ಹುಬ್ಬಳ್ಳಿ: ಮೊದಲು ಪುತ್ರನ ‘ವಿದ್ಯುತ್ ವೀಣೆ’ಯ ಮೋಡಿಗೆ ಮನಸೋತ ಶ್ರೋತೃಗಳು ನಂತರ ತಂದೆಯ ಪ್ರಬುದ್ಧ ಗಾಯನದ ಗುಂಗಿನಲ್ಲಿ ಮೈಮರೆತರು. ಕೊನೆಗೆ ಇಬ್ಬರೂ ಜೊತೆಯಾಗಿ ಪ್ರಸ್ತುತಪಡಿಸಿದ ‘ಜುಗಲ್ ಬಂದಿ’ಯ ರಸಗಡಲಲ್ಲಿ ಮಿಂದೆದ್ದರು.
ನಗರದ ಕಲಾ ಧರೋಹರ್ ಸಂಸ್ಥೆ ಕಾಟನ್ ಮಾರ್ಕೆಟ್ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಗಂಗೂಬಾಯಿ ಹಾನಗಲ್ ಸಂಗೀತ ಮಹೋತ್ಸವದ ಕೊನೆಯ ದಿನವಾದ ಭಾನುವಾರ ಸಂಜೆ ಇಂಥ ಮೋಹಕ ವಾತಾವರಣ ನಿರ್ಮಿಸಿದ್ದು ಮುಂಬೈನ ಪಂ.ಅಜಯ ಪೋಹಣಕರ್ ಮತ್ತು ಅವರ ಪುತ್ರ ಅಭಿಜಿತ್ ಪೋಹಣಕರ್.
ಸಂಗೀತಜ್ಞರು ವಿದ್ಯುತ್ ವೀಣೆ ಎಂದೇ ಬಣ್ಣಿಸಿರುವ ಕೀಬೋರ್ಡ್ನಲ್ಲಿ ಶಾಸ್ತ್ರೀಯ ಸಂಗೀತದ ಪ್ರಯೋಗ ಮಾಡಿ ವಿಶ್ವವಿಖ್ಯಾತರಾಗಿರುವ ಅಭಿಜಿತ್ ಹುಬ್ಬಳ್ಳಿಯ ಕಲಾರಸಿಕರಿಗೆ ಒಂದು ತಾಸು ವಿಶೇಷ ಅನುಭವ ನೀಡಿದರು.
ನಂತರ ಅಜಯ್ ಅವರಿಗೆ ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಇದರ ಬೆನ್ನಲ್ಲೇ ಗಾಯನ ಪ್ರಸ್ತುತಪಡಿಸಿದ ಪೋಹಣಕರ್ ಅವರು ಬೆಹಾಗ್ ಮತ್ತು ಮಿಶ್ರ ಬೈರವಿ ರಾಗ ಪ್ರಸ್ತುತಪಡಿಸಿದರು.
ಶ್ರೋತೃಗಳ ಅಭಿಲಾಷೆಯ ಮೇರೆಗೆ ಪುತ್ರನ ಜೊತೆ ಗಾಯನ ನಡೆಸಿಕೊಟ್ಟರು. ಇಬ್ಬರೂ ಸೇರಿ ಠುಮ್ರಿ ಪ್ರಸ್ತುತಪಡಿಸಿ ಮುಗಿಸಿದಾಗ ಚಪ್ಪಾಳೆಯ ಮಳೆ ಸುರಿಯಿತು. ತಬಲಾದಲ್ಲಿ ರವೀಂದ್ರ ಯಾವಗಲ್ ಮತ್ತು ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಮೆಚ್ಚುಗೆ ಗಳಿಸಿದರು.
ಸಮ್ಮೋಹಗೊಳಿಸಿದ ಮುಂಜಾನೆ ರಾಗಗಳು: ಮಹೋತ್ಸವದ ಸಂಪ್ರದಾಯದಂತೆ ಭಾನುವಾರ ಬೆಳಿಗ್ಗೆ ಗಾಯನ ಆಯೋಜಿಸಲಾಗಿತ್ತು. ಪುಣೆಯ ಆನಂದ ಭಾಟೆ ಅವರು ಮುಂಜಾನೆ ರಾಗಗಳ ಮೂಲಕ ಶ್ರೋತೃಗಳಿಗೆ ರಸದೌತಣ ನೀಡಿದರು.
