ಮೈಸೂರು: ಭವಿಷ್ಯನಿಧಿಯ ಮೇಲಿನ ಬಡ್ಡಿಯ ದರವನ್ನು 8.65ರಿಂದ 8.8ಕ್ಕೆ ಏರಿಸಲು ಒತ್ತಾಯಿಸಬೇಕೆಂದು ಎಐಟಿಯುಸಿ (ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್) ಪ್ರತಿನಿಧಿ ಸಮಾವೇಶದಲ್ಲಿ ನಿರ್ಣಯಿಸಲಾಯಿತು.
ನಗರದಲ್ಲಿ 2 ದಿನಗಳವರೆಗೆ ನಡೆದ ಎಐಟಿಯುಸಿ 10ನೇ ಜಿಲ್ಲಾ ಸಮ್ಮೇಳನದ ಸಮಾರೋಪದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕನಿಷ್ಠ ₹ 3 ಸಾವಿರ ಪಿಂಚಣಿ ಜಾರಿಯಾಗಬೇಕು, ಅಸಂಘಟಿತ ಕಾರ್ಮಿಕರಿಗೂ ಮಾಸಿಕ ವೇತನವನ್ನು ಕನಿಷ್ಠ ₹ 18 ಸಾವಿರ ನೀಡಬೇಕು, ಎಐಟಿಯುಸಿ ಮುಖಂಡರಾದ ಕೆ.ವೆಂಕಟರಾಮಯ್ಯ ಸ್ಮರಣಾರ್ಥ ಮೇಟಗಳ್ಳಿ ಕೈಗಾರಿಕಾ ಪ್ರದೇಶದ ವರ್ತುಲ ರಸ್ತೆಯ ವೃತ್ತಕ್ಕೆ ಕೆ.ವೆಂಕಟರಾಮಯ್ಯ ವೃತ್ತ ಎಂದು ಹೆಸರಿಡಬೇಕು, ಕಾವೇರಿ ಹಾಗೂ ಮಹದಾಯಿ ನೀರು ಹಂಚಿಕೆಯ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಸಮಗ್ರ ಜಲನೀತಿ ಜಾರಿಗೆ ತರಬೇಕು, ಕಾರ್ಮಿಕರಿಗೆ ನೆರವಾಗುವ ಸಮುದಾಯ ಭವನ ನಿರ್ಮಿಸಬೇಕು, ಕೆಆರ್ಎಸ್ ರಸ್ತೆಯಲ್ಲಿ ಇಎಸ್ಐ ಆಸ್ಪತ್ರೆಯ ಕಟ್ಟಡ ಕೂಡಲೇ ಆರಂಭಿಸಬೇಕು, ಕೆಐಎಡಿಬಿ ವತಿಯಿಂದ ಮಂಜೂರಾಗಿರುವ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸಲು ಅವಕಾಶ ನೀಡಬಾರದು ಎಂದು ನಿರ್ಣಯಿಸಲಾಯಿತು.
ಇದೇ ಸಮಾವೇಶದಲ್ಲಿ 3 ವರ್ಷಗಳ ಅವಧಿಗೆ ಜಿಲ್ಲೆಯ ಪದಾಧಿಕಾರಿಗಳನ್ನು ನೇಮಿಸಲಾಯಿತು. ರಾಜು (ಅಧ್ಯಕ್ಷ), ಇಕ್ಬಾಲ್ ಪಾಷಾ, ಜಗನ್ನಾಥ್, ಗೋವಿಂದ, ಸೋಮರಾಜೇ ಅರಸ್ (ಉಪಾಧ್ಯಕ್ಷರು), ಎಚ್.ಆರ್.ಶೇಷಾದ್ರಿ (ಪ್ರಧಾನ ಕಾರ್ಯದರ್ಶಿ), ಎಚ್.ಬಿ.ರಾಮಕೃಷ್ಣ (ಉ.ಪ್ರ. ಕಾರ್ಯದರ್ಶಿ), ಕೆ.ಎಸ್.ರೇವಣ್ಣ, ಬಸವರಾಜು, ಎಂ.ಶಿವಣ್ಣ (ಕಾರ್ಯದರ್ಶಿಗಳು), ಡಿ.ಸುರೇಶ್ (ಖಜಾಂಚಿ).