ಮುಳಬಾಗಿಲು: ‘ಕರಾಟೆ ಕಲಿಯಲು ಮಕ್ಕಳಿಗೆ ಪೋಷಕರು ಸಹಕರಿಸಬೇಕು. ಇದು ಸ್ವ ರಕ್ಷಣೆಗೆ ಸಹಕಾರಿಯಾಗಲಿದೆ’ ಎಂದು ಇಂಡಿಯನ್ ಕೋಶಿಕಿ ಶಿಟೋರಿಯು ಕರಾಟೆ ಡೂ ಅಸೋಷೇಶಿಯನ್ ಶಾಲೆ ಸಂಸ್ಥಾಪಕ ನಾಗೇಶ್ ಹೇಳಿದರು.
ನಗರದ ಆನಂದ ವಿದ್ಯಾ ಶಾಲೆಯಲ್ಲಿ ಇಂಡಿಯನ್ ಕೋಶಿಕಿ ಶಿಟೋರಿಯು ಕರಾಟೆ ಡೂ ಅಸೋಸಿಯನ್ ವತಿಯಿಂದ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
‘ಕರಾಟೆ ಕಲಿಯಲು ಎಳೆ ಮಕ್ಕಳ ವಯಸ್ಸು ಸೂಕ್ತವಾದುದು. ಅಲ್ಲದೆ ಚಿಕ್ಕ ವಯಸ್ಸಿನ ಮಕ್ಕಳು ಕರಾಟೆ ಕಲಿಯುವುದು ತುಂಬಾ ಸುಲಭ. ಕೆಲ ಪೋಷಕರು ಕರಾಟೆ ಬಗ್ಗೆ ಆತಂಕದ ಮನೋಭಾವ ಹೊಂದಿದ್ದಾರೆ. ಕರಾಟೆ ನಾವು ಮಾಡುವ ವ್ಯಾಯಾಮದಂತೆ ಇದನ್ನು ಅರಿತು ಕೊಳ್ಳಬೇಕಾಗಿದೆ’ ಎಂದರು.
‘ಕರಾಟೆ ಮಾಡುವುದರಿಂದ ದೈಹಿಕ ಆರೋಗ್ಯ ಸುಧಾರಿಸುತ್ತದೆ. ಮಾನಸಿಕ ಒತ್ತಡ, ದೇಹದ ಕೆಲ ಅಂಗಗಳಲ್ಲಿನ ನೋವುಗಳಿಂದ ಪಾರಾಗಲು ಸಾಧ್ಯವಾಗುತ್ತದೆ. ಅಲ್ಲದೆ, ಶತೃಗಳಿಂದ ತಪ್ಪಿಸಿಕೊಂಡು ಹೊರಬರಲು ಶಕ್ತಿ ತುಂಬುವ ಚಾಣಾಕ್ಷ ವಿದ್ಯೆ ಕರಾಟೆಯಾಗಿದೆ’ ಎಂದರು.
‘ಕರಾಟೆ ಕಲಿಯುವುದು ಶಾಲಾ ಮಕ್ಕಳಿಗೆ ಅವಶ್ಯಕತೆ ಇದೆ. ಏಕೆಂದರೆ ಮಕ್ಕಳ ಅಪಹರಣ, ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ, ಅತ್ಯಾಚಾರ ಮೊದಲಾದವುಗಳಿಂದ ತಪ್ಪಿಸಿಕೊಳ್ಳಲು ಕರಾಟೆ ಸಹಾಯಕ್ಕೆ ಬರುತ್ತದೆ’ ಎಂದು ತಿಳಿಸಿದರು.
23 ಮಂದಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎ.ಎನ್.ಅರ್ಚನ, ಕೆ.ಬಿ.ರುಚಿತ, ಎಸ್.ಸುಹಾಸ್ ರಾಘವ್, ಎಸ್.ಬಾಲಾಜಿ, ಟಿ.ಪಿ.ರಿಷಿ, ಎಸ್.ಉಮಾಶಂಕರ್ರೆಡ್ಡಿ, ಜಿ.ಜಶ್ವಂತ್ರೆಡ್ಡಿ, ಎಸ್.ಕಾರ್ತಿಕ್, ದಿವ್ಯಶ್ರೀ, ಎನ್.ಸುನೀಲ್ಕುಮಾರ್, ಧನ್ರಾಜ್, ಬಿ.ಸುದರ್ಶನ್, ಶ್ರೀಶಾಂತ್, ಎನ್.ಕೀರ್ತನ, ರಕ್ಷಿತ, ಕೆ.ಎಸ್.ಮೊಹಿತ್, ವಳ್ಳೀಷ್, ಹೇಮಂತ್, ತ್ರಿಶಾಂತ್, ಲೇಲಿತ್ ಸಾಗರ್, ಚಂದನ್, ವಿನಯ್ಪ್ರಸಾದ್, ಲಿಖಿತ್ಕುಮಾರ್ ಆಯ್ಕೆಯಾಗಿದ್ದಾರೆ.