ಎರಡೂವರೆ ತಾಸು ನಡೆದ ಕಛೇರಿಯಲ್ಲಿ ಮೋಹಕ ಆಲಾಪ್ಗಳು, ಮೈಮನ ಕುಣಿಸಿದ ತಾನ್ಗಳು ಮತ್ತು ರಂಜಿಸಿದ ಸ್ವರ ವಿಸ್ತಾರಗಳು ಸಭಾಂಗಣದಲ್ಲಿ ತುಂಬಿದ್ದವರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದವು.
ಅವರ ಕಛೇರಿ ಆರಂಭಗೊಂಡಿದ್ದು ರಾಮ್ಕಲಿ ರಾಗದೊಂದಿಗೆ. ‘ದರ್ಬಾರ್ ದವಾ...’ವನ್ನು ವಿಳಂಬಿತ್ ಗತ್ನಲ್ಲಿ ಹಾಡಿದ ಅವರು ಮಧುರ ಆಲಾಪಗಳ ಮೂಲಕ ‘ಚೀಸ್’ ಸುಂದರಗೊಳಿಸಿದರು.
ಧೃತ್ ಗತ್ನಲ್ಲಿ ‘ಸಗರಿ ರೆಹನ್ಕೆ ಜಾಗಿ...’ ಹಾಡಿ ಮುಗಿಸಿದಾಗ ಶ್ರೋತೃಗಳು ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದರು.
ನಂತರ ಪ್ರಸ್ತುತಪಡಿಸಿದ್ದು ಮಿಯಾ ಕಿ ತೋಡಿ ರಾಗ. ‘ಏರಿ ಮಾಯೆ ಆಜ್ ಶುಭ ಮಂಗಲ್ ಗಾವೋ...’ವನ್ನು ಧೃತ್ಗತ್, ಮಧ್ಯಲಯದಲ್ಲಿ ಹಾಡಿದರು. ಇದರ ಕೊನೆಯಲ್ಲಿ ‘ಭವಾನಿ ಜಗತ್ ಜನನಿ...ತಾರಿಣಿ ದುಃಖಹಾರಿಣಿ...’ಯನ್ನು ತಾರಕ ಸ್ವರದಲ್ಲಿ ಹಾಡಿದಾಗ ಭಕ್ತಿ ಭಾವ ಉಕ್ಕಿತು.
ಜೋನ್ಪುರಿ ರಾಗದಲ್ಲಿ ಮರಾಠಿ ಅಭಂಗ್ ‘ಇಂದ್ರಾಯಣಿ ರಾಟಿ...ದೇವಚಿ ಆಳಂದಿ...’ ಹಾಡಿದ ಆನಂದ ಭಾಟೆ ಇದರ ಕೊನೆಯಲ್ಲಿ ತಾನ್ಗಳು ಪ್ರಸ್ತುತಪಡಿಸುತ್ತಿದ್ದಂತೆ ಸಂಗೀತ ಪ್ರಿಯರು ಕುಳಿತಲ್ಲೇ ಕುಣಿದರು. ನಂತರ ಮಿಶ್ರ ಭಿಬಾಸ್ನಲ್ಲಿ ಪುರಂದರ ದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ...’ ಪದದ ಮೂಲಕ ವಿಠ್ಠಲ ನಾಮದ ಕಂಪನ್ನು ಸಭಾಂಗಣದ ತುಂಬ ಹರಡಿದರು.
ತಬಲಾದಲ್ಲಿ ಶ್ರೀಧರ ಮಾಂಡ್ರೆ ‘ಮ್ಯಾಜಿಕ್’ ಮಾಡಿದರೆ ಗುರುಪ್ರಸಾದ ಹೆಗಡೆ ಅವರ ಹಾರ್ಮೋನಿಯಂ ವಾದನ, ಕಛೇರಿಯ ಇಂಪು ಹೆಚ್ಚಿಸಿತು.