ಕಾರವಾರ: ಇಲ್ಲಿನ ಕಾಯ್ಕಿಣಿ ರಸ್ತೆಯಲ್ಲಿನ ನಾಲೆಯ ತಡೆಗೋಡೆ ಒಡೆದಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಜೀವ ಹಾನಿ ನಿಶ್ಚಿತ. ಹೀಗಾಗಿ ಈ ಭಾಗದಲ್ಲಿ ನಿತ್ಯ ಸಂಚರಿಸುವ ಜನರಲ್ಲಿ ಇದು ಆತಂಕ ಮೂಡಿಸಿದೆ.
ಕಿರಿದಾದ ಈ ರಸ್ತೆಯು ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಲಾಡ್ಜ್, ಹೋಟೆಲ್, ಬ್ಯಾಂಕ್ ಹಾಗೂ ವಾಣಿಜ್ಯ ಸಂಕೀರ್ಣಗಳು ಇರುವುದರಿಂದ ಜನಸಂದಣಿ ಕೂಡ ಹೆಚ್ಚಾಗಿರುತ್ತದೆ. ಹಬ್ಬುವಾಡದಿಂದ ಬರುವ ವಾಹನ ಸವಾರರು ಈ ರಸ್ತೆಯ ಮೂಲಕ ಕಾರವಾರದ ಮುಖ್ಯರಸ್ತೆಗೆ ಹಾದುಹೋಗಬೇಕು. ಆದರೆ ಈ ಭಾಗದಲ್ಲಿನ ಈ ನಾಲೆಯು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಇಲ್ಲಿನ ನಾಲೆಯ ತಡೆಗೋಡೆಯನ್ನು ಚೀರೆಕಲ್ಲಿನಿಂದ ನಿರ್ಮಿಸಲಾಗಿದ್ದು, ಕಾಲಕ್ರಮೇಣ ಒಂದು ಭಾಗ ಸಡಿಲಗೊಂಡು ಕಿತ್ತು ಹೋಗಿದೆ. ಇದು ಹಾಳಾಗಿ ಅನೇಕ ತಿಂಗಳುಗಳು ಕಳೆದರೂ ನಗರಸಭೆಯಿಂದ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಅಲ್ಲದೇ ನಾಲೆಗೆ ನಿರ್ಮಿಸಿರುವ ಸೇತುವೆ ಕೂಡ ನಿರ್ವಹಣೆ ಇಲ್ಲದೇ ಸೊರಗಿದೆ. ಅಲ್ಲಲ್ಲಿ ಒಣ ಹುಲ್ಲುಗಳು ಬೆಳೆದಿದ್ದು, ಕಸ ತುಂಬಿ ತುಳುಕುತ್ತಿದೆ.
ಸೊಳ್ಳೆಗಳ ಕಾಟ
ತೆರೆದ ನಾಲೆಯಲ್ಲಿ ಕೊಳಚೆ ನೀರು ಸದಾ ನಿಂತಿರುತ್ತದೆ. ಹೀಗಾಗಿ ಈ ಭಾಗದಲ್ಲಿ ಸೊಳ್ಳೆಗಳ ಕಾಟ ವಿಪರೀತ. ಅಲ್ಲದೇ ಒಮ್ಮೊಮ್ಮೆ ದುರ್ನಾತ ಕೂಡ ಬೀರುತ್ತಿರುತ್ತದೆ. ಸಮೀಪದ ಲಾಡ್ಜ್ ಕೊಠಡಿಯ ಕಿಟಕಿ ಸ್ವಲ್ಪ ತೆರೆದರೂ ಸೊಳ್ಳೆ ಮುತ್ತಿಕೊಳ್ಳುತ್ತವೆ. ಅಲ್ಲದೇ ಸಮೀಪದ ಮಳಿಗೆಗಳ ಮಾಲೀಕರು ಹಾಗೂ ಗ್ರಾಹಕರು ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.
‘ಹಬ್ಬುವಾಡ ಹಾಗೂ ಕಾಜುಬಾಗದ ನಾಲೆಗಳಿಂದ ಹರಿದು ಬರುವ ಕೊಳಚೆ ನೀರು ಈ ಭಾಗದಲ್ಲಿ ಸಂದಿಸುತ್ತದೆ. ಆಗಾಗ ತುಂಬಿಕೊಳ್ಳುವ ಹೂಳನ್ನು ತೆಗೆಯಬೇಕಾದ್ದರಿಂದ ಚರಂಡಿಯ ಮೇಲ್ಭಾಗಕ್ಕೆ ಸ್ಲ್ಯಾಬ್ ಅಳವಡಿಸಿಲ್ಲ. ಈ ಮಲಿನ ನೀರು ನಿಲ್ಲದೇ ಸರಾಗವಾಗಿ ಹರಿದು ಹೋಗಲು ಹಾಗೂ ಹೂಳು ತುಂಬಿಕೊಳ್ಳದಂತೆ ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಕುರಿತು ಚಿಂತಿಸಲಾಗುವುದು’ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಂ.ಮೋಹನರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
***
ದುರ್ವಾಸನೆ
ಈ ನಾಲೆಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಅಲ್ಲದೇ ಸೊಳ್ಳೆಗಳ ಉತ್ಪತ್ತಿ ತಾಣ ಕೂಡ ಆಗಿದೆ. ಎರಡು ಕಡೆಗಳಲ್ಲೂ ತಡೆಗೋಡೆ ಹಾಳಾಗಿರುವುದರಿಂದ ಬೈಕ್ ಸವಾರರು ಹಾಗೂ ಪಾದಚಾರಿಗಳು ಸಮಸ್ಯೆ ಎದುರಿಸಬೇಕಾಗಿದೆ. ನಾಲೆ ನಿರ್ಮಾಣದ ಸಂದರ್ಭದಲ್ಲಿ ಕಾಂಕ್ರೀಟ್ಗೆ ಹಾಕಿದ ಕಬ್ಬಿಣದ ಸರಳುಗಳು ಮೇಲ್ಮುಖವಾಗಿ ನಿಂತಿವೆ. ವಾಹನದಲ್ಲಿ ಸಂಚರಿಸುವಾಗ ನಿಯಂತ್ರಣ ತಪ್ಪಿ ತಡೆಗೋಡೆ ಬದಿಗೆ ಸರಿದರೆ ನಾಲೆಗೆ ಬೀಳುವುದು ನಿಶ್ಚಿತ. ಅಲ್ಲದೇ ಚೂಪಾದ ಸರಳುಗಳು ನಮ್ಮ ಜೀವಕ್ಕೆ ಕುತ್ತು ತರುವ ಸಾಧ್ಯತೆ ಕೂಡ ಹೆಚ್ಚು ಎಂದು ಬೈಕ್ ಸವಾರ ಕಿರಣ ನಾಯ್ಕ ಹೇಳಿದರು.
**
ನಾಲೆಯ ತಡೆಗೋಡೆಯ ಅವ್ಯವಸ್ಥೆಯನ್ನು ಪರಿಶೀಲಿಸಿ, ಆನಂತರ ಅದರ ದುರಸ್ತಿಗೆ ಕ್ರಮ ವಹಿಸಲಾಗುವುದು
-ಆರ್.ವಿ.ಜತ್ತನ್ನ
ಪೌರಾಯುಕ್ತ