ಅಜ್ಜಂಪುರ: ಮಾನವನ ಜೀವ ಅಮೂಲ್ಯವಾಗಿದ್ದು, ಅದಕ್ಕೆ ಬೆಲೆ ಕಟ್ಟಲಾಗದು ಹಾಗೂ ಅದಕ್ಕಿಂತ ಯಾವುದೂ ದೊಡ್ಡದಿಲ್ಲ. ಕಾರ್ಮಿಕರು ಕೆಲಸದಲ್ಲಿ ಸದಾ ಏಕಾಗ್ರತೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಡಿವೈಎಸ್ಪಿ ರಾಜನ್ ವೈ. ನಾಯಕ್ ಸಲಹೆ ನೀಡಿದರು.
ಅಜ್ಜಂಪುರದ ಬುಕ್ಕಾಂಬುಧಿ ರಸ್ತೆಯ ಭದ್ರಾ ಮೇಲ್ದಂಡೆ ಕಚೇರಿಯಲ್ಲಿ ಸೋಮವಾರ ನಡೆದ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು. ಎಸ್ಎನ್ಸಿ ವ್ಯವಸ್ಥಾಪಕ ಉಮೇಶ್ ಕೊಣ್ಣೂರು ಮಾತನಾಡಿ, ಎಲ್ಲದರಲ್ಲೂ ಸುರಕ್ಷತೆ ಅಗತ್ಯ. ನಾವು ಸೇವಿಸುವ ನೀರು, ಗಾಳಿ, ಆಹಾರದ ಮೇಲೂ ನಾವು ನಿಗಾ ಇರಿಸಿಕೊಳ್ಳಬೇಕು. ಅದ ರಲ್ಲೂ ಗಣಿಗಾರಿಕೆ, ಸುರಂಗ ಮಾರ್ಗ ನಿರ್ಮಾಣ, ಮೇಲ್ಸೇತುವೆ ನಿರ್ಮಾಣ, ನೀರಿನೊಂದಿಗೆ ಕಾಮಗಾರಿಯಂತಹ ಅಪಾಯಕಾರಿ ಕೆಲಸದ ವೇಳೆ ಹೆಚ್ಚು ಜಾಗೃತರಾಗಿರಬೇಕು ಎಂದು ತಿಳಿಸಿದರು.
ಪ್ರತೀ ವರ್ಷ ಜನವರಿ 2 ರಿಂದ 9 ರವರೆಗೆ ಎಸ್ಎನ್ಸಿ ಸುರಕ್ಷಾ ಸಪ್ತಾಹ ಹಮ್ಮಿಕೊಳ್ಳುತ್ತಾ ಬಂದಿದ್ದು, ಪ್ರತೀ ಸಲವೂ ಗ್ರಾಮ ಸ್ವಚ್ಛ-ನೈರ್ಮಲ್ಯ, ಸಸ್ಯ ಗಳನ್ನು ನೆಡುವಿಕೆ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿ ದ್ದೇವೆ ಎಂದು ಎಸ್ಎನ್ಸಿ ಎಜಿಎಂ. ಜಯರಾಮ್ ಹೆಗಡೆ ಹೇಳಿದರು.
ಕಾರ್ಯಕ್ರಮದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 52 ಜನ ರಕ್ತದಾನ ಮಾಡಿ ದರು. ಶಿವಮೊಗ್ಗದ ರೋಟರಿ ರಕ್ತ ನಿಧಿಗೆ ರಕ್ತವನ್ನು ಹಸ್ತಾಂತರಿಸಲಾಯಿತು. ಕರ್ನಾಟಕ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್ ಶಶಿಧರ್, ಎಸ್ಎನ್ಸಿ ಎಜಿಎಂ ಚಂದ್ರಶೇಖರ್, ಪ್ರಾಜೆಕ್ಟ್ ಡೈರೆಕ್ಟರ್ ಶೈಲೇಂದ್ರ ಭಟ್, ವಿನೋದ್ ಮತ್ತಿತರರಿದ್ದರು.