ಆನೇಕಲ್: ‘ಬ್ರಾಹ್ಮಣ ಸಮಾಜದಲ್ಲಿನ ಒಳಪಂಗಡಗಳಲ್ಲಿನ ಆಚರಣೆ, ವಿಚಾರಗಳನ್ನು ಮನೆಗೆ ಮಾತ್ರ ಸೀಮಿತಗೊಳಿಸಿ, ಒಳಪಂಗಡಗಳು ಒಗ್ಗೂಡಿ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕು ಎಂದು ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ರಾಮಸ್ವಾಮಿ ನುಡಿದರು. ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಗಾಯತ್ರಿ ವಿಪ್ರ ವೃಂದದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಂಘಟನೆಯ ಕೊರತೆಯಿಂದಾಗಿ ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನ ಪಡೆಯಲು ಸಾಧ್ಯವಾಗಿಲ್ಲ. ಬ್ರಾಹ್ಮಣರಿಗೂ ಸಹ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಬೇಕು. ಇದಕ್ಕಾಗಿ ಪ್ರಬಲವಾದ ಹೋರಾಟ ರೂಪಿಸುವ ಅವಶ್ಯಕತೆಯಿದೆ ಎಂದರು.
ಆಚಾರ ವಿಚಾರ ಕೈಬಿಡಬೇಡಿ: ಪ್ರಾಧ್ಯಾಪಕ ಆಗುಂಬೆ ಗುರುರಾಜ್ ಭಟ್ ಮಾತನಾಡಿ ಮಾತನಾಡಿ ಆಚಾರ ವಿಚಾರಗಳನ್ನು ಕೈಬಿಡಬಾರದು. ಸಂಪ್ರದಾಯಗಳು ಪ್ರಾಚೀನ ಕಾಲದಿಂದ ನಡೆದು ಬಂದಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು. ಗಾಯತ್ರಿ ಮಂತ್ರಕ್ಕೆ ಅಪಾರವಾದ ಶಕ್ತಿಯಿದೆ ಎಂದರು. ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಗಾಯತ್ರಿ ವಿಪ್ರ ವೃಂದದ ಗೌರವಾಧ್ಯಕ್ಷ ಸೋಮಶೇಖರ್ ಮಯ್ಯ, ಅಧ್ಯಕ್ಷ ಪಿ.ಕೃಷ್ಣಮೂರ್ತಿ, ಉಪಾಧ್ಯಕ್ಷೆ ಶೈಲಾ ಎಚ್.ಪಿ, ಕಾರ್ಯದರ್ಶಿ ಗುರುರಾಜ್ ಕಳ್ಳಿಹಾಳ್, ಖಜಾಂಚಿ ದತ್ತಾತ್ರೇಯ ನಾಡಿಗೇರ್, ಜಂಟಿ ಕಾರ್ಯದರ್ಶಿ ನಾಗವಲ್ಲಿ ಗಿರಿಧರ್, ಸಂಘಟನಾ ಕಾರ್ಯದರ್ಶಿಗಳಾದ ಎಸ್. ರವಿಕುಮಾರ್, ಕೃಷ್ಣಮೂರ್ತಿ ಎ.ಆರ್, ಕುಮಾರ್ ಸ್ವಾಮಿ.ಎನ್, ಇಂದಿರಾ.ವಿ. ಯಮುನಾಚಾರ್, ಸುಧೀರ್ ಅತ್ರಿ, ಡಿ.ಎನ್.ನಾಗೇಂದ್ರ, ಶಶಿಪ್ರಕಾಶ್, ಹನುಮಂತರಾವ್, ಕಿರಣ್, ಪ್ರಕಾಶ್, ವೆಂಕಟೇಶ್ ಕುಲಕರ್ಣಿ ಹಾಜರಿದ್ದರು.