ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಕಡವೆ ಶಿಕಾರಿ: ಸಮಗ್ರ ತನಿಖೆಗೆ ಆಗ್ರಹ

ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ– ಆರೋಪಿಗಳ ವಿರುದ್ಧ ಕ್ರಮಕ್ಕೆ ಎಬಿವಿಪಿ ಆಗ್ರಹ
Last Updated 10 ಜನವರಿ 2017, 7:25 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ಪ್ರವಾಸಿಧಾಮ ಕೆಮ್ಮಣ್ಣುಗುಂಡಿ ಮಾರ್ಗದ ನೆತ್ತಿಚೌಕ ಅರಣ್ಯ ಪ್ರದೇಶದಲ್ಲಿ ವೃತ್ತಿಪರ ಬೇಟೆಗಾರರು ಜೋಡಿ ಕಡವೆಗಳನ್ನು ಬೇಟೆಯಾಡಿರುವ ಪ್ರಕರಣದ ಬಗ್ಗೆ ರಾಜ್ಯ ವನ್ಯ ಜೀವಿ ಮಂಡಳಿಯ ಮುಖ್ಯ ಸ್ಥರೂ ಆಗಿರುವ ಮುಖ್ಯಮಂತ್ರಿಗಳು ಸಮಗ್ರ ತನಿಖೆಗೆ ಆದೇಶ ನೀಡಬೇಕು ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ನಾಗೇಶ ಅಂಗೀರಸ ಒತ್ತಾಯಿಸಿದ್ದಾರೆ.
 
ನಗರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಮುಚ್ಚಿ ಹಾಕಲು ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳು ಮತ್ತು ಪ್ರಭಾವಿ ರಾಜಕಾರಣಿಗಳು ಹುನ್ನಾರ ನಡೆಸುತ್ತಿದ್ದಾರೆ. ಮಲೆನಾಡಿನ ಕಾಡು ಬರಿದು ಮಾಡುತ್ತಿರುವ ಬೇಟೆ ಮಾಫಿಯಾ ವಿರುದ್ಧ ಅರಣ್ಯ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಕಾಡು, ವನ್ಯ ಜೀವಿಗಳು ಬರಿದಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
 
ಜೋಡಿ ಕಡವೆ ಬೇಟೆ ಪ್ರಕರಣದ ಗಂಭೀರತೆಯನ್ನು ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಹಾಗೂ ಲೋಕಸಭೆಯ ಪರಿಸರದ ಮೇಲಿನ ಉನ್ನತಾಧಿಕಾರದ ಸಮಿತಿಗೆ ಹಾಗೂ ಚೆನ್ನೈನಲ್ಲಿರುವ ಸುಪ್ರಿಂ ಕೋರ್ಟ್‌ನ ಹಸಿರು ಪೀಠಕ್ಕೂ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
 
 ಭದ್ರಾ ಅಭಯಾರಣ್ಯದಲ್ಲಿ ಬೇಟೆ ಮಾಫಿಯಾ ಸಕ್ರಿಯವಾಗಿದೆ. ಕಡವೆ ಬೇಟೆ ಪ್ರಕರಣದಲ್ಲಿಸಿಕ್ಕಿಬಿದ್ದ ಆರೋಪಿ ಗಳನ್ನು ಹಿರಿಯ ಅರಣ್ಯಾಧಿಕಾರಿಗಳು ಜೈಲಿನಲ್ಲಿ ಭೇಟಿಯಾಗಲು ದಾವಿಸಿರು ವುದು ಶಂಕೆಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದ್ದಾರೆ.
 
ಉಡುಪಿ, ಮಂಗಳೂರು, ಶಿವ ಮೊಗ್ಗ, ಚಿಕ್ಕಮಗಳುರಿನ ಕೆಲ ಪ್ರತಿಷ್ಟಿತ ರೆಸಾರ್ಟ್‌ಗಳ ಜತೆಗೆ ವೃತ್ತಿಪರ ಬೇಟೆ ಗಾರರ ಸಂಪರ್ಕ ಜಾಲ ಹರಡಿ ಕೊಂಡಿದೆ. ಕೆಲ ರೆಸಾರ್ಟ್‌, ಹೋಟೆಲ್‌ ಗಳಲ್ಲಿ ವಾರದಲ್ಲಿ ಎರಡು ದಿನ ಕಾಡುಕೋಣದ ಬಾಡೂಟ ದೊರ ಕುತ್ತದೆ. 10 ಕ್ವಿಂಟಲ್ ತೂಗುವ ಕಾಡು ಕೋಣ ಶಿಕಾರಿಯಲ್ಲಿ ಬೇಟೆಗಾರರಿಗೆ ಕನಿಷ್ಠ ₹3ಲಕ್ಷದವರೆಗೆ ಲಾಭ ದೊರಕಿ ದರೆ, ಒಂದು ಕಾಟಿ ಮಾಂಸದಿಂದ ಕೆಲ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ₹10 ಲಕ್ಷದವರೆಗೂ ವ್ಯವಹಾರ ನಡೆಸುತ್ತಿವೆ ಎಂದು ಆರೋಪಿಸಿದರು.
 
ನರಸಿಂಹರಾಜಪುರ ತಾಲ್ಲೂಕಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ ತಂತಿ ಬೇಲಿಗೆ ಕಾಡಾನೆ ಸಿಕ್ಕಿ ಮೃತಪಟ್ಟು 2 ವರ್ಷಗಳೇ ಕಳೆದಿವೆ. ಆನೆ ಕಳೇಬರಹವನ್ನು ವ್ಯವಸ್ಥಿತವಾಗಿ ಸುಟ್ಟುಹಾಕಿ ಗುಂಡಿತೆಗೆದು ಮುಚ್ಚ ಲಾಗಿತ್ತು. ಊರಿನವರ ಒತ್ತಡದಿಂದ ಅರಣ್ಯ ಇಲಾಖೆ ಈ ಪ್ರಕರಣ ಬಯಲಿಗೆಳೆದಿತ್ತು. ಪ್ರಥಮ ಮಾಹಿತಿ ವರದಿ ದಾಖಲಾದರೂ ಇನ್ನೂ ಸರಿ ಯಾದ ಚಾರ್ಜ್ ಶೀಟ್ ಸಲ್ಲಿಕೆ ಯಾಗಿಲ್ಲ. ರಾಜಕೀಯ ಒತ್ತಡದಿಂದ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರ ದಿಂದ ಅಪರಾಧಿಗಳು ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ದೂರಿದರು.
 
**
ಬೀದಿಗಿಳಿದ ವಿದ್ಯಾರ್ಥಿಗಳು
ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ಮಾರ್ಗದ ನೆತ್ತಿಚೌಕ ಅರಣ್ಯ ಪ್ರದೇಶದಲ್ಲಿ ಜೋಡಿ ಕಡವೆ ಬೇಟೆ ಯಾಡಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಸೋಮವಾರ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
 
ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ರಾಷ್ಟ್ರ ಭಕ್ತಿಯ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು.
 
 ಹೊಸ ವರ್ಷಾಚರಣೆ ದಿನದಂದು ಜೋಡಿ ಕಡವೆ ಬೇಟೆಯಾಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಮತ್ತು ತಲೆ ಮರೆಸಿಕೊಂಡಿರುವ ಆರೋಪಿ ಗಳನ್ನು ರಕ್ಷಿಸಲು ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ. ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ಪ್ರಕರಣ ಮುಚ್ಚಿಹಾಕಲು ಅವಕಾಶ ನೀಡಬಾರದು. ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯದೆ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ಮುಖಂಡರಾದ ಶಶಿ ಆಲ್ದೂರು, ಗಗನ್‌ ಕಡೂರು ಸೇರಿದಂತೆ ಹಲವು ವಿದ್ಯಾರ್ಥಿ ಮುಖಂಡರು  ನೇತೃತ್ವ ವಹಿಸಿದ್ದರು.
 
 
**
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಾಖೆಯ ಸಾಮಾಜಿಕ ಜವಾಬ್ದಾರಿಗ ನುಗುಣವಾಗಿ ಕಡವೆ ಬೇಟೆ ಜಾಲದ ಬೆನ್ನು ಬಿದ್ದಿದ್ದನ್ನು ಕಂಡು ಅವರ ಸ್ಥೈರ್ಯ ಕೆಡಿಸುವ ಕಾರ್ಯ ನಡೆದಿದೆ
-ನಾಗೇಶ್‌ ಅಂಗೀರಸ, ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT