ನನ್ನ ಜೀವನದ ಬಹುತೇಕ ಭಾಗವನ್ನು ಚಿಂತಾಮಣಿಯಲ್ಲಿ ಕಳೆದಿದ್ದೇನೆ. ನನ್ನ ಬೇರುಗಳು ಇದ್ದುದ್ದು ಅಲ್ಲಿಯೇ. ಅಲ್ಲಿ ಗೆಳೆಯರ ಬಳಗವನ್ನು ಕಟ್ಟಿಕೊಂಡು ಸಾಂಸ್ಕೃತಿಕ ವಾತಾವರಣವನ್ನೂ ರೂಪಿಸಿದೆ. ಆ ಊರಿನ ನೆನಪಿಗಾಗಿಯೇ ನಾನು ಪದ್ಮನಾಭನಗರದಲ್ಲಿರುವ ನಮ್ಮ ಮನೆಗೆ ‘ಚಿಂತಾಮಣಿ’ ಎಂಬ ಹೆಸರು ಇರಿಸಿದ್ದೇನೆ.
ಚಿಂತಾಮಣಿಯನ್ನು ಬಿಟ್ಟುಬರುತ್ತೇನೆಂಬ ಯೋಚನೆಯೂ ನನಗಿರಲಿಲ್ಲ. ಆದರೆ, ಅನಿವಾರ್ಯವಾಗಿ ಇಲ್ಲಿಗೆ ಬರಬೇಕಾಯಿತು. ಚಿಂತಾಮಣಿಯನ್ನು ಬಿಟ್ಟು ಬರಬೇಕಾದರೆ ಏನನ್ನೋ ಕಳೆದುಕೊಳ್ಳುವ ಭಾವ ನನಗುಂಟಾಯಿತು. ಆದರೆ, ಚಿಂತಾಮಣಿಯ ಆ ಬೇರನ್ನು ಕಿತ್ತು ಈಗ ಇಲ್ಲಿ ನೆಟ್ಟಿದ್ದೇನೆ ಎಂಬ ಸಮಾಧಾನವಿದೆ.
ಅಲ್ಲಿನ ಎಲ್ಲಾ ನೆನಪುಗಳನ್ನೂ ಚಿಂತಾಮಣಿ ಎಂಬ ಹೆಸರಿನ ಮೂಲಕ ಇಲ್ಲಿಗೆ ತಂದಿರುವೆ. ಹಾಗಾಗಿ, ಈ ಮನೆಯಲ್ಲಿರುವ ನಾನಿನ್ನೂ ಚಿಂತಾಮಣಿಯಲ್ಲಿಯೇ ಇರುವೆ ಎಂದು ಭಾಸವಾಗುತ್ತದೆ. ನನ್ನೊಳಗಿನ ಚಿಂತಾಮಣಿ ಇನ್ನೂ ಹಸಿರಾಗಿದೆ.
-ಬಿ.ಆರ್.ಲಕ್ಷ್ಮಣರಾವ್, ಕವಿ