ಶಿಕಾರಿಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳ ವಿರುದ್ಧ ಎಬಿವಿಪಿ ಪದಾಧಿಕಾರಿಗಳು ಮಂಗಳವಾರ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಸ್ನಾತಕೋತ್ತರ ವಿಭಾಗ ಪ್ರಮುಖ್ ಬೆಣ್ಣೆ ಪ್ರವೀಣ್್ ಮಾತನಾಡಿ, ‘ಕಾಲೇಜಿನಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ. ಆದರೂ ಕಾಲೇಜಿನಲ್ಲಿನ ಕೊಳವೆಬಾವಿ ಪಂಪ್ ಮಾತ್ರ ಹಲವು ಬಾರಿ ಕೆಟ್ಟು ಹೋಗಿ ದುರಸ್ತಿ ಮಾಡಿಸುವ ಉದ್ದೇಶ ಏನು’ ಎಂದು ಪ್ರಶ್ನಿಸಿದರು.
‘ಸರ್ಕಾರಿ ಕಾಲೇಜು ಆಗಿದ್ದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿದೆ. ಸಾವಿರಾರು ರೂಪಾಯಿ ನೀಡಿ ಸಮವಸ್ತ್ರ ಕೊಳ್ಳಲು ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ಇದಕ್ಕಾಗಿ ಕಾಲೇಜಿನಲ್ಲಿ ಹಣ ಸಂಗ್ರಹಿಸಿದ್ದಾರೆ. ಸಮವಸ್ತ್ರ ಬಟ್ಟೆ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಈ ಕುರಿತು ಆಡಳಿತ ಮಂಡಳಿ ಮೌನ ವಹಿಸಿರುವುದು ಅನುಮಾನ ಮೂಡಿಸಿದೆ’ ಎಂದು ಆರೋಪಿಸಿದರು.
‘ಕಾಲೇಜು ಆವರಣದಲ್ಲಿ ಸೈಕಲ್, ಮೊಬೈಲ್್, ಪರ್ಸ್ ಕಳ್ಳತನ ಆಗಿದ್ದರೂ ಪ್ರಾಂಶುಪಾಲರು ಕ್ರಮ ಕೈಗೊಂಡಿಲ್ಲ. ಕಾಲೇಜು ಹೊರತರುವ ವಾರ್ಷಿಕ ಸಂಚಿಕೆ ಕುಮುದ ಈಗಾಗಲೇ ಎರಡು ಬಾರಿ ಮುದ್ರಣಗೊಂಡಿದ್ದರೂ, ಅದನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಿಲ್ಲ. ಈ ಪುಸ್ತಕಕ್ಕಾಗಿ ಪ್ರತಿ ವಿದ್ಯಾರ್ಥಿ ಹಣ ನೀಡಿದ್ದಾನೆ’ ಎಂದರು.
‘ಕಾಲೇಜು ಅಭಿವೃದ್ಧಿ ಶುಲ್ಕವಾಗಿ ಹಣ ಪಡೆಯುವ ರಸೀದಿ ಹಿಂದೆ ₹ 100 ಪಡೆದಿರುವುದಾಗಿ ಬರೆದು ಕೊಡುತ್ತಾರೆ ಅದನ್ನು ಯಾವ ಉದ್ದೇಶಕ್ಕಾಗಿ ಪಡೆಯ
ಲಾಗುತ್ತದೆ ಎಂದು ತಿಳಿಸಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿ ಈ ವಿಷಯಗಳ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಮೇಲೆ ಬೀಳುವ ಹಣದ ಹೊರೆಯನ್ನು ತಪ್ಪಿಸ
ಬೇಕು. ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ವೈ. ರಾಘವೇಂದ್ರ ಅವರು ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಕರೆದು ಚರ್ಚಿಸಬೇಕು’ ಎಂದು ಮನವಿ ಮಾಡಿದರು.
ಪೊಲೀಸರ ಭೇಟಿ: ಪ್ರಾಂಶುಪಾಲರ ಕರೆ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಪೊಲೀಸರು ಅನುಮತಿ ಇಲ್ಲದೆ ಕಾಲೇಜಿನಲ್ಲಿ ಪ್ರತಿಭಟನೆ ಮಾಡಬಾರದು ಎಂದು ಪದಾಧಿಕಾರಿಗಳಿಗೆ ಸಲಹೆ ನೀಡಿದರು. ನಂತರ ಪದಾಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಶೇಖರ್ ಮಠದ್ ಹಾಗೂ ಸ.ನ.ಮಂಜಪ್ಪ ಅವರಿಗೆ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಸಲ್ಲಿಸಿದರು. ಎಬಿವಿಪಿ ಪದಾಧಿಕಾರಿಗಳಾದ ಪವನ್, ಚೇತನ್, ಸಿದ್ದು, ಸಂತೋಷ್, ಪುನೀತ್, ಸಂಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.