ಕನಕಪುರ: ತಮ್ಮ ಕುಟುಂಬಕ್ಕೂ ಸರ್ಕಾರದಿಂದ ಸಾಗುವಳಿ ಮಂಜೂರಾತಿ ನೀಡಿ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿ ಹಕ್ಕಿಪಿಕ್ಕಿ (ಅಲೆಮಾರಿ) ಜನಾಂಗದ ಕುಟುಂಬಗಳು ನಿರಂತರವಾಗಿ ತಾಲ್ಲೂಕು ಕಚೇರಿ ಮುಂಭಾಗ ಬೀಡು ಬಿಟ್ಟಿದ್ದಾರೆ.
ತಾಲ್ಲೂಕಿನ ಗಡಿ ಭಾಗವಾದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಜಂಗಲ್ ಲಾಡ್ಜ್ ಬಳಿಯ ರಾಗಿಹಳ್ಳಿಯಲ್ಲಿ ಈ ಕುಟುಂಬಗಳು ನೆಲೆಸಿವೆ. ಸರ್ಕಾರದ ಹಿಂದಿನ ಗಣತಿ ಪ್ರಕಾರ 121 ಕುಟುಂಬಗಳು ನೆಲೆಸಿದ್ದು 1962ರಲ್ಲಿ ಇಲ್ಲಿನ ಎಲ್ಲಾ ಕುಟುಂಬಗಳಿಗೆ 350 ಎಕರೆ ಭೂಮಿಯನ್ನು ಸರ್ಕಾರ ಮಂಜೂರಾತಿ ಮಾಡಿತ್ತು. ಮಂಜೂರಾಗಿದ್ದ ಭೂಮಿ ಅರಣ್ಯ ಪ್ರದೇಶದ ಅಧೀನದಲ್ಲಿದ್ದುದರಿಂದ ಈ ಕುಟುಂಬಗಳಿಗೆ ಸಿಕ್ಕಿರಲಿಲ್ಲ.
ನಂತರದ ದಿನಗಳಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಒಡಂಬಡಿಕೆಯಂತೆ ಅಷ್ಟು ಭೂಮಿಯನ್ನು ಕಂದಾಯ ಇಲಾಖೆಯ ವಶಕ್ಕೆ ಅರಣ್ಯ ಇಲಾಖೆ ಬಿಟ್ಟುಕೊಟ್ಟಿದೆ. ಬಳಿಕ ಸರ್ಕಾರವು ಸಾಗುವಳಿದಾರರಿಗೆ ಮಂಜೂರಾತಿ ಹಕ್ಕುಪತ್ರ ವಿತರಣೆಗೆ ಮುಂದಾದಾಗ 83 ಕುಟುಂಬಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡು ಗೊಂದಲ ಶುರುವಾಗಿದೆ.
‘ತಂದೆ, ತಾತನ ಕಾಲದಲ್ಲಿ ಇಲ್ಲೇ ಇದ್ದೆವು, ನಂತರದ ದಿನಗಳಲ್ಲಿ ಹೊರಗಡೆ ಹೋಗಿದ್ದೇವೆ. ನಮ್ಮ ಕುಟುಂಬಕ್ಕೂ ಇಲ್ಲಿ ಸಾಗುವಳಿ ಭೂಮಿ ಬರಬೇಕೆಂದು ಒತ್ತಾಯ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಎಲ್ಲಾ ಕುಟುಂಬಗಳ ಹಿನ್ನೆಲೆಯನ್ನು ಪತ್ತೆಹಚ್ಚಿ ಅವರ ದಾಖಲೆಗಳನ್ನು ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವು ಉಪ ವಿಭಾಗಾಧಿಕಾರಿಗೆ ಜವಾಬ್ದಾರಿ ನೀಡಿದೆ ಎಂದು ಜನಾಂಗದವರೊಬ್ಬರು ತಿಳಿಸಿದರು.