ಉಡುಪಿ: ಉಡುಪಿ ನಗರಸಭೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಶೇ 24.10 ನಿಧಿಯಡಿ 76 ವಿದ್ಯಾರ್ಥಿಗಳಿಗೆ ₹ 4.80 ಲಕ್ಷ ವಿದ್ಯಾರ್ಥಿ ವೇತನ, ಇಬ್ಬರಿಗೆ ಪಕ್ಕಾ ಮನೆ ನಿರ್ಮಾಣಕ್ಕೆ ₹2 ಲಕ್ಷ, 10 ಮಂದಿಗೆ ಮನೆ ದುರಸ್ತಿಗೆ ₹2 ಲಕ್ಷ, 17 ಮಂದಿಗೆ ಅಡುಗೆ ಅನಿಲ ಸಂಪರ್ಕಕ್ಕೆ ಸಹಾಯಧನ ₹60 ಸಾವಿರ, ಶೌಚಾಲಯ ನಿರ್ಮಾಣಕ್ಕಾಗಿ ₹2.66 ಲಕ್ಷ ಹಾಗೂ ಆರೋಗ್ಯ ವಿಮೆಗಾಗಿ ₹5ಲಕ್ಷ ಮೊತ್ತದ ಸವಲತ್ತುಗಳನ್ನು ವಿತರಿಸಿದರು.
ಬಡ ಜನರ ಕಲ್ಯಾಣ ಕಾರ್ಯಕ್ರಮ ಗಳಿಗಾಗಿ ಮೀಸಲಾದ ಶೇ 7.25 ನಿಧಿಯಡಿ 70 ವಿದ್ಯಾರ್ಥಿಗಳಿಗೆ ₹4.9 ಲಕ್ಷ ವಿದ್ಯಾರ್ಥಿವೇತನ, 7 ಮಂದಿಗೆ ಮನೆ ದುರಸ್ತಿಗೆ ₹1.40 ಲಕ್ಷ, 20 ಮಂದಿಗೆ ಅಡುಗೆ ಅನಿಲ ಸಂಪರ್ಕಕ್ಕೆ ಸಹಾಯಧನ ₹84 ಸಾವಿರ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ₹3.20 ಲಕ್ಷ ಮೊತ್ತದ ಸವಲತ್ತು ನೀಡಿದರು.
ಹಾಗೆಯೇ ಅಂಬೇಡ್ಕರ್ ನಿವಾಸ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ 68 ಮಂದಿಗೆ ಮನೆ ನಿರ್ಮಾ ಣಕ್ಕಾಗಿ ₹2.24 ಕೋಟಿ ಮೊತ್ತದ ಚೆಕ್ಗಳನ್ನು ಸಚಿವರು ವಿತರಿಸಿದರು.
ನಂತರ ಮಾತನಾಡಿದ ಸಚಿವರು, ದೇಶದಲ್ಲಿ ಬಡತನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಇತರೆ ಸಮುದಾಯದ ಅಭಿವೃದ್ಧಿಗಾಗಿ ಕಡ್ಡಾಯ ವಾಗಿ ಮೀಸಲಿಟ್ಟಿರುವ ನಿಧಿಯಿಂದ ಈ ಸೌಲಭ್ಯಗಳನ್ನು ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ತಮಗೆ ನೀಡಿರುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಹಾಗೂ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು. ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿದರು.