ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ 30ನೇ ಶರಣ ಮೇಳ

Last Updated 11 ಜನವರಿ 2017, 6:36 IST
ಅಕ್ಷರ ಗಾತ್ರ

ಕೂಡಲಸಂಗಮ: ಸುಕ್ಷೇತ್ರ ಕೂಡಲಸಂಗಮದಲ್ಲಿ ಜನವರಿ 11 ರಿಂದ 15ರ ವೆರೆಗೆ 5 ದಿನಗಳ ಕಾಲ ನಡೆಯುವ 30ನೇ ಶರಣ ಮೇಳಕ್ಕೆ ಬಸವ ಧರ್ಮ ಪೀಠದ ಆವರಣ ಸಂಪೂರ್ಣ ಸಿದ್ಧಗೊಂಡಿದ್ದು ಮಂಗಳವಾರ ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

ಕೂಡಲಸಂಗಮ ಬಸವ ಧರ್ಮ ಪೀಠದ ಮಾಹಾದೇಶ್ವರ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿ, 30ನೇ ಶರಣ ಮೇಳದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಬರುವ ಭಕ್ತರಿಗೆ  ವಸತಿ ವ್ಯವಸ್ಥೆಯನ್ನು ಬಸವ ಧರ್ಮಪೀಠದ ಅಕ್ಕನಾಗಲಾಂಬಿಕ, ಸರ್ವಜ್ಞ, ಸಿದ್ದರಾಮೇಶ್ವರ, ಅಕ್ಕಮಹಾದೇವಿ, ಕಲ್ಯಾಣಮ್ಮ, ನಿಲಾಂಬಿಕೆ, ಹರಳಯ್ಯ,ಹಡಪದ ಅಪ್ಪಣ್ಣ, ಶಾಂತರಸ ಶರಣ ಧಾಮದಲ್ಲಿ 500 ಕೊಠಡಿಗಳು ಹಾಗೂ ಬಸವ ಧರ್ಮಪೀಠದ ಆವರಣದಲ್ಲಿ ಸುಮಾರು ಸಾವಿರದಷ್ಟು ತಾತ್ಕಾಲಿಕ ವಸತಿ ಟೆಂಟ್‌ಗಳನ್ನು ಸಿದ್ಧಪಡಿಸಲಾಗಿದೆ. 150 ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗಿದೆ.

8 ಎಕರೆ ಪ್ರದೇಶದಲ್ಲಿ ವೇದಿಕೆ, 4 ಎಕರೆ ಪ್ರದೇಶದಲ್ಲಿ ಊಟದ ಮನೆ, 10 ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ವಸತಿ ಟೆಂಟ್‌ಗಳು ನಿರ್ಮಿಸಲಾಗಿದೆ. 50 ಸಾವಿರ ಮಂದಿ ಕುರ್ಚಿಯ ಮೇಲೆ ಕುಳಿತು ಒಂದು ಲಕ್ಷಕ್ಕೂ ಅಧಿಕ ಜನ ನೆಲದ ಮೇಲೆ ಹಾಕುವ ಮ್ಯಾಟ್ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಸಮಾರಂಭಕ್ಕೆ ಬರುವ ಭಕ್ತರಿಗೆ ಉತ್ತರ ಕರ್ನಾಟಕದ ಬಿಳಿಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಲಾಡು, ಹುಗ್ಗಿ, ಶಾವಿಗೆ ಪಾಯಸ, ಮುಂತಾದ ಸಿಹಿತಿಂಡಿಗಳ ಜೊತೆಗೆ ಮೊಸರು, ಮಜ್ಜೆಗೆ ಕೊಡಲಾಗುವುದು. 50 ಬಾಣಸಿಗರು, 200 ಜನ ಸಹಾಯಕರು ಅಡುಗೆ ತಯಾರಿಯಲ್ಲಿ ತೊಡಗಿದ್ದು 5 ಸಾವಿರ ರಾಷ್ಟ್ರೀಯ ಬಸವ ಬಸವ ದಳದ ಕಾರ್ಯಕರ್ತರು ಪ್ರಸಾದ ಬಡಿಸಲು ಪಾಳೆ ಪದ್ದತಿಯಲ್ಲಿ ನಿಯೋಜನೆ ಮಾಡಿದೆ.

ಒಂದು ತಿಂಗಳಿಂದ ರೊಟ್ಟಿಗಳನ್ನು ತಯಾರಿಸಿದ್ದು, 20 ಲಕ್ಷ ಬಿಳಿ ಜೋಳದ ರೊಟ್ಟಿ, 10 ಲಕ್ಷಕ್ಕೂ ಅಧಿಕ ಸಜ್ಜೆ ರೊಟ್ಟಿ ತಯಾರಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ಅಪಾರ ಪ್ರಮಾಣದ ರೊಟ್ಟಿಗಳನ್ನು ತರುವರು ಎಂದು ದಾಸೋಹ ವ್ಯವಸ್ಥಾಪಕ ಮಲ್ಲಿಕಾರ್ಜುನ ಪಲದಿನ್ನಿ ಎಂದರು

ಒಂದು ತಿಂಗಳಿಂದ ವೇದಿಕೆ ನಿರ್ಮಾಣದ ಕಾರ್ಯ ನಡೆದಿದೆ. ಎರಡು ಲಕ್ಷ ಜನ ಏಕಕಾಲದಲ್ಲಿ ಕುಳಿತುಕೊಂಡು ನೋಡುವಂತಹ ವೇದಿಕೆಯನ್ನು ನಿರ್ಮಿಸಲಾಗಿದೆ.
ಶರಣ ಮೇಳಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಬಾಗಲಕೋಟೆ, ಇಳಕಲ್‌, ಹುನಗುಂದ, ವಿಜಯಪುರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದವರು ಹೆಚ್ಚುವರಿ ಬಸ್‌ಗಳನ್ನು ಬಿಡುವಂತೆ ತಿಳಿಸಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಚಂದ್ರಶೇಖರಾನಂದ ಸ್ವಾಮೀಜಿ ಹೇಳಿದರು.

ಶರಣಮೇಳದ ಮೊದಲನೆ ದಿನ ಬುಧವಾರ ವಚನ ಸಾಹಿತ್ಯದ ಬಹುಮುಖಿ ಚಿಂತನಗೋಷ್ಠಿ ಸಮಾರಂಭ ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗುವುದು. ಸಮಾರಂಭದ ಉದ್ಘಾಟನೆಯನ್ನು ಸಂಕೇಶ್ವರ್ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಶಿವನಗೌಡ ಪಾಟೀಲ ನೆರವೇರಿಸುವರು.

ಸಾನ್ನಿಧ್ಯವನ್ನು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ವಹಿಸುವರು. ಸಿ.ಬಿ.ಬೇವನೂರ್, ವೀರಣ್ಣ ಲಿಂಗಾಯತ, ಕರಿಬಸಪ್ಪ ಕೋರಿಶೆಟ್ಟರ್, ಬೆಂಗಳೂರಿನ ಹಿರಿಯ ನ್ಯಾಯವಾದಿ ಜೆ.ಜೈರಾಜ, ಸಚ್ಚಿದಾನಂದ ಚಟ್ನಳ್ಳಿ, ಎಂ.ಎಂ. ಹಿರಿಲಿಂಗಣ್ಣನವರ, ಬಸವಂತರಾವ್ ಏರಿ, ಕೆ.ವಿರೇಶ, ಕೆ.ಬಸವರಾಜಪ್ಪ ಭಾಗವಹಿಸುವರು. ಸಂಜೆ 6.30ಕ್ಕೆ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟದ ರೂಪರೇಷೆ  ವಿಷಯ ಕುರಿತು ಚರ್ಚೆ ನಡೆಯುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT