ಬೆಳಗಾವಿ: ಇಲ್ಲಿನ ನೆಹರೂ ನಗರ ಮುಖ್ಯರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿ ಯರ ವಿದ್ಯಾರ್ಥಿ ನಿಲಯ ಉತ್ತಮ ನಿರ್ವ ಹಣೆಯಿಂದ ಗಮನಸೆಳೆದಿದೆ. ಇಲಾಖೆಯಿಂದ ಜಿಲ್ಲಾ ಮಟ್ಟದ ಪ್ರಥಮ ಪ್ರಶಸ್ತಿಗೂ ಭಾಜನವಾಗಿದೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರಿಗೆ– 22 (ಮೆಟ್ರಿಕ್ ಪೂರ್ವ 15, ಮೆಟ್ರಿಕ್ ನಂತರ 7), ಪರಿಶಿಷ್ಟ ಪಂಗಡದವರಿಗೆ ಮೂರು (ಮೆಟ್ರಿಕ್ ಪೂರ್ವ 2, ಮೆಟ್ರಿಕ್್ ನಂತರ 1) ಬಾಲಕಿಯರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಉತ್ತಮವಾಗಿರುವ ಸದಾ ಶಿವನಗರದ ಹಾಸ್ಟೆಲ್ ಮಾದರಿಯಾಗಿದೆ. ಇಲಾಖೆಯು ಕಳೆದ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
3ನೇ ತರಗತಿಯಿಂದ 10ನೇ ತರಗತಿವರೆಗೆ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 157 ವಿದ್ಯಾರ್ಥಿನಿಯರು ಇದ್ದಾರೆ. 32 ಕೊಠಡಿಗಳಿವೆ. 80 ಮಕ್ಕಳಿಗೆ ಪ್ರವೇಶ ಮಂಜೂರಾಗಿದ್ದರೂ 157 ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅರ್ಜಿ ಹಾಕಿದ ಎಲ್ಲ ಮಕ್ಕಳಿಗೂ ಪ್ರವೇಶ ನೀಡಬೇಕು ಎಂದು ಇಲಾಖೆಯು ಹೇಳಿರುವುದರಿಂದ ಎಲ್ಲರಿಗೂ ಪ್ರವೇಶ ಕೊಡಲಾಗಿದೆ.
ಅಧಿಕಾರಿಗಳಿಂದಲೂ ಮೆಚ್ಚುಗೆ:‘ಈ ಹಾಸ್ಟೆಲ್ ಇತರ ಹಾಸ್ಟೆಲ್ಗಳಿಗೆ ಮಾದರಿ ಯಾಗಿದೆ. ಮಕ್ಕಳಿಗೆ ಶೈಕ್ಷಣಿಕ ಚಟು ವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಟೂತ್ ಪೇಸ್ಟ್, ಸಾಬೂನು, ಕೊಬ್ಬರಿ ಎಣ್ಣೆ ಮೊದಲಾದವನ್ನು ಒಳಗೊಂಡ ‘ಸಿರಿಗಂಧ ಶುಚಿಸಂಭ್ರಮ’ ಕಿಟ್ ನೀಡಲಾಗುತ್ತಿದೆ. ಚೆನ್ನಾಗಿ ನಿರ್ವಹಿಸ ಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ತಿಳಿಸಿದರು.
ವಸತಿನಿಲಯಕ್ಕೆ ಭೇಟಿ ನೀಡು ತ್ತಿದ್ದಂತೆಯೇ ಅಲ್ಲಿನ ಸ್ವಚ್ಛತೆ ಗಮನ ಸೆಳೆಯಿತು. ಮಹಾತ್ಮರು ಹಾಗೂ ವಿವಿಧ ಧರ್ಮಗಳ ಮಹಾಪುರುಷರ ಭಾವ ಚಿತ್ರಗಳನ್ನು ಅಳವಡಿಸಿ, ಅದಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಪಡೆಯಲು ಬಯೋಮೆಟ್ರಿಕ್ ಅಳವಡಿಸಲಾಗಿದೆ. ಅರೆಕಾಲಿಕ ಬೋಧಕರಿಂದ ನಿತ್ಯವೂ ಒಂದು ಗಂಟೆ ಕಾಲ ಪಾಠದ ವ್ಯವಸ್ಥೆ ಮಾಡಲಾಗಿದೆ. ಹೊರಗುತ್ತಿಗೆ ಮೇಲೆ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಆವರಣದಲ್ಲಿ ತೆಂಗಿನ ಗಿಡ, ದಾಳಿಂಬೆ, ಚಿಕ್ಕು, ಪಪ್ಪಾಯ ಮತ್ತಿತರ ಗಿಡಗಳನ್ನು ನೆಟ್ಟು ಚಿಕ್ಕದಾದ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಮಕ್ಕಳಿಗೆ ಮನರಂಜನೆ ಹಾಗೂ ಮಾಹಿತಿಗಾಗಿ ಟಿ.ವಿ ವ್ಯವಸ್ಥೆ ಮಾಡಲಾಗಿದೆ.
ಹಬ್ಬ ಆಚರಣೆ: ‘ಸರ್ಕಾರದಿಂದ ಆಹಾರ ಪದಾರ್ಥ ಪೂರೈಕೆಯಲ್ಲೇನೂ ತೊಂದರೆ ಇಲ್ಲ. ವಾಟರ್ ಪ್ಯೂರಿಫೈಯರ್ ಇದೆ. 4 ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತದೆ. ಸಾಕಾಗದಿದ್ದರೆ ಟ್ಯಾಂಕರ್ ನೀರು ತರಿಸಿಕೊಳ್ಳುತ್ತೇವೆ. ಇಲ್ಲಿಯೇ ಕೊಳವೆ ಬಾವಿ ಕೊರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಿಗದಿಗಿಂತ ಹೆಚ್ಚಿನ ಮಕ್ಕಳಿದ್ದರೂ ತೊಂದರೆಯಾಗದಂತೆ ನಿಗಾ ವಹಿಸಿದ್ದೇನೆ. ಬೆಳಿಗ್ಗೆ 7ಕ್ಕೆ ಬಂದರೆ ರಾತ್ರಿವರೆಗೂ ಇಲ್ಲಿಯೇ ಇರುತ್ತೇನೆ.
ಮಕ್ಕಳ ಯೋಗಕ್ಷೇಮ ನೋಡಿ ಕೊಳ್ಳುತ್ತೇನೆ. ಪೋಷಕರಿಂದ ದೂರ ವಿರುವ ಮಕ್ಕಳಿಗೆ ಬೇಸರವಾಗಬಾರದು ಎಂದು ಹಬ್ಬಗಳನ್ನೂ ಇಲ್ಲಿ ಆಚರಿಸಿ, ಸಿಹಿ ವಿತರಿಸುತ್ತೇವೆ. ಇಲ್ಲಿದ್ದ ಟಿ.ವಿ ಕೆಟ್ಟಿತ್ತು. ಮನೆಯ ಟಿ.ವಿ ತಂದಿಟ್ಟಿದ್ದೇನೆ. ಮಕ್ಕಳಿಗೆ ಸ್ವಲ್ಪಕಾಲ ಮನರಂಜನೆ ಇರುವುದು ಒಳ್ಳೆಯದು. ವಾರ್ತೆಗಳನ್ನು ನೋಡಿದರೆ ಅವರಿಗೂ ಪ್ರಚಲಿತ ವಿದ್ಯಮಾನದ ಮಾಹಿತಿ ದೊರೆಯುತ್ತದೆ. ಮಹಾನಗರ ಪಾಲಿಕೆಯಿಂದ ಶೇ 22.75 ಅನು ದಾನದಲ್ಲಿ ಟಿ.ವಿ ನೀಡುವಂತೆ ಮನವಿ ಸಲ್ಲಿಸಿದ್ದೇವೆ’ ಎಂದು ವಾರ್ಡನ್್ ಎಂ.ಎಸ್. ಕಾಂಬ್ಳೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಲ್ಲಿ ಮಕ್ಕಳು ಹೆಚ್ಚುವರಿ ಇದ್ದರೂ, ಸೌಲಭ್ಯದಲ್ಲಿ ತೊಂದರೆ ಇಲ್ಲ. ಚಿಕ್ಕ ಮಕ್ಕಳು ಮಂಚದ ಮೇಲಿಂದ ಬೀಳುವ ಸಂಭವವಿರುತ್ತದೆ. ಹೀಗಾಗಿ, ಅವರಿಗೆ ಚಾಪೆ–ಜಮಖಾನ ನೀಡಿ ಕೆಳಗೆಯೇ ಮಲಗಿಸುತ್ತೇವೆ. ಮಕ್ಕಳನ್ನು ನಮ್ಮವ ರಂತೆ ನೋಡಿಕೊಳ್ಳುವುದರಲ್ಲಿ ಖುಷಿ ಇದೆ’ ಎಂದು ವಾರ್ಡನ್ ಹೇಳಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸುವ ಮೊದಲಿಗೆ ಎಲ್ಲ ವಿದ್ಯಾರ್ಥಿನಿಯರಿಗೂ ಪ್ರಬಂಧ, ರಸಪ್ರಶ್ನೆ, ಭಾಷಣ, ರಂಗೋಲಿ ಬಿಡಿಸುವುದು ಮೊದಲಾದ ಸ್ಪರ್ಧೆಯನ್ನು ಪ್ರತಿವರ್ಷವೂ ಇಲ್ಲಿ ಆಯೋಜಿಸಲಾಗುತ್ತಿದೆ.
‘ಇಲ್ಲಿ ಊಟ, ತಿಂಡಿ ಚೆನ್ನಾಗಿ ಸಿಗುತ್ತಿದೆ. ಶಾಲೆಯಿಂದ ಬಂದ ಮೇಲೆ ಸಂಜೆ ಪಾಠವನ್ನೂ ಮಾಡಿಸಲಾಗುತ್ತಿದೆ. ಇದರಿಂದ ಅನುಕೂಲವಾಗಿದೆ. ವಾರ್ಡನ್ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂದು ಬಾಲಕಿಯರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.