ಮೇಲುಕೋಟ: ಇಲ್ಲಿನ ಪಂಚಕಲ್ಯಾಣಿಯ ಮೆಟ್ಟಿಲುಗಳ ಮೇಲೆ ಬೆಳೆದಿದ್ದ ಗಿಡಗಂಟಿ ಹಾಗೂ ಸುತ್ತಮುತ್ತಲೂ ಬಿದ್ದಿದ್ದ ತ್ಯಾಜ್ಯವನ್ನು ನೂರಾರು ಮಹಿಳೆಯರು ಸೋಮವಾರ ಸ್ವಚ್ಛಗೊಳಿಸಿದರು.
ಪೊರಕೆ, ಬುಟ್ಟಿಗಳನ್ನು ಹಿಡಿದು ಬೆಳಿಗ್ಗೆಯೇ ಬಂದ ಮಹಿಳೆಯರು ಗಬ್ಬೆದ್ದು ಹೋಗಿದ್ದ ಕಲ್ಯಾಣಿ ಪರಸರವನ್ನು ಸ್ವಚ್ಛಗೊಳಿಸಿದರು. ಕಲ್ಯಾಣ ಸ್ವಚ್ಛತೆ ನಂತರ, ಯೋಗಾನರಸಿಂಹಸ್ವಾಮಿ ಬೆಟ್ಟದ ಮೆಟ್ಟಿಲುಗಳನ್ನೂ ಶುಚಿಗೊಳಿಸಿದರು. ಅಲ್ಲಿ ಸಂಗ್ರಹವಾದ ಕಸವನ್ನು ಟ್ರ್ಯಾಕ್ಟರ್ ಮೂಲಕ ಹೊರಕ್ಕೆ ಸಾಗಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಗತಿಬಂದು ಮಹಿಳಾ ಸ್ವಸಹಾಯ ಸಂಘಗಳ ಮೇಲುಕೋಟೆ ವೃತ್ತದ 45 ಸ್ವಯಂ ಸೇವಾ ಮಹಿಳಾ ಸಂಘದ ಕಾರ್ಯಕರ್ತೆಯರು ಈ ಶ್ರಮದಾನದಲ್ಲಿ ಪಾಲ್ಗೊಂಡರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ‘ಸ್ವಚ್ಛ ಭಾರತ, ನಿರ್ಮಲ ಶ್ರದ್ಧಾಕೇಂದ್ರಗಳು’ ಪರಿಕಲ್ಪನೆ ಅಡಿ ಈ ಅಭಿಯಾನ ನಡೆಯಿತು.
ಪ್ರತಿ ತಿಂಗಳು ತಮ್ಮ ಸಮಯವನ್ನು ಮೇಲುಕೋಟೆಗೆ ಮೀಸಲಿಟ್ಟು ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪ್ರತಿಜ್ಞೆ ಮಾಡಿದರು. ಇದಕ್ಕಾಗಿ 12 ಮಂದಿಯ ಸಮಿತಿಯನ್ನೂ ರಚಿಸಲಾಯಿತು.
ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮನೆ, ಬೀದಿಗಳು ಹಾಗೂ ಗ್ರಾಮದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. ಭಾಗವಹಿಸಿದ್ದರು.
ಮೇಲುಕೋಟೆ ಗ್ರಾಮ ಪಂಚಾಯಿತಿ ಹಾಗೂ ಚೆಲುವನಾರಾಯಣಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದರು.