ಚಾಮರಾಜನಗರ: ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಇರುವ ಗುಂಡ್ಲುಪೇಟೆ ತಾಲ್ಲೂಕಿನ ಹೊಸಹಳ್ಳಿ ಕಾಲೊನಿಯ ರೈತ ಚನ್ನಬಸವಯ್ಯ(55) ಆನೆ ದಾಳಿಗೆ ಸಿಲುಕಿ ಸೋಮವಾರ ಮೃತಪಟ್ಟಿದ್ದಾರೆ.
ಹೊಲದಲ್ಲಿ ಮುಸುಕಿನಜೋಳದ ಕಾವಲು ಕಾಯುತ್ತಿದ್ದ ವೇಳೆ ಆನೆಯು ಏಕಾಏಕಿ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮತ್ತೊಂದು ಪ್ರಕರಣ
ಬಹಿರ್ದೆಸೆಗೆ ಹೋದ ವೇಳೆ ಆನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ತಮಿಳುನಾಡು ಗಡಿ ಭಾಗದಲ್ಲಿರುವ ಎತ್ತುಗಟ್ಟಿ ಬೆಟ್ಟದ ಬಸವೇಶ್ವರ ದೇವಸ್ಥಾನದ ಹಿಂಭಾಗ ನಡೆದಿದೆ. ಚಾಮರಾಜನಗರ ತಾಲ್ಲೂಕಿನ ಯಾನಗಳ್ಳಿಯ ಮಹದೇವನಾಯ್ಕ(60) ಮೃತಪಟ್ಟವರು.
ಅವರು ದೇಗುಲದ ಬಳಿ ಪೂಜಾ ಸಾಮಗ್ರಿ ಮಾರಾಟ ಮಾಡುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಚಾಮರಾಜನಗರ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಸಂತ್ರಸ್ತ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಶೀಘ್ರವೇ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.