ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ, ನಕಲಿ ಶೈಕ್ಷಣಿಕ ದಾಖಲೆ ಸಲ್ಲಿಸಿದ್ದ 40 ಅಭ್ಯರ್ಥಿಗಳ ಆಯ್ಕೆಯನ್ನು ರದ್ದು ಮಾಡಿರುವುದು ಮಹತ್ವದ ಬೆಳವಣಿಗೆ.
ಈ ರೀತಿ ಕ್ರಮ ಜರುಗಿಸಿರುವುದು ಬಹುಶಃ ಇದೇ ಮೊದಲು. ಪಿಎಚ್.ಡಿ. ಮೂಲಕ ನೇಮಕಗೊಂಡ ಅಭ್ಯರ್ಥಿಗಳ ಮಹಾಪ್ರಬಂಧದ ಶೀರ್ಷಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್ಸೈಟ್ನಲ್ಲಿ ಪ್ರಕಟಿಸಿ, ಆಕ್ಷೇಪ ಸಲ್ಲಿಕೆಗೆ ಅವಕಾಶ ನೀಡಬೇಕು. ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2009ರಲ್ಲಿ ನಡೆದ ಉಪನ್ಯಾಸಕರ ನೇಮಕಾತಿಯಲ್ಲೂ, ಬೇರೆ ರಾಜ್ಯದ ದೂರ ಶಿಕ್ಷಣ ಕೇಂದ್ರಗಳ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅನೇಕ ಮಹಾಪ್ರಬಂಧಗಳಲ್ಲೂ ನಕಲುಗಳಿದ್ದುದು ಕಂಡುಬಂದಿತ್ತಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲಿಲ್ಲ.
ಉನ್ನತ ಶಿಕ್ಷಣ ನೀಡುವ ಮಹತ್ವದ ಹುದ್ದೆಗೆ ಈ ರೀತಿ ವಾಮಮಾರ್ಗದಿಂದ ನೇಮಕಗೊಂಡರೆ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹೇಗೆ ಸಾಧ್ಯ? ಹೀಗಾಗಿ ಇಂತಹ ನೇಮಕಾತಿಗಳಲ್ಲಿ ಎಲ್ಲ ಅರ್ಹತಾ ಪರೀಕ್ಷೆಗಳ ಪ್ರಮಾಣಪತ್ರಗಳನ್ನೂ ಕೂಲಂಕಷವಾಗಿ ಪರೀಶೀಲಿಸಿ ನೇಮಕಾತಿ ಆದೇಶ ನೀಡಬೇಕು.
-ಡಾ. ಬಸವರಾಜ್ ಎನ್. ಅಕ್ಕಿ, ಧಾರವಾಡ