ಶಿರಗುಪ್ಪಿ(ಹುಬ್ಬಳ್ಳಿ): ಬರದಿಂದ ಕಂಗೆಟ್ಟಿರುವ ಶಿರಗುಪ್ಪಿ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ದೊರೆಯದ ಕಾರಣಕ್ಕೆ ಕೃಷಿ ಕೂಲಿಕಾರ್ಮಿಕರು ಪರಿತಪಿಸತೊಡಗಿದ್ದಾರೆ.
ಕೂಲಿಕಾರ್ಮಿಕ ಮಹಿಳೆಯರು ಕಡಿಮೆ ಕೂಲಿಗೆ ರೈತರ ಹೊಲದಲ್ಲಿ ಮೆಣಸಿನಕಾಯಿ ಸ್ವಚ್ಛಮಾಡಲು, ಹತ್ತಿ ಬಿಡಿಸಲು ಹೋಗುತ್ತಿದ್ದಾರೆ. ಪುರುಷರು ಕೆಲಸ ಅರಸಿ ಹುಬ್ಬಳ್ಳಿ ನಗರಕ್ಕೆ ಹೋಗುತ್ತಿದ್ದಾರೆ.
‘ಪಂಚಾಯ್ತಿಯಲ್ಲಿ ಉದ್ಯೋಗ ಕೆಲಸ ಸಿಗದ ಕಾರಣಕ್ಕೆ ರೈತರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದೇವೆ. ದಿನಕ್ಕೆ ರೂ 100 ಕೊಡುತ್ತಾರೆ. ಈ ಕೂಲಿ ಯಾವುದಕ್ಕೂ ಸಾಲುವುದಿಲ್ಲ’ ಎಂದು ಗ್ರಾಮದ ಕೂಲಿಕಾರ್ಮಿಕರಾದ ಮಹಾದೇವಪ್ಪ ಮುಂದಿನಮನಿ, ಮಲ್ಲಮ್ಮ ದಿವಾನದ ಅಲವತ್ತುಕೊಂಡರು.
ಯಾರೊಬ್ಬರೂ ಕೆಲಸ ಕೇಳುತ್ತಿಲ್ಲ: ‘ಗ್ರಾಮದಲ್ಲಿ 855 ಜಾಬ್ ಕಾರ್ಡ್ಗಳಿವೆ. ಏಪ್ರಿಲ್ನಿಂದ ಡಿಸೆಂಬರ್ ವರೆಗೆ 9,998 ಜನರಿಗೆ ಉದ್ಯೋಗ ನೀಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಚಿತ್ರಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ನಡೆದಿದೆ. ಶೀಘ್ರದಲ್ಲೇ ಗ್ರಾಮದ ಗಟಾರ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಇದುವರೆಗೂ ಯಾರೊಬ್ಬರೂ ಕೆಲಸ ಕೇಳಿಕೊಂಡು ಪಂಚಾಯಿತಿಗೆ ಬಂದಿಲ್ಲ. ಕೆಲಸ ಕೇಳಿಕೊಂಡು ಬಂದರೆ ನೀಡುತ್ತೇವೆ. ಸದ್ಯ ಯಾವುದೇ ಕೆಲಸ ನಡೆಯುತ್ತಿಲ್ಲ’ ಎಂದು ಹೇಳಿದರು.