ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಮಕ್ಕಳಿಗೂ ‘ಆಧಾರ್’ ಕಡ್ಡಾಯ

ನೆರೆಹೊರೆ ಶಾಲೆ ಆಯ್ಕೆಗೆ ‘ಆಧಾರ್‌’ನಲ್ಲಿರುವ ವಿಳಾಸವೇ ಮಾನದಂಡ
Last Updated 10 ಜನವರಿ 2017, 7:49 IST
ಅಕ್ಷರ ಗಾತ್ರ
ದಾವಣಗೆರೆ: ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು (ಆರ್‌.ಟಿ.ಇ) ಕಾಯ್ದೆಯಡಿ ಪೋಷಕರು ತಮ್ಮ ಮಗುವಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಪಡೆಯಲು ಯೋಚಿಸುತ್ತಿದ್ದರೆ ಮೊದಲು ಮಕ್ಕಳಿಗೆ ‘ಆಧಾರ್‌’ ಕಾರ್ಡ್‌ ಮಾಡಿಸಿಕೊಳ್ಳಿ. ಇನ್ನು ಮುಂದೆ ‘ಆಧಾರ್‌’ ಕಾರ್ಡ್‌ ಇಲ್ಲದಿದ್ದರೆ ಹಾಗೂ ನೀವು ವಾಸವಿರುವ ವಿಳಾಸ ಅದರಲ್ಲಿ ನಮೂದಾಗಿಲ್ಲದಿದ್ದರೆ ನಿಮ್ಮ ಮಗುವಿಗೆ ಆರ್‌.ಟಿ.ಇ ಅಡಿ ಶಾಲೆಗೆ ಪ್ರವೇಶ ಸಿಗುವುದಿಲ್ಲ.
 
2017–18ನೇ ಶೈಕ್ಷಣಿಕ ಸಾಲಿನಿಂದ ಆರ್‌.ಟಿ.ಇ ಕಾಯ್ದೆಯಡಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.
 
ಎಲ್‌.ಕೆ.ಜಿಗೆ ಪ್ರವೇಶ ಪಡೆಯುವ ಮೂರುವರೆ ವರ್ಷ ಮೇಲ್ಪಟ್ಟ ಮಕ್ಕಳು ಹಾಗೂ ಒಂದನೇ ತರಗತಿಗೆ ಪ್ರವೇಶ ಪಡೆಯುವ ಐದೂವರೆ ವರ್ಷ ಮೇಲ್ಪಟ್ಟ ಮಕ್ಕಳು ಆಧಾರ್‌ ಕಾರ್ಡ್‌ ಹೊಂದಬೇಕಾಗಿದೆ. 
 
ಜ. 15ರಿಂದ ಅರ್ಜಿ ಸ್ವೀಕಾರ:  ಜನವರಿ 15ರಿಂದ ಫೆಬ್ರುವರಿ 15ರ ಅವಧಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ವೆಬ್ ಪೋರ್ಟಲ್‌ ಮೂಲಕ ಆರ್‌.ಟಿ.ಇ. ಅಡಿ ಮಕ್ಕಳ ದಾಖಲಾತಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 
 
ಆಧಾರ್‌ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಮಗುವಿನ ಹಾಗೂ ಒಬ್ಬ ಪೋಷಕರ (ತಂದೆ ಅಥವಾ ತಾಯಿ) ಆಧಾರ್‌ ಸಂಖ್ಯೆ, ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ವಿಳಾಸದ ಮಾಹಿತಿಯನ್ನು ಆರ್‌.ಟಿ.ಇ. ಅಡಿ ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಸಲ್ಲಿಸುವ ಅರ್ಜಿಯಲ್ಲಿ ದಾಖಲಿಸಬೇಕು. ಅರ್ಜಿಯಲ್ಲಿ ನಮೂದಿಸಿದ ವಿವರಗಳನ್ನು ‘ಆಧಾರ್‌’ನಲ್ಲಿರುವ ಮಾಹಿತಿಯೊಂದಿಗೆ ತಾಳೆ ಹಾಕಿ ದೃಢೀಕರಿಸಲಾಗುತ್ತದೆ. ಅರ್ಜಿದಾರರು ನೀಡಿದ ಮಾಹಿತಿ ತಾಳೆಯಾಗದೇ ಇದ್ದರೆ ಅಂತಹ ಅರ್ಜಿಗಳು ತಿರಸ್ಕೃತಗೊಳ್ಳಲಿದೆ. 
 
ಮಗು ಮತ್ತು ಪೋಷಕರ ಬಳಿ ‘ಆಧಾರ್‌’ ಇಲ್ಲದೇ ಇದ್ದರೆ ತಕ್ಷಣ ನೋಂದಣಿ ಮಾಡಿಕೊಳ್ಳಬೇಕು. ಆಧಾರ್‌ ನೋಂದಣಿ ನಂತರವೂ ಆಧಾರ್‌ ಸಂಖ್ಯೆ ಲಭ್ಯವಾಗದಿದ್ದರೆ, ಮಗುವಿನ ತಂದೆ ಅಥವಾ ತಾಯಿ ಪೈಕಿ ಒಬ್ಬರ ಆಧಾರ್‌ ನೋಂದಣಿ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿಯನ್ನು ಅರ್ಜಿ ಸಲ್ಲಿಸುವ ಸದರ್ಭ ಸಲ್ಲಿಸಬೇಕು. ಶಿಕ್ಷಣ ಇಲಾಖೆಯ ಪೋರ್ಟಲ್‌ನಲ್ಲಿ ಪೋಷಕರ ಮತದಾರರ ಗುರುತಿನ ಚೀಟಿಯ ಪ್ರತಿ, ಅವರ ಮತ್ತು ಮಗುವಿನ ಆಧಾರ್‌ ಸಂಖ್ಯೆ ಪಡೆಯಲು ನೋಂದಾ ಯಿಸಿದ ಸ್ವೀಕೃತಿಯ ಪ್ರತಿಯನ್ನು ಅಪ್‌ಲೋಡ್‌ ಮಾಡಬೇಕು. ಆಗ ಮಾತ್ರ ದಾಖಲಾತಿಗೆ ನಡೆಸುವ ಲಾಟರಿ ಪ್ರಕ್ರಿಯೆಗೆ ಅರ್ಜಿಯನ್ನು ಅಂಗೀಕರಿಸಲಾಗುತ್ತದೆ. ಪಾಲಕರು ಬಳಿಕ ಆಧಾರ್‌ ಸಂಖ್ಯೆಯನ್ನು ಸಲ್ಲಿಸಿದರೆ ಮಾತ್ರ ಲಾಟರಿ ಪ್ರಕ್ರಿಯೆಯಿಂದ ಶಾಲೆಗೆ ಮಾಡಿದ ದಾಖಲಾತಿಯನ್ನು ಅಧಿಕೃತ ಗೊಳಿಸಲಾಗುತ್ತದೆ.
 
**
ವಿಳಾಸ ಪರೀಕ್ಷಿಸಿಕೊಳ್ಳಿ...
‘ಅರ್ಜಿದಾರರ ಆಧಾರ್‌ ಕಾರ್ಡ್‌ನಲ್ಲಿ ನಮೂದಾಗಿರುವ ವಿಳಾಸವನ್ನು ಪರಿಗಣಿಸಿ, ನೆರೆಹೊರೆಯ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಪೋಷಕರು ತಮ್ಮ ಮತ್ತು ಮಗುವಿನ ಆಧಾರ್‌ ಕಾರ್ಡ್‌ನಲ್ಲಿ ಹೆಸರು, ಜನ್ಮದಿನಾಂಕ, ಲಿಂಗ ಮತ್ತು ವಿಳಾಸಗಳ ವಿವರ ಸರಿಯಾಗಿದೆಯೇ ಎಂಬುದನ್ನು ಮೊದಲೇ ಪರೀಕ್ಷಿಸಿಕೊಳ್ಳಬೇಕು. ವಿವರ ತಪ್ಪಾಗಿದ್ದರೆ, ಕೂಡಲೇ ಆಧಾರ್‌ ನೋಂದಣಿ ಕೇಂದ್ರಕ್ಕೆ ತೆರಳಿ ಸರಿಪಡಿಸಿಕೊಳ್ಳಬೇಕು’ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. 
 
ಹಲವು ಬಡ ಕುಟುಂಬಗಳು ಗ್ರಾಮೀಣ  ಪ್ರದೇಶಗಳಿಂದ ಉದ್ಯೋಗ ಹುಡುಕಿಕೊಂಡು ನಗರಕ್ಕೆ ವಲಸೆ ಬಂದು ನೆಲೆಸಿವೆ. ಅಂಥ ಕುಟುಂಬದ ಸದಸ್ಯರ ಬಳಿ ತಮ್ಮ ಊರಿನ ವಿಳಾಸವಿರುವ ‘ಆಧಾರ್‌’ ಕಾರ್ಡ್‌ ಇದೆ. ತಮ್ಮ ಹಾಗೂ ಮಕ್ಕಳ ಆಧಾರ್‌ ಕಾರ್ಡ್‌ನಲ್ಲಿ ವಿಳಾಸ ಬದಲಾಯಿ ಸಿಕೊಳ್ಳದೇ ಇದ್ದರೆ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಓದಿಸುವ ಸೌಲಭ್ಯದಿಂದ ವಂಚಿತಗೊಳ್ಳಲಿ ದ್ದಾರೆ.
 
‘ಆಧಾರ್‌ ಕಾರ್ಡ್‌ನಲ್ಲಿ ನಮೂದಾಗಿರುವ ವಿಳಾಸವನ್ನೇ ನೆರೆಹೊರೆಯ ಶಾಲೆಯನ್ನು ಆಯ್ಕೆ ಮಾಡಲು ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿದೆ. ಈ ಮೊದಲು ನೆರೆಹೊರೆಯ ಶಾಲೆಯನ್ನು ಆಯಾ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗೆ ಸೀಮಿ ತಗೊಳಿಸಲಾಗಿತ್ತು. ಮುಂದಿನ ಶೈಕ್ಷ ಣಿಕ ವರ್ಷದಲ್ಲಿ ವಾರ್ಡ್‌ ಬದಲು ಗ್ರಾ.ಪಂ., ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಕ್ಕೆ ವಿಸ್ತರಿಸಲಾಗಿದೆ. ಹೀಗಾಗಿ ಆ ವ್ಯಾಪ್ತಿಯೊಳಗಿನ ವಿಳಾಸ ವಿವರ ಆಧಾರ್‌ ಕಾರ್ಡ್‌ನಲ್ಲಿ ಇಲ್ಲದೇ ಇದ್ದರೆ, ತಕ್ಷಣವೇ ಬದಲಾಯಿಸಿಕೊಳ್ಳಬೇಕು’ ಎಂದು ಡಿ.ಡಿ.ಪಿ.ಐ ಕಚೇರಿಯ ಶಿಕ್ಷಣಾಧಿಕಾರಿ ಜಿ.ಎಂ.ಬಸವಲಿಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
 
**
 ಬೇರೆ ಶಾಲೆಯಲ್ಲಿ ಸಾಮಾನ್ಯ ಕೋಟಾದಡಿ ಮೊದಲೇ ಪ್ರವೇಶ ಪಡೆದರೆ, ಅಂಥ ಮಕ್ಕಳಿಗೆ ಆರ್‌.ಟಿ.ಇ.ಯಡಿ ಪ್ರವೇಶ ಪಡೆಯಲು ಇನ್ನು ಮುಂದೆ ಅವಕಾಶ ಇರುವುದಿಲ್ಲ.
-ಜಿ.ಎಂ. ಬಸವಲಿಂಗಪ್ಪ
ಶಿಕ್ಷಣಾಧಿಕಾರಿ, ದಾವಣಗೆರೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT