ಔರಾದ್: ಮೈಸೂರಿನ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿಯಲ್ಲಿ ಈಚೆಗೆ ಒಂದು ವಾರ ಕಾಲ ನಡೆದ ಭಾರತ ಸ್ಕೌಟ್ಸ್, ಗೈಡ್ಸ್ 17ನೇ ರಾಷ್ಟ್ರೀಯ ಜಾಂಬೂರಿ ಸಮಾವೇಶದಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ಪಾಲ್ಗೊಂಡು ವೈವಿಧ್ಯ ಮಯ ಪ್ರದರ್ಶನ ನೀಡಿದರು. ಸಮಾವೇಶದಲ್ಲಿ ಈ ತಾಲ್ಲೂಕಿನ ಸ್ಕೌಟ್ಸ್ನ 16 ವಿದ್ಯಾರ್ಥಿಗಳು ಮತ್ತು ಗೈಡ್ಸ್ನ 12 ವಿದ್ಯಾರ್ಥಿನಿಯರು ಪಾಲ್ಗೊಂಡು ಜಿಲ್ಲೆಯ ಸಂಸ್ಕೃತಿ ಮತ್ತು ಕಲೆ ಪ್ರದರ್ಶಿಸುವುದರ ಜೊತೆಗೆ ವಿವಿಧ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆದಿದ್ದಾರೆ.
'ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕರುವುದು ನಮ್ಮ ಸೌಭಾಗ್ಯ. ದೇಶದ ವಿವಿಧ ರಾಜ್ಯಗಳ ಹಾಗೂ ನೆರೆ ದೇಶದ ನೇಪಾಳ, ಬಾಂಗ್ಲಾದೇಶ, ಮಾಲ್ಡಿವ್ಸ್, ಮಲೇಷಿಯಾ, ಭೂತಾನ್ ದೇಶದ ವಿದ್ಯಾರ್ಥಿಗಳ ಜೊತೆ ಕಾಲ ಕಳೆಯಲು ಅವಕಾಶ ಸಿಕ್ಕಿತ್ತು. ಅವರ ಭಾಷೆ ಮತ್ತು ಸಂಸ್ಕೃತಿ ನಮಗೆ ಪರಿಚಯ ಮಾಡಿಕೊ ಳ್ಳುವುದರ ಜೊತೆಗೆ ಅದ್ಭುತ ಅನುಭವ ಸಿಕ್ಕಿದೆ’ ಎಂದು ಈ ಸಮಾವೇಶದಲ್ಲಿ ಪಾಲ್ಗೊಂಡ ಯನ ಗುಂದಾ ಸರ್ಕಾರಿ ಪ್ರೌಢ ಶಾಲೆ ಸ್ಕೌಟ್ಸ್ ವಿದ್ಯಾರ್ಥಿ ಸುಧಾಮ ಶರಣಪ್ಪ ಹೇಳಿದರು.
ಈ ಸಮಾವೇಶದಲ್ಲಿ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ಬಹಳ ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದಾರೆ ಎಂದು ಸ್ಕೌಟ್ಸ್ ಮಾಸ್ಟರ್ ಮಲ್ಲಿಕಾರ್ಜುನ ಟಂಕಸಾಲೆ ತಮ್ಮ ಅನುಭವ ಹಂಚಿ ಕೊಡರು. ಏಳು ದಿನಗಳ ಕಾಲ ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ನಿರಂತರವಾಗಿ ಚಟುವಟಿಕೆಗಳು ನಡೆದಿವೆ. ನಮ್ಮ ವಿದ್ಯಾರ್ಥಿಗಳು ಸ್ಕೌಟ್ಸ್ ಪರೇಡ್ನಲ್ಲಿ ಭಾಗವಹಿಸುವುದರ ಜೊತೆಗೆ ನೃತ್ಯ, ಚಿತ್ರಕಲೆ, ರೂಪ್ ಕ್ಲೈಂಬಿಂಗ್, ವಾಲ್ ಕ್ಲೈಂಬಿಂಗ್, ಫನ್ಗೇಮ, ಯೋಗ, ರಂಗೋಲಿ, ಸ್ಮರಣಶಕ್ತಿ ಹೆಚ್ಚಿಸುವ ಕ್ಲೈ ಮಾಡಲಿಂಗ್, ಮಾಹಿತಿ ತಂತ್ರಜ್ಞಾನ, ಸೂಟಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ಬಹಳ ಮುಕ್ತವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆದಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಜಿಲ್ಲೆಯ ವಿವಿಧ ಶಾಲೆಗಳ 200 ಮಕ್ಕಳೂ ಜಾಂಬೂರಿ ಸಮಾವೇಶ ದಲ್ಲಿ ಪಾಲ್ಗೊಂಡು ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ರಾಷ್ಟ್ರೀಯ ಭಾವೈಕ್ಯತೆ ಪ್ರತಿಬಿಂಬಿಸುವ ವೇಷ ಭೂಷಣ ಆಧರಿಸಿದ ಪ್ರದರ್ಶನ ಎಲ್ಲರೂ ಮೆಚ್ಚುವಂತಿತ್ತು. ಭಾರತ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಗುರುಮ್ಮ ಸಿದ್ಧಾರೆಡ್ಡಿ, ಸಂಘಟನಾ ಆಯುಕ್ತ ಡಾ. ಹಣಮಂತರಾವ ಭರಶೆಟ್ಟಿ ಮತ್ತು ಜಿಲ್ಲೆಯ ಐವರು ಶಿಕ್ಷಕರು ಸಮಾವೇಶ ದಲ್ಲಿ ಪಾಲ್ಗೊಂಡು ಮಕ್ಕಳಿಗೆ ಪ್ರೇರಣೆ ನೀಡಿದರು ಎಂದು ಮಲ್ಲಿಕಾರ್ಜುನ ಟಂಕಸಾಲೆ ತಿಳಿಸಿದರು.