗೆಯನ್ನು ವೀಕ್ಷಿಸಲು ಸಂಜೆ ಯಿಂದಲೇ ಪಟ್ಟಣದ ದೊಡ್ಡಟ್ಟಿ ಚೌಕಿ ಯಿಂದ ಗಡಿಯಾರ ಕಂಬದವರೆಗೆ ಸ್ಥಳೀಯ ಹಾಗೂ ಸುತ್ತಲಿನ ಗ್ರಾಮದ ಭಕ್ತರು ರಸ್ತೆಯ ಎರಡು ಬದಿಗಳಲ್ಲಿ ಸೇರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.