ಎಲ್ಲ ಸರಕಾರಿ ಕಚೇರಿಗಳೂ ಗ್ರಹಣಗ್ರಸ್ತ
ನೌಕರರ ‘ಕೆಲಸತ್ಯಾಗ’
ಕ್ರಮ ಪೂರಾ ಯಶಸ್ವಿ
ಬೆಂಗಳೂರು, ಜ. 5– ಕುರ್ಚಿ ಮೇಜುಗಳು ಖಾಲಿ, ಅಧಿಕಾರಿಗಳ ಹಾಗೂ ನೌಕರರ ಸಡಗರದ ಓಡಾಟವಿಲ್ಲ. ನಿಸ್ತೇಜವಾದ ಕಚೇರಿಗಳು. ಕಾಗದ ಪತ್ರಗಳ ಸರ ಸರ ಶಬ್ದ ಸ್ತಬ್ಧ.
ನಿರೀಕ್ಷೆ ಮೀರಿ ಸಫಲವಾದ ನಾನ್ ಗೆಜೆಟೆಡ್ ಅಧಿಕಾರಿಗಳ ‘ಕೆಲಸ ತ್ಯಾಗ’ ಕಾರ್ಯಕ್ರಮದಿಂದ ಸೆಕ್ರೆಟೇರಿಯೇಟ್ ಸೇರಿ ನಗರದ ಸರ್ಕಾರಿ ಕಚೇರಿಗಳೆಲ್ಲವೂ ಗ್ರಹಣಗ್ರಸ್ತ.
ಮೇರಿ ದೇವಾಸಿಯಾ ಬಂಧನ
ಬೆಂಗಳೂರು, ಜ. 5- ರಾಜ್ಯದ ನಾನ್ಗೆಜೆಟೆಡ್ ಅಧಿಕಾರಿಗಳ ಸಂಘದ ಅಧ್ಯಕ್ಷೆ ಶ್ರೀಮತಿ ಮೇರಿ ದೇವಾಸಿಯಾ ಅವರನ್ನು ಪೊಲೀಸರು ಬಂಧಿಸಿದರು.
ಮಹಾತ್ಮ ಗಾಂಧಿ ರಸ್ತೆಯಲ್ಲಿನ ಹೊಟೇಲ್ ಒಂದರಲ್ಲಿ ಸಂಜೆ ನಡೆದ ಪತ್ರಿಕಾಗೋಷ್ಠಿಯನ್ನು ಮುಗಿಸಿಕೊಂಡು ಹೊರಕ್ಕೆ ಬಂದಾಗ, ಅಲ್ಲಿ ಕಾದಿದ್ದ ಪೊಲೀಸರು ‘ತಮ್ಮನ್ನು ಬಂಧಿಸಲಾಗಿದೆ’ ಎಂದು ಹೇಳಿ, ರಸ್ತೆಯಲ್ಲಿ ನಿಲ್ಲಿಸಿದ್ದ ವ್ಯಾನಿನ ಬಾಗಿಲನ್ನು ತೆಗೆದು ಕೂಡಿಸಿಕೊಂಡು ಕರೆದುಕೊಂಡು ಹೋದರು.
ವೇತನಕ್ಕೆ ಕತ್ತರಿ: ಬಂದವರಿಗೆ ಬಹುಮಾನ
ಬೆಂಗಳೂರು, ಜ. 5– ಇಂದು ‘ಕೆಲಸ ತ್ಯಾಗ’ದ ಅಂಗವಾಗಿ ಗೈರುಹಾಜರಾದ ವರಿಗೆ ಒಂದು ದಿನದ ಸಂಬಳ ಖೋತಾ ಮಾಡುವ ಮೂಲಕ ಸರ್ಕಾರ ಕ್ರಮ ಕೈಗೊಳ್ಳುವ ಸಂಭವವಿದೆಯೆಂದು ಸರ್ಕಾರಿ ವಲಯಗಳಿಂದ ತಿಳಿದುಬಂದಿದೆ